ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆಗೆ ಶಾಸಕ ಎನ್.ಮಹೇಶ್ ಆಕ್ಷೇಪ
‘ಸಿದ್ದರಾಮಯ್ಯನವರೆ ನಮ್ಮ ಮುಖ್ಯಮಂತ್ರಿ’ ಹೇಳಿಕೆ
![ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆಗೆ ಶಾಸಕ ಎನ್.ಮಹೇಶ್ ಆಕ್ಷೇಪ ಸಚಿವ ಪುಟ್ಟರಂಗಶೆಟ್ಟಿ ಹೇಳಿಕೆಗೆ ಶಾಸಕ ಎನ್.ಮಹೇಶ್ ಆಕ್ಷೇಪ](https://www.varthabharati.in/sites/default/files/images/articles/2019/01/31/175627.jpg)
ಬೆಂಗಳೂರು, ಜ. 31: ಮೈತ್ರಿ ಸರಕಾರದಲ್ಲಿ ಸಂಪುಟ ಸಚಿವರಾಗಿರುವ ಪುಟ್ಟರಂಗಶೆಟ್ಟಿ ‘ಸಿದ್ದರಾಮಯ್ಯನವರೇ ನಮ್ಮ ಮುಖ್ಯಮಂತ್ರಿ’ ಎಂಬ ಹೇಳಿಕೆ ಅವರ ಘನತೆಗೆ ಶೋಭೆ ತರುವುದಿಲ್ಲ ಎಂದು ಮಾಜಿ ಸಚಿವ ಎನ್.ಮಹೇಶ್ ಇಂದಿಲ್ಲಿ ಹೇಳಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಸಂಪುಟ ಸಚಿವರಾಗಿರುವವರೇ ಇಂತಹ ಹೇಳಿಕೆ ನೀಡುವುದು ಅವರ ಸಚಿವ ಸ್ಥಾನಕ್ಕೆ ತಕ್ಕುದಲ್ಲ. ಪುಟ್ಟರಂಗಶೆಟ್ಟಿ ಅವರನ್ನು ಸಚಿವರನ್ನಾಗಿ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಿದ್ದು ಸಿಎಂ ಕುಮಾರಸ್ವಾಮಿಯೇ ಹೊರತು ಸಿದ್ದರಾಮಯ್ಯನವರಲ್ಲ ಎಂದರು.
ಸಚಿವರು, ಶಾಸಕರು ಸಿಎಂ ಬಗ್ಗೆ ಮನಸೋ ಇಚ್ಛೆ ಹೇಳಿಕೆ ನೀಡುವುದು ಶೋಭೆ ತರುವುದಿಲ್ಲ. ಇಂತಹ ಮುಜುಗರ ಸೃಷ್ಟಿಸುವುದು ಸರಿಯಲ್ಲ ಎಂದು ಆಕ್ಷೇಪಿಸಿದ ಮಹೇಶ್, ಮನಸೋ ಇಚ್ಛೆ ಹೇಳಿಕೆ ನೀಡುವ ಸಚಿವರು ಮತ್ತು ಶಾಸಕರನ್ನು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾದ ಸಿದ್ದರಾಮಯ್ಯನವರು ನಿಯಂತ್ರಿಸಬೇಕು ಎಂದು ಆಗ್ರಹಿಸಿದರು.
ಸ್ಪರ್ಧಿಸುವುದಿಲ್ಲ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ ತಾನು ಸ್ಪರ್ಧಿಸುವುದಿಲ್ಲ. ಚುನಾವಣಾ ಮೈತ್ರಿ ಮತ್ತು ಬಿಎಸ್ಪಿ ಸ್ಪರ್ಧೆಯ ಬಗ್ಗೆ ಪಕ್ಷದ ಸಭೆಯಲ್ಲಿ ತೀರ್ಮಾನ ಮಾಡಲಾಗುವುದು ಎಂದ ಅವರು, ಲೋಕಸಭೆ ಚುನಾವಣೆಯಲ್ಲಿ ಮೈತ್ರಿ ಅಗತ್ಯ ಎಂದರು.
‘ಮುಖ್ಯಮಂತ್ರಿ ಕುಮಾರಸ್ವಾಮಿ ನೇತೃತ್ವದ ಸಚಿವ ಸಂಪುಟಕ್ಕೆ ತಾನು ಮರಳಿ ಸೇರ್ಪಡೆಯಾಗಬೇಕೆಂಬ ಇಚ್ಛೆ ನನಗಿದೆ. ಈ ಸಂಬಂಧ ಬಿಎಸ್ಪಿ ವರಿಷ್ಠೆ ಬೆಹನ್ಜೀ ಆದೇಶ ನೀಡಬೇಕು. ತಾನು ಶಾಸಕನಾಗಿಯೇ ಇದ್ದು, ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಶ್ರಮಿಸುವೆ’
-ಎನ್.ಮಹೇಶ್ಮಾಜಿ, ಸಚಿವ