ಬೆಂಗಳೂರು: ಮಹಿಳೆಯ ಸರ ಕದ್ದು ಪರಾರಿ
ಬೆಂಗಳೂರು, ಜ.31: ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ರಿಮೋಟ್ ಖರೀದಿಸುವ ಸೋಗಿನಲ್ಲಿ ತೆರಳಿದ್ದ ದುಷ್ಕರ್ಮಿಯೊಬ್ಬ ಮಹಿಳೆಯ ಮೈಮೇಲಿದ್ದ ಲಕ್ಷಾಂತರ ರೂ.ಬೆಲೆ ಬಾಳುವ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ.
ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿರುವ ಮೊಬೈಲ್ ಬಿಡಿಭಾಗಗಳ ಮಾರಾಟದ ಅಂಗಡಿಯಲ್ಲಿ ಕೃತ್ಯ ನಡೆದಿದ್ದು, ಮೊಬೈಲ್ ಅಂಗಡಿಯ ಮಾಲಕ ರಘುನಾಯಕ್ ಎಂಬುವವರ ಪತ್ನಿ ದಿವ್ಯ ಮೈಮೇಲಿದ್ದ 1.80 ಲಕ್ಷ ರೂ. ಮೌಲ್ಯದ ಚಿನ್ನದಸರ ಕಳೆದುಕೊಂಡ ಮಹಿಳೆಯಾಗಿದ್ದಾರೆ.
ರಘುನಾಯಕ್ ಯಶವಂತಪುರದ ತ್ರಿವೇಣಿ ರಸ್ತೆಯಲ್ಲಿ ಮನೆಗೆ ಹೊಂದಿಕೊಂಡಿರುವ ಮಳಿಗೆಯಲ್ಲಿ ಮೊಬೈಲ್ ಸರ್ವೀಸ್ ಮತ್ತು ಡಿಟಿಎಚ್ಗೆ ಸಂಬಂಧಿಸಿದ ಬಿಡಿಭಾಗಗಳ ಮಾರಾಟ ಮಾಡುತ್ತಿದ್ದರು. ಪ್ರತಿನಿತ್ಯ ಮಧ್ಯಾಹ್ನ ಊಟದ ಸಮಯದ ವೇಳೆ ರಘುನಾಯಕ್ ಅವರು ಮನೆಗೆ ತೆರಳುತ್ತಿದ್ದು, ಈ ಸಂದರ್ಭದಲ್ಲಿ ಆತನ ಪತ್ನಿ ದಿವ್ಯ ಅವರು ಅಂಗಡಿಯ ವ್ಯಾಪಾರ ನೋಡಿಕೊಳ್ಳುತ್ತಿದ್ದರು.
ಎಂದಿನಂತೆ ಜ.28ರಂದು ಮಧ್ಯಾಹ್ನ 1.30ರ ವೇಳೆ ಅಂಗಡಿಯಲ್ಲಿದ್ದಾಗ ಬೈಕ್ನಲ್ಲಿ ಬಂದ ದುಷ್ಕರ್ಮಿಯೊಬ್ಬ ಡಿಟಿಎಚ್ ರಿಮೋಟ್ ಕೊಡುವಂತೆ ಕೇಳಿದ್ದಾನೆ. ಅಂಗಡಿಯ ಶೋಕೇಸ್ನಲ್ಲಿದ್ದ ರಿಮೋಟ್ ತೆಗೆದು ತೋರಿಸಲು ಮುಂದಾದ ಮಳೆಯ ಕೊರಳಿಗೆ ಕೈ ಹಾಕಿರುವ ದುಷ್ಕರ್ಮಿ 60 ಗ್ರಾಂ ಚಿನ್ನದ ಸರ ದೋಚಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಯಶವಂತಪುರ ಪೊಲೀಸರು ಪ್ರಕರಣ ಪ್ರಕರಣ ದಾಖಲಿಸಿಕೊಂಡು, ಅಂಗಡಿಯ ಸುತ್ತ ಮುತ್ತಲಿನ ಸ್ಥಳದಲ್ಲಿ ಅಳವಡಿಸಿರುವ ಸಿಸಿಟಿವಿ ಕ್ಯಾಮೆರಾದಲ್ಲಿ ದುಷ್ಕರ್ಮಿಯ ಮುಖ ಚಹರೆ ಸೆರೆಯಾಗಿದೆ. ಇದರ ಅನ್ವಯ ಆರೋಪಿ ಪತ್ತೆಗೆ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.