ರಾಜೀವ್ ಸಕ್ಸೇನಾ, ದೀಪಕ್ ತಲ್ವಾರ್ ದುಬೈಯಿಂದ ಗಡಿಪಾರು: ಜಾರಿ ನಿರ್ದೇಶನಾಲಯದಿಂದ ಬಂಧನ
![ರಾಜೀವ್ ಸಕ್ಸೇನಾ, ದೀಪಕ್ ತಲ್ವಾರ್ ದುಬೈಯಿಂದ ಗಡಿಪಾರು: ಜಾರಿ ನಿರ್ದೇಶನಾಲಯದಿಂದ ಬಂಧನ ರಾಜೀವ್ ಸಕ್ಸೇನಾ, ದೀಪಕ್ ತಲ್ವಾರ್ ದುಬೈಯಿಂದ ಗಡಿಪಾರು: ಜಾರಿ ನಿರ್ದೇಶನಾಲಯದಿಂದ ಬಂಧನ](https://www.varthabharati.in/sites/default/files/images/articles/2019/01/31/175647.jpg)
ರಾಜೀವ್ ಸಕ್ಸೇನಾ
ಹೊಸದಿಲ್ಲಿ, ಜ. 31: ವಿವಿಐಪಿ ಹೆಲಿಕಾಪ್ಟರ್ ಪ್ರಕರಣದಲ್ಲಿ ಬೇಕಾಗಿದ್ದ ದುಬೈ ಮೂಲದ ಉದ್ಯಮಿ ಹಾಗೂ ಕಾರ್ಪೊರೇಟ್ ಏವಿಯೇಶನ್ ಲಾಬಿ ನಡೆಸುವ ವ್ಯಕ್ತಿಯನ್ನು ಭಾರತಕ್ಕೆ ಗಡಿಪಾರು ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
3,600 ಕೋ. ರೂ.ನ ಅಗಸ್ಟಾ ವೆಸ್ಟ್ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್ ಹಣ ವಂಚನೆ ಪ್ರಕರಣದ ರಾಜೀವ್ ಶಮ್ಶೇರ್ ಬಹದ್ದೂರ್ ಸಕ್ಸೇನಾ ಹಾಗೂ ಲಾಬಿ ನಡೆಸುವ ದೀಪಕ್ ತಲ್ವಾರ್ ಜಾರಿ ನಿರ್ದೇಶನಾಲಯಕ್ಕೆ ಬೇಕಾಗಿದ್ದ ವ್ಯಕ್ತಿಯಾಗಿದ್ದ. ವಿದೇಶಿ ನಿಧಿ ಮಾರ್ಗದ ಮೂಲಕ ಪಡೆದುಕೊಂಡು 90 ಕೋಟಿ ರೂ. ದುರ್ಬಳಕೆಗೆ ಸಂಬಂಧಿಸಿ ಸಿಬಿಐ ಇವರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇವರಿಬ್ಬರನ್ನು ವಿಶೇಷ ವಿಮಾನದ ಮೂಲಕ ದಿಲ್ಲಿಗೆ ಸುಮಾರು ಬೆಳಗ್ಗೆ 1.30ರ ಹೊತ್ತಿಗೆ ತರಲಾಯಿತು. ವಿಮಾನ ಇಳಿದ ಕೂಡಲೇ ಇಬ್ಬರನ್ನು ಜಾರಿ ನಿರ್ದೇಶನಾಲಯ ಬಂಧಿಸಿತು. ಅನಂತರ ಅವರನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಿತು.
ಭಾರತದ ತನಿಖಾ ಸಂಸ್ಥೆಗಳ ಮನವಿಯ ಹಿನ್ನೆಲೆಯಲ್ಲಿ ದುಬೈ ಪೊಲೀಸರು ಇವರಿಬ್ಬರನ್ನು ಬುಧವಾರ ಬಂಧಿಸಿದ್ದರು. ವಿವಿಐಪಿ ಹೆಲಿಕಾಪ್ಟರ್ ಹಗರಣದ ಸಹ ಆರೋಪಿ ಹಾಗೂ ಮಧ್ಯವರ್ತಿಯಾಗಿದ್ದ ಬ್ರಿಟಿಶ್ ಪ್ರಜೆ ಕ್ರಿಶ್ಚಿಯನ್ ಜೆಮ್ಸ್ ಮೈಕಲ್ನನ್ನು ಕೂಡ ಇತ್ತೀಚೆಗೆ ದುಬೈಯಿಂದ ಗಡಿಪಾರು ಮಾಡಲಾಗಿತ್ತು. ಈಗ ಆತ ನ್ಯಾಯಾಂಗ ಬಂಧನದಲ್ಲಿದ್ದಾನೆ. ಯುಎಇಯಲ್ಲಿ ಅವರ ವಿರುದ್ಧ ಗಡಿಪಾರು ಕಲಾಪಗಳನ್ನು ಆರಂಭಿಸಿಲ್ಲ. ಅವರನ್ನು ಭಾರತಕ್ಕೆ ಕಳುಹಿಸುವ ಮೊದಲು ಕುಟುಂಬ ಅಥವಾ ವಕೀಲರನ್ನು ಭೇಟಿಯಾಗಲು ಅವಕಾಶ ನೀಡಿಲ್ಲ ಎಂದು ಸಕ್ಸೇನಾ ಪರ ವಕೀಲರು ಆರೋಪಿಸಿದ್ದಾರೆ.
ಆದಾಯ ತೆರಿಗೆ ಇಲಾಖೆ ಆದಾಯ ತೆರಿಗೆ ವಂಚಿಸಿದ ಪ್ರಕರಣ ದಾಖಿಲಿಸಿದ ಹೊರತಾಗಿಯು ತಲ್ವಾರ್ ವಿರುದ್ಧ ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ಭ್ರಷ್ಟಾಚಾರಕ್ಕೆ ಸಂಬಂಧಿಸಿ ಕ್ರಿಮಿನಲ್ ಪ್ರಕರಣ ದಾಖಲಿಸಿದೆ.