ಈಗ ಅತ್ಯಾಚಾರಿಗಳಿಗೆ ಉಳಿಗಾಲವಿಲ್ಲ ಎಂದ ಪ್ರಧಾನಿ ಮೋದಿಗೆ ವಾಸ್ತವ ನೆನಪಿಸಿದ ಗಾಯಕ ವಿಶಾಲ್
ಹೊಸದಿಲ್ಲಿ, ಫೆ.1: “ನಮ್ಮ ಆಡಳಿತದಲ್ಲಿ ಅತ್ಯಾಚಾರಿಗಳನ್ನು ಮೂರೇ ದಿನಗಳಲ್ಲಿ, ಏಳು ದಿನಗಳಲ್ಲಿ, 11 ದಿನಗಳಲ್ಲಿ ಹಾಗೂ ಒಂದು ತಿಂಗಳೊಳಗಾಗಿ ಗಲ್ಲಿಗೇರಿಸಲಾಗುತ್ತದೆ. ನಮ್ಮ ಪುತ್ರಿಯರಿಗೆ ನ್ಯಾಯ ದೊರಕಿಸಲು ನಾವು ಸತತ ಕ್ರಮ ಕೈಗೊಳ್ಳುತ್ತಿದ್ದೇವೆ'' ಎಂದು ಪ್ರಧಾನಿ ಸುಳ್ಳು ಹೇಳಿದ್ದಾರೆಂದು ಗಾಯಕ ವಿಶಾಲ್ ದದ್ಲಾನಿ ಆರೋಪಿಸಿದ್ದಾರೆ.
ಜನವರಿ 31ರಂದು ಸೂರತ್ ನಗರದಲ್ಲಿ ನಡೆದ ಯುವ ಸಮಾವೇಶದಲ್ಲಿ ಪ್ರಧಾನಿ ಮೇಲಿನ ಹೇಳಿಕೆ ನೀಡಿದ್ದರೆ ವಿಶಾಲ್ ಪ್ರಧಾನಿಗೆ ವಾಸ್ತವ ನೆನಪಿಸಿದ್ದಾರೆ.
“ಸುಳ್ಳು, ನಿಮ್ಮ ಆಡಳಿತದ ಅವಧಿಯಲ್ಲಿ ಗಲ್ಲಿಗೇರಿಸಲ್ಪಟ್ಟ ಒಬ್ಬನೇ ಒಬ್ಬ ಅತ್ಯಾಚಾರಿಯನ್ನಾದರೂ ಹೆಸರಿಸಿ ಸರ್. ನಿರ್ಭಯಾ ಅತ್ಯಾಚಾರಿಗಳು, ಅಸೀಫಾಳ ಅತ್ಯಾಚಾರಿಗಳು ಅಥವಾ ಉನ್ನಾವೋ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣದ ಆರೋಪಿ ಬಿಜೆಪಿ ಶಾಸಕ ಸೇಂಗರ್ ಈಗಲೂ ಜೀವಂತವಿದ್ದಾರೆ ಹಾಗೂ ಚೆನ್ನಾಗಿದ್ದಾರೆ'' ಎಂದು ವಿಶಾಲ್ ಗುರುವಾರ ಟ್ವೀಟ್ ಮಾಡಿದ್ದಾರೆ.
“ನರೇಂದ್ರ ಮೋದೀಜಿ, ನಮಗೆ ಗೊತ್ತು ಚುನಾವಣೆಗಳು ಹತ್ತಿರ ಬಂದಿವೆ, ಆದರೆ ಭಾರತೀಯ ಮಹಿಳೆಯರ ಮತ್ತು ಯುವತಿಯರ ನೋವನ್ನು ನಿಮ್ಮ ಪ್ರಚಾರವನ್ನಾಗಿಸಬೇಡಿ'' ಎಂದೂ ಅವರು ಟ್ವೀಟ್ ಮಾಡಿದ್ದಾರೆ.