ಅಸಂಘಟಿತ ವಲಯದ ಕಾರ್ಮಿಕರಿಗೆ 3,000 ರೂ. ಮಾಸಿಕ ಪಿಂಚಣಿ ಯೋಜನೆ ಘೋಷಣೆ
ಕೇಂದ್ರ ಬಜೆಟ್ 2019-20
![ಅಸಂಘಟಿತ ವಲಯದ ಕಾರ್ಮಿಕರಿಗೆ 3,000 ರೂ. ಮಾಸಿಕ ಪಿಂಚಣಿ ಯೋಜನೆ ಘೋಷಣೆ ಅಸಂಘಟಿತ ವಲಯದ ಕಾರ್ಮಿಕರಿಗೆ 3,000 ರೂ. ಮಾಸಿಕ ಪಿಂಚಣಿ ಯೋಜನೆ ಘೋಷಣೆ](https://www.varthabharati.in/sites/default/files/images/articles/2019/02/1/175696.jpg)
ಹೊಸದಿಲ್ಲಿ, ಫೆ.1: ಅಸಂಘಟಿತ ವರ್ಗದ ಕಾರ್ಮಿಕರಿಗೆ ಖಾತರಿ ಮಾಸಿಕ ಪಿಂಚಣಿ ಯೋಜನೆ ಜಾರಿಗೊಳಿಸುವ ಬಗ್ಗೆ ತಮ್ಮ ಮೊದಲ ಬಜೆಟ್ ಭಾಷಣದಲ್ಲಿ ವಿತ್ತ ಸಚಿವ ಪಿಯೂಶ್ ಗೋಯೆಲ್ ಹೇಳಿದ್ದಾರೆ.
ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಂಧನ್ ಎಂಬ ಹೆಸರಿನ ಈ ಪಿಂಚಣಿ ಯೋಜನೆಯನ್ವಯ ಮಾಸಿಕ 100 ರೂ. ಪಾವತಿಸಿದ ಅಸಂಘಟಿತ ವರ್ಗದ ಕಾರ್ಮಿಕರಿಗೆ ಅವರು 60 ವರ್ಷ ದಾಟಿದ ನಂತರ ಮಾಸಿಕ 3,000 ರೂ. ಪಿಂಚಣಿ ದೊರೆಯಲಿದೆ ಎಂದು ಗೋಯೆಲ್ ತಿಳಿಸಿದರು.
ಈ ಯೋಜನೆ 10 ಕೋಟಿ ಕಾರ್ಮಿಕರಿಗೆ ಪ್ರಯೋಜನಕಾರಿಯಾಗಲಿದೆ ಹಾಗೂ ಮುಂದಿನ ಐದು ವರ್ಷಗಳಲ್ಲಿ ಜಗತ್ತಿನ ಅತ್ಯಂತ ದೊಡ್ಡ ಪಿಂಚಣಿ ಯೋಜನೆಯಾಗುವ ಸಾಧ್ಯತೆಯಿದೆ ಎಂದು ಸಚಿವರು ಹೇಳಿದರು.
ಗ್ರಾಮಗಳ ಮೂಲಸತ್ವವನ್ನು ಸಂರಕ್ಷಿಸುವುದರ ಜತೆಗೆ ಗ್ರಾಮೀಣ ಭಾಗಗಳಲ್ಲಿ ನಗರ ಪ್ರದೇಶಗಳ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದ ಸಚಿವರು, ಗ್ರಾಮೀಣ-ನಗರ ಪ್ರದೇಶಗಳ ನಡುವೆ ಇರುವ ಅಂತರವನ್ನು ಕಡಿಮೆಗೊಳಿಸಿ `ಬಡವರಿಗೆ ದೇಶದ ಸಂಪತ್ತಿನ ಮೇಲೆ ಮೊದಲ ಹಕ್ಕು' ಇರುವಂತೆ ಸರಕಾರ ಶ್ರಮಿಸುವುದು'', ಎಂದೂ ಅವರು ತಿಳಿಸಿದರು.
ಸ್ವಚ್ಛ ಭಾರತ ಮಿಷನ್ ಯಶಸ್ಸಿನ ಬಗ್ಗೆ ಮಾತನಾಡಿದ ಸಚಿವರು ಭಾರತದ ಶೇ 98ರಷ್ಟು ಗ್ರಾಮಗಳಲ್ಲಿ ನೈರ್ಮಲ್ಯ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ ಹಾಗೂ 5.4 ಲಕ್ಷ ಗ್ರಾಮಗಳು ಬಯಲು ಶೌಚ ಮುಕ್ತಗೊಂಡಿವೆ ಎಂದರು.