ನಮ್ಮ ಬೆಂಗಳೂರು ಅವಾರ್ಡ್ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ
![ನಮ್ಮ ಬೆಂಗಳೂರು ಅವಾರ್ಡ್ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನಮ್ಮ ಬೆಂಗಳೂರು ಅವಾರ್ಡ್ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ](https://www.varthabharati.in/sites/default/files/images/articles/2019/02/1/175833.jpg)
ಬೆಂಗಳೂರು, ಫೆ.1: ಬೆಂಗಳೂರು ನಗರವನ್ನು ಉತ್ತಮ ನಗರವಾಗಿ ಶ್ರಮಿಸುತ್ತಿರುವರಿಗೆ ನಮ್ಮ ಬೆಂಗಳೂರು ಅವಾರ್ಡ್ ಟ್ರಸ್ಟ್ನಿಂದ ನೀಡುವ ಪ್ರಶಸ್ತಿಯ 10 ನೆ ಆವೃತ್ತಿಯ ಲೋಗೋ ಹಾಗೂ ಪ್ರಶಸ್ತಿಗಾಗಿ ನಾಮನಿರ್ದೇಶನ ಪ್ರಕ್ರಿಯೆಗೆ ಚಾಲನೆ ನೀಡಲಾಯಿತು.
ಶುಕ್ರವಾರ ನಗರದ ಖಾಸಗಿ ಹೊಟೇಲ್ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ನಟ ರಮೇಶ್ ಅರವಿಂದ್ ನಾಮನಿರ್ದೇಶನ ಮಾಡುವ ಮೂಲಕ ಪ್ರಕ್ರಿಯೆಗೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಮೊದಲ ಭಯ, ಮೊದಲ ಗೆಲುವು, ಮೊದಲ ಪ್ರೀತಿ, ಮೊದಲ ಅವಮಾನ ಎಲ್ಲವೂ ನನಗಾಗಿದ್ದು ಬೆಂಗಳೂರಿನಲ್ಲಿಯೇ. ಬೆಂಗಳೂರು ನನ್ನ ಪ್ರೀತಿಯ ನಗರವಾಗಿದೆ ಎಂದು ಹೇಳಿದರು.
ನಮ್ಮ-ನಿಮ್ಮೆಲ್ಲರ ನಡುವೆ ಇರುವ ಪ್ರತಿಭೆಗಳನ್ನು ಗುರುತಿಸಿ ಗೌರವಿಸಬೇಕಾದ ಅಗತ್ಯವಿದೆ. ಈ ನಿಟ್ಟಿನಲ್ಲಿ ಈ ಪ್ರಶಸ್ತಿಯು ನಿಮಗೊಂದು ಅವಕಾಶ ನೀಡಿದ್ದು, ತಮ್ಮ ಅಕ್ಕಪಕ್ಕದಲ್ಲಿರುವವರನ್ನು ಇದಕ್ಕೆ ನಾಮನಿರ್ದೇಶನ ಮಾಡಬಹುದು. ಸಾವಿರಾರು ಸಂಖ್ಯೆಯಲ್ಲಿ ನಾಮನಿರ್ದೇಶನಕ್ಕೆ ಅರ್ಜಿಗಳು ಬರುತ್ತದೆ. ಅದರಲ್ಲಿ ಅತ್ಯಂತ ಪ್ರತಿಭಾನ್ವಿತರು ಹಾಗೂ ಸಲ್ಲಬೇಕಾದವರಿಗೆ ಪ್ರಶಸ್ತಿ ಸಿಗಲಿದೆ ಎಂದು ಹೇಳಿದರು.
ನಗರ ತಜ್ಞ ಡಾ.ಅಶ್ವಿನ್ ಮಹೇಶ್ ಮಾತನಾಡಿ, 2009 ರಲ್ಲಿ ನಮ್ಮ ಬೆಂಗಳೂರು ಪ್ರಶಸ್ತಿ ಆರಂಭ ಮಾಡಲಾಗಿದೆ. ಈ ವರ್ಷಕ್ಕೆ 10 ವರ್ಷಗಳು ಪೂರೈಸುತ್ತಿದೆ. ಈ ಹತ್ತು ವರ್ಷಗಳಲ್ಲಿ 2.58 ಲಕ್ಷ ನಾಮನಿರ್ದೇಶಿತ ಅರ್ಜಿಗಳನ್ನು ಸ್ವೀಕರಿಸಿ 82 ಜನರನ್ನು ಗುರುತಿಸಲಾಗಿದೆ ಎಂದು ನುಡಿದರು.
ಬೆಂಗಳೂರು ಉತ್ತಮ ನಗರವಾಗಲು ಶ್ರಮಿಸುತ್ತಿರುವವರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುತ್ತದೆ. ಪ್ರಶಸ್ತಿಗಳನ್ನು ವರ್ಷದ ಉದಯೋನ್ಮುಖ ತಾರೆ, ವರ್ಷದ ಸಾಮಾಜಿಕ ಉದ್ಯಮಿ, ವರ್ಷದ ಸರಕಾರಿ ಅಧಿಕಾರಿ, ವರ್ಷದ ಪತ್ರಕರ್ತ ಹಾಗೂ ವರ್ಷದ ನಾಗರಿಕ ಎಂಬ ಐದು ವಿಭಾಗಗಳಲ್ಲಿ ನೀಡಲಾಗುತ್ತಿದೆ. ಪ್ರಶಸ್ತಿಯನ್ನು ‘ನನ್ನ ನಗರ ನನ್ನ ನಾಯಕರು’ ಎಂಬ ಘೋಷಣೆಯೊಂದಿಗೆ ನೀಡಲಾಗುತ್ತಿದೆ. ಈ ವರ್ಷದ ಪ್ರಶಸ್ತಿಗೆ ಅರ್ಹವಾದವರ ಹೆಸರನ್ನು ಎ.27 ರಂದು ಪ್ರಕಟ ಮಾಡಲಾಗುವುದು. 16 ಜನ ತೀರ್ಪುಗಾರರಿದ್ದು, ಎಲ್ಲರೂ ಸಮಾಲೋಚಿಸಿ ಪ್ರಶಸ್ತಿಗೆ ಆಯ್ಕೆ ಮಾಡಲಾಗುತ್ತದೆ. ಪ್ರಶಸ್ತಿಯು ಎರಡು ಲಕ್ಷ ನಗದು ಹಾಗೂ ಪ್ರಶಸ್ತಿ ಫಲಕವನ್ನೊಳಗೊಂಡಿರುತ್ತದೆ ಎಂದು ಸಂಘಟಕರು ಮಾಹಿತಿ ನೀಡಿದರು.