ನರಬಲಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮಂತ್ರವಾದಿ ಅರ್ಜಿ !
![ನರಬಲಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮಂತ್ರವಾದಿ ಅರ್ಜಿ ! ನರಬಲಿಗೆ ಅನುಮತಿ ನೀಡುವಂತೆ ಜಿಲ್ಲಾಡಳಿತಕ್ಕೆ ಮಂತ್ರವಾದಿ ಅರ್ಜಿ !](https://www.varthabharati.in/sites/default/files/images/articles/2019/02/2/175856.jpg)
ಪಾಟ್ನಾ, ಫೆ. 2: ತನ್ನ ಆರಾಧ್ಯ ದೈವವನ್ನು ಒಲಿಸಿಕೊಳ್ಳುವ ಸಲುವಾಗಿ ನರಬಲಿಗೆ ಅನುಮತಿ ನೀಡುವಂತೆ ಮಂತ್ರವಾದಿಯೊಬ್ಬ ಜಿಲ್ಲಾಡಳಿತಕ್ಕೆ ಅರ್ಜಿ ಸಲ್ಲಿಸಿದ ವಿಚಿತ್ರ ಘಟನೆ ವರದಿಯಾಗಿದೆ.
ನರಬಲಿ ಅಪರಾಧವಲ್ಲ ಎಂದು ಈತ ಪ್ರತಿಪಾದಿಸುವ ವೀಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಮೊದಲು ತನ್ನ ಮಗನನ್ನೇ ಬಲಿ ಕೊಡುವುದಾಗಿ ಹೇಳಿಕೊಂಡಿದ್ದಾನೆ. ಈ ಮಂತ್ರವಾದಿ ಬೆಗುಸರಾಯ್ ಜಿಲ್ಲಾಡಳಿತಕ್ಕೆ ಅಧಿಕೃತವಾಗಿ ಈ ಸಂಬಂಧ ಅರ್ಜಿ ಸಲ್ಲಿಸಿ, ಅಧಿಕಾರಿಗಳು ಬೆಚ್ಚಿ ಬೀಳುವಂತೆ ಮಾಡಿದ್ದಾನೆ.
ಜಿಲ್ಲೆಯ ಮೋಹನಪುರ ಎಂಬ ಗ್ರಾಮದ ನಿವಾಸಿಯಾಗಿರುವ ಸುರೇಂದ್ರ ಪ್ರಸಾದ್ ಸಿಂಗ್, ಬೆಗುಸರಾಯ್ ಜಿಲ್ಲೆಯ ಉಪ ವಿಭಾಗಾಧಿಕಾರಿ ಕಚೇರಿಗೆ ಜ. 29ರಂದು ಈ ಅರ್ಜಿ ನೀಡಿದ್ದಾರೆ. ಈ ಅರ್ಜಿಯ ಸ್ಕ್ರೀನ್ಶಾಟ್ ಕೂಡಾ ಸಮಾಜ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಆದರೆ ಇಂಥ ಯಾವುದೇ ಅರ್ಜಿ ತಮಗೆ ಬಂದಿಲ್ಲ ಎಂದು ಉಪವಿಭಾಗಾಧಿಕಾರಿ ಸಂಜೀವ್ ಕುಮಾರ್ ಚೌಧರಿ ಸ್ಪಷ್ಟಪಡಿಸಿದ್ದಾರೆ.
"ಇದು ಗಂಭೀರ ವಿಚಾರ; ನರಬಲಿ ಕಾನೂನುಬಾಹಿರ. ಈ ಪತ್ರ ಹಾಗೂ ಮಾಂತ್ರಿಕನಿಗಾಗಿ ಹುಡುಕಾಟ ಆರಂಭಿಸಿದ್ದೇವೆ. ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಹೇಳಿದ್ದಾರೆ. ಅಪರಿಚಿತ ಸಂಘಟನೆ "ಬಿಂದು ಮಾ ಮಾನವ್ ಕಲ್ಯಾಣ್ ಸಂಸ್ಥೆ" ಎಂಬ ಲೆಟರ್ಹೆಡ್ನಲ್ಲಿ ಅರ್ಜಿ ನೀಡಲಾಗಿದೆ. ಸಿಂಗ್ ಈ ಸಂಘಟನೆಯ ಮುಖ್ಯಸ್ಥ ಎಂದು ಹೇಳಿಕೊಂಡಿದ್ದಾನೆ. ಸೊಸೈಟಿಗಳ ನೋಂದಣಿ ಕಾಯ್ದೆಯಡಿ ಈ ಸಂಸ್ಥೆ ನೋಂದಣಿಯಾಗಿದೆ ಎಂದು ಹೇಳಲಾಗಿದೆ.
ಈ ಸಂಬಂಧ ಸ್ಥಳೀಯ ಪತ್ರಕರ್ತರನ್ನು ಉತ್ತೇಜಿಸಿ ಮಾತನಾಡುವ ವೀಡಿಯೊ ಕೂಡಾ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. "ನರಬಲಿ ಅಪರಾಧವಲ್ಲ; ಕಾಮಾಕ್ಯ ದೇವತೆಯಿಂದ ನನಗೆ ಆದೇಶವಾಗಿದೆ. ನಾನು ಬಲಿ ನೀಡುವ ಮೊದಲ ವ್ಯಕ್ತಿ ಎಂಜಿನಿಯರ್ ಆಗಿರುವ ನನ್ನ ಮಗ. ಆತ ನನ್ನ ದೇವಸ್ಥಾನಕ್ಕೆ ಹಣಕಾಸು ನೆರವು ನೀಡಲು ನಿರಾಕರಿಸಿದ್ದಾನೆ. ಆತ ರಾವಣನಂತೆ" ಎಂದು ಸಿಂಗ್ ಹೇಳುತ್ತಿರುವುದು ವೀಡಿಯೊದಲ್ಲಿ ದಾಖಲಾಗಿದೆ.
ಸ್ಥಳೀಯವಾಗಿ ಪಗ್ಲಾ ಬಾಬಾ ಎಂದು ಚಿರಪರಿಚಿತವಾಗಿರುವ ಈತ ನಗ್ನವಾಗಿ ಅಥವಾ ಮನುಷ್ಯನ ಬುರುಡೆಗಳನ್ನು ಕೈಯಲ್ಲಿ ಹಿಡಿದುಕೊಂಡು ಅಡ್ಡಾಡುತ್ತಿರುತ್ತಾನೆ ಎಂದು ಸ್ಥಳೀಯರು ಹೇಳಿದ್ದಾರೆ.