ಪ್ರಾಮಾಣಿಕ ಅಧಿಕಾರಿಯ ವಿರುದ್ಧ ‘ಪ್ರತೀಕಾರ’ದ ಕ್ರಮ ಕೈಗೊಂಡ ಕೇಂದ್ರಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ
ಏಮ್ಸ್ ಅವ್ಯವಹಾರಗಳನ್ನು ಬಯಲಿಗೆಳೆದದ್ದೇ ತಪ್ಪಾಯ್ತು
![ಪ್ರಾಮಾಣಿಕ ಅಧಿಕಾರಿಯ ವಿರುದ್ಧ ‘ಪ್ರತೀಕಾರ’ದ ಕ್ರಮ ಕೈಗೊಂಡ ಕೇಂದ್ರಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ ಪ್ರಾಮಾಣಿಕ ಅಧಿಕಾರಿಯ ವಿರುದ್ಧ ‘ಪ್ರತೀಕಾರ’ದ ಕ್ರಮ ಕೈಗೊಂಡ ಕೇಂದ್ರಕ್ಕೆ ಸುಪ್ರೀಂ ಕೋರ್ಟಿನಲ್ಲಿ ಹಿನ್ನಡೆ](https://www.varthabharati.in/sites/default/files/images/articles/2019/02/2/175861.jpg)
ಹೊಸದಿಲ್ಲಿ, ಫೆ.2: ಸುಮಾರು 5 ವರ್ಷಗಳ ಹಿಂದೆ ಹೊಸದಿಲ್ಲಿಯ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಗಳನ್ನು ಬಯಲಿಗೆಳೆದ ಭಾರತೀಯ ಅರಣ್ಯ ಸೇವಾ ಅಧಿಕಾರಿ ಸಂಜೀವ್ ಚತುರ್ವೇದಿ ವಿರುದ್ಧ ‘ಪ್ರತೀಕಾರ’ದ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರಕಾರ ಮತ್ತು ಏಮ್ಸ್ ಆಡಳಿತದ ವಿರುದ್ಧ ಉತ್ತರಾಖಂಡ ಹೈಕೋರ್ಟ್ ನೀಡಿದ ತೀರ್ಪನ್ನು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. ಇದು ಕೇಂದ್ರದ ಮೋದಿ ಸರಕಾರಕ್ಕೆ ದೊಡ್ಡ ಹಿನ್ನಡೆಯೆಂದೇ ಭಾವಿಸಲಾಗಿದೆ.
ಹೈಕೋರ್ಟ್ 25,000 ರೂ. ದಂಡ ವಿಧಿಸಿದ ಕ್ರಮವನ್ನೂ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆಯಲ್ಲದೆ ಜತೆಗೆ ಅಷ್ಟೇ ಮೊತ್ತದ ಹೆಚ್ಚುವರಿ ದಂಡ ವಿಧಿಸಿದೆ.
ಮ್ಯಾಗ್ಸೇಸೆ ಪ್ರಶಸ್ತಿ ವಿಜೇತರಾಗಿರುವ ಚತುರ್ವೇದಿ ಕೆಲ ವರ್ಷಗಳ ಹಿಂದೆ ಕೇಂದ್ರೀಯ ಡೆಪ್ಯುಟೇಶನ್ ಮೇಲೆ ಏಮ್ಸ್ ನಲ್ಲಿ ಚೀಫ್ ವಿಜಿಲೆನ್ಸ್ ಅಧಿಕಾರಿಯಾಗಿದ್ದಾಗ ಅವರ ಕಾರ್ಯನಿರ್ವಹಣೆಯ ಬಗ್ಗೆ ಋಣಾತ್ಮಕ ವರದಿ ನೀಡಲಾಗಿತ್ತು. ಇದರ ವಿರುದ್ಧ ಅವರು ಕೇಂದ್ರೀಯ ಆಡಳಿತಾತ್ಮಕ ಟ್ರಿಬ್ಯುನಲ್ ನ ಮುಖ್ಯ ಪೀಠಕ್ಕೆ ಮನವಿ ಸಲ್ಲಿಸಿದ್ದರು. ಆದರೆ ಕೇಂದ್ರ ಸರಕಾರ ಟ್ರಿಬ್ಯುನಲ್ ಅನ್ನು ತಪ್ಪು ದಾರಿಗೆಳೆದ ಕಾರಣ ವಿಚಾರಣೆಗೆ ತಡೆ ಹೇರಲಾಗಿತ್ತೆಂದು ಆರೋಪಿಸಲಾಗಿದೆ.
ಉತ್ತರಾಖಂಡ ಹೈಕೋರ್ಟ್ ಪೀಠದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ರಾಜೀವ್ ಶರ್ಮ ಮತ್ತು ಜಸ್ಟಿಸ್ ಮನೋಜ್ ಕುಮಾರ್ ಅವರು ಕೇಂದ್ರದ ಕ್ರಮ ಪ್ರತೀಕಾರಾತ್ಮಕವೆಂದು ಪರಿಗಣಿಸಿ ಟ್ರಿಬ್ಯುನಲ್ ವಿಚಾರಣೆಗೆ ತಡೆ ಹೇರಿದ ಆದೇಶವನ್ನು ರದ್ದುಗೊಳಿಸಿತ್ತು. ಚತುರ್ವೇದಿ ತರಬೇತಿ ನಿಮಿತ್ತ ಫಿನ್ಲ್ಯಾಂಡ್ ಗೆ ಹೋಗಿದ್ದ ಸಂದರ್ಭ ಕೇಂದ್ರ ಟ್ರಿಬ್ಯುನಲ್ ನ ನೈನಿತಾಲ್ ಪೀಠದೆದುರು ವಿಚಾರಣೆ ತಡೆ ಹಿಡಿಯುವ ಅಪೀಲು ಸಲ್ಲಿಸಿತ್ತೆಂದು ಹೇಳಲಾಗಿದೆ. ತನ್ನನ್ನು ಏಮ್ಸ್ ಸೇವೆಯಿಂದ ತೆಗೆದು ಹಾಕುವಲ್ಲಿ ಕೇಂದ್ರ ಸಚಿವ ಜೆ ಪಿ ನಡ್ಡಾ ಪಾತ್ರವಿದೆಯೆಂದೂ ಅವರು ಆರೋಪಿಸಿದ್ದರು.
ಏಮ್ಸ್ ಶಸ್ತ್ರಚಿಕಿತ್ಸಾ ವಿಭಾಗದಲ್ಲಿ ಹಾಗೂ ಟ್ರಾಮಾ ಸೆಂಟರ್ ಮಾಡಿದ ಖರೀದಿಗಳಲ್ಲಿ ಹಲವಾರು ಅವ್ಯವಹಾರಗಳನ್ನು ತಾವು ಬೊಟ್ಟು ಮಾಡಿ ತೋರಿಸಿದ್ದಾಗಿ ಚತುರ್ವೇದಿ ಹೇಳಿದ್ದರು. ಪ್ರಾಮಾಣಿಕ ಅಧಿಕಾರಿ ಎಂದು ಹೆಸರು ಪಡೆದಿರುವ ಚತುರ್ವೇದಿ ಸದ್ಯ ಹಲದ್ವಾನಿಯಲ್ಲಿ ಅರಣ್ಯ ಸಂರಕ್ಷಕರಾಗಿ (ಸಂಶೋಧನೆ) ಕಾರ್ಯನಿರ್ವಹಿಸುತ್ತಿದ್ದಾರೆ.