ಜಾರ್ಜ್ ಫೆರ್ನಾಂಡಿಸ್ ಹೆಸರನ್ನು ಕೊಂಕಣ ರೈಲ್ವೇ ಗೆ ಇಡುವುದು ಸೂಕ್ತ -ಮೈಕಲ್ ಫೆರ್ನಾಂಡಿಸ್
ಜಾರ್ಜ್ ಫೆರ್ನಾಂಡಿಸ್ರಿಗೆ ಸಾರ್ವಜನಿಕ ಶ್ರದ್ದಾಂಜಲಿ
ಮಂಗಳೂರು, ಫೆ . 2: ಮಾಜಿ ಕೇಂದ್ರ ಸಚಿವ ದಿವಂಗತ ಜಾರ್ಜ್ ಫೆರ್ನಾಂಡಿಸ್ರವರ ನೆನಪಿಗಾಗಿ ಅವರ ಹೆಸರನ್ನಿಡುವುದಾದರೆ ಕೊಂಕಣ ರೈಲ್ವೇಗೆ ಸಂಬಂಧಿಸಿದಂತೆ ಅವರ ಹೆಸರನ್ನಿಟ್ಟರೆ ಅರ್ಥಪೂರ್ಣವಾದೀತು. ಅವರು ವಿಶ್ವಕ್ಕೆ ಕೊಡುಗೆ ನೀಡಿದ ವ್ಯಕ್ತಿ ಅದು ಅವರ ಕೊಡುಗೆ ಮಂಗಳೂರು ನಗರದ ಬಿಜೈ ನ್ಯೂ ರೋಡ್ಗೆ ಅವರ ಹೆಸರು ಬೇಡ ಎಂದು ತಾನು ಮನವಿ ಮಾಡುವುದಾಗಿ ಜಾರ್ಜ್ ಫೆರ್ನಾಂಡಿಸ್ರವರ ಸಹೋದರ ಮೈಕಲ್ ಫೆರ್ನಾಂಡೀಸ್ ತಿಳಿಸಿದ್ದಾರೆ.
ನಗರದ ಟಿ.ವಿ ರಮಣ್ ಪೈ ಸಭಾಂಗಣದಲ್ಲಿ ನಾಗರಿಕರ ವತಿಯಿಂದ ಇಂದು ಹಮ್ಮಿ ಕೊಂಡ ಸಾರ್ವಜನಿಕ ಶ್ರದ್ಧಾಂಜಲಿ ಸಭೆಯಲ್ಲಿಂದು ಅವರು ತಿಳಿಸಿದ್ದಾರೆ. ಜಾರ್ಜ್ ಫೆರ್ನಾಂಡಿಸ್ ಭಾರತ ಮಾತ್ರವಲ್ಲದೆ ನೆರೆಯ ಬರ್ಮಾ, ಟೀಬೆಟ್, ಮ್ಯಾನ್ಮಾರ್ ಸೇರಿದಂತೆ ವಿವಿಧ ದೇಶಗಳ ಜನರ ಸಮಸ್ಯೆಗಳ ಪರಿಹಾರಕ್ಕೆ ಪ್ರಯತ್ನಿಸಿದವರು. ಮಾನವ ಹಕ್ಕುಗಳ ಬಗ್ಗೆ ಜಾಗತಿಕವಾಗಿ ಧ್ವನಿ ಎತ್ತಿದ ವ್ಯಕ್ತಿಯಾಗಿದ್ದರು. ಜಾರ್ಜ್ ಫೆರ್ನಾಂಡಿಸ್ ಹಾಗೂ ಅವರೊಂದಿಗೆ ನಾನು ಸೇರಿ ನಾಲ್ವರು ಸಹೋದರರು ಭ್ರಷ್ಟಾಚಾರದ ವಿರುದ್ಧ ರಜಕೀಯ ಹೋರಾಟದಲ್ಲಿ ತೊಡಗಿಸಿಕೊಂಡವರು. ಇಂತಹ ಸಂದರ್ಭದಲ್ಲಿ ಜಾರ್ಜ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸುತ್ತಿರುವ ಸಂದರ್ಭದಲ್ಲಿ ಅವರ ಬಗ್ಗೆ ಅರಿವಿದ್ದೋ ಇಲ್ಲದೆಯೋ ಕೆಲವೊಂದು ಸುಳ್ಳು ಸುದ್ದಿಗಳನ್ನು ಪ್ರಚಾರ ಮಾಡಲಾಗುತ್ತಿದೆ. ಜನರು ಇದನ್ನು ನಂಬಬಾರದು ಜಾರ್ಜ್ ಭ್ರಷ್ಟಾಚಾರದಲ್ಲಿ ತೊಡಗಿದವರಲ್ಲ ಅವರ ತಮ್ಮಂದಿರಾದ ನಾವು ಅವರು ಕೈಗಾರಿಕಾ ಸಚಿವರಾದಾಗ ಕೈಗಾರಿಕೆ ನಡೆಸಲು ಬಿಡಿಗಾಸು ಅವರಿಂದ ಬಯಸಲಿಲ್ಲ.ರೈಲ್ವೇ ಸಚಿವರದಾಗ ರೈಲ್ವೇ ಸ್ಟೇಷನ್ನಲ್ಲಿ ಒಂದು ಸ್ಟಾಲ್ ಮಾಡಲು ಸಹಾಯ ಕೇಳಲು ಹೋಗಿಲ್ಲ.ಭ್ರಷ್ಟಾಚಾರದ ಬಿಡಿಗಾಸನ್ನು ಜಾರ್ಜ್ ಬಯಸದೆ ರಾಜಕೀಯದಲ್ಲಿ ಬೆಳೆದು ಬಂದವರು. ಬಳಿಕ ಅವರ ಆಸ್ತಿಗಾಗಿ ಕುಟುಂಬದವರು ಜಗಳ ಮಾಡುತ್ತಿದ್ದಾರೆ ಎನ್ನುವ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಕೆಲವು ಮಾಧ್ಯಮಗಳ ಮೂಲಕ ಪ್ರಚಾರ ಮಾಡಲಾಗುತ್ತದೆ. ನಾವು ಯಾರೂ ಅವರ ಕುಟುಂಬದ ಆಸ್ತಿಗಾಗಿ ಬಯಸಿದವರಲ್ಲ. ಕಾನೂನು ಹೋರಾಟ ಮಾಡಿದವರೂ ಅಲ್ಲಿ ಎನ್ನುವುದನ್ನು ಸ್ಪಷ್ಟ ಪಡಿಸುತ್ತೇನೆ. ಈ ರೀತಿ ಜಾರ್ಜ್ ಬಗ್ಗೆ ಸತ್ಯಕ್ಕೆ ದೂರವಾದ ಸುದ್ದಿಗಳನ್ನು ಮಾಡುವುದೆಂದರೆ ಅವರನ್ನು ಕೊಲೆ ಮಾಡಿದಂತೆ ಎಂದು ಮೈಕಲ್ ಫೆರ್ನಾಂಡಿಸ್ ತಿಳಿಸಿದ್ದಾರೆ.
ಜಾರ್ಜ್ ತನ್ನ ಆತ್ಮ ಕಥೆಯನ್ನು ಬರೆದಿಲ್ಲ ಆದರೆ ಅವರ ಆತ್ಮ ಕಥೆಯನ್ನು ಜಾಮಿಯಾ ಮಿಲಿಯಾ ವಿಶ್ವ ವಿದ್ಯಾನಿಲಯದ ಪ್ರೊಫೆಸರ್ ಒಬ್ಬರು ಸಿದ್ದ ಪಡಿಸುತ್ತಿದ್ದಾರೆ ಅದರಲ್ಲಿ ಅವರ ಬಗೆಗಿನ ನೈಜ ವಿಚಾರ ಜನರ ಮುಂದೆ ಬರಲಿದೆ ಎಂದು ಮೈಕಲ್ ಪೆರ್ನಾಂಡಿಸ್ ನುಡಿನಮನ ಸಲ್ಲಿಸುತ್ತಾ ತಿಳಿಸಿದ್ದಾರೆ.
ದೇಶದ ಜನ,ಶಾಂತಿ,ನೆಮ್ಮದಿಯಿಂದ ಬದುಕುವುದೇ ಆ ದೇಶದ ಅಭಿವೃದ್ಧಿ ಎಂದು ಪ್ರತಿಪಾದಿಸಿದ ಜಾರ್ಜ್ ಫೆರ್ನಾಂಡಿಸ್ರ ಕುಟುಂಬಕ್ಕೆ ಅವರ ಅಗಲಿಕೆಯ ದು:ಖವನ್ನು ಭರಿಸುವ ಶಕ್ತಿ ನೀಡಲಿ ಎಂದು ನಿಕಟಪೂರ್ವ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪಾವ್ಲ್ ಡಿ ಸೋಜ ನುಡಿನಮನ ಸಲ್ಲಿಸಿದರು.
ರಾಜಕೀಯ ರಂಗದಲ್ಲಿ ಜಾರ್ಜ್ ಫೆರ್ನಾಂಡಿಸ್ ನಕ್ಷತ್ರದಂತೆ ಎತ್ತರಕ್ಕೇರಿ ಬೆಳಕಾದವರು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ನುಡಿನಮನ ಸಲ್ಲಿಸಿದರು.
ಜಾರ್ಜ್ ಫೆರ್ನಾಂಡೀಸ್ ಸರಳ ವ್ಯಕ್ತಿತ್ವದ ರಾಜಕಾರಣ:-ಜಾಜ್ ಫೆರ್ನಾಂಡಿಸ್ ಸಚಿವರಾಗಿ, ಸಂಸದರಾಗಿ ಇದ್ದರು ಯಾವೂದೇ ಆಡಂಬರವಿಲ್ಲದೆ ಬದುಕುತ್ತಿದ್ದ ಸರಳ ಸಜ್ಜನಿಕೆಯ ರಾಜಕಾರಣಿಯಾಗಿದ್ದರು. ಅವರ ಮನೆಗೆ ಯಾವೂದೇ ವ್ಯಕ್ತಿ ಭದ್ರತೆಗಳ ಸಮಸ್ಯೆಯಿಲ್ಲದೆ ಹೋಗಿ ಬರುತ್ತಿದ್ದರು.ಅವರು ಅಂಗರಕ್ಷಕರಿಲ್ಲದೆ ತಿರುಗುತ್ತಿದ್ದರು ಅವರ ಪ್ರಮಾಣಿಕತನ, ಸರಳತೆ ಪ್ರಬುದ್ಧತೆ ನಮಗೆ ಮಾದರಿಯಾಬೇಕಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾನಿಲಯದ ಕುಲಾಧಿಪತಿ ಎನ್.ವಿನಯ ಹೆಗ್ಡೆ ತಿಳಿಸಿದ್ದಾರೆ.
ಜಾರ್ಜ್ ಫೆರ್ನಾಂಡೀಸ್ ರಾಜಕೀಯ ರಂಗದಲ್ಲಿ ಅಪರೂಪದ ಆದರ್ಶವ್ಯಕ್ತಿ ಎಂದು ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಮೋಹನ್ ಆಳ್ವಾ ತನುಡಿನಮನ ಸಲ್ಲಿಸಿದರು. ಈ ಸಂದರ್ಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಮನಪಾ ಮೇಯರ್ ಭಾಸ್ಕರ ಕೆ, ಫೆಲಿಕ್ಸ್ ಡಿ ಸೋಜ ನುಡಿನಮನ ಸಲ್ಲಿಸಿದರು.