ಸಂತ್ರಸ್ತರಿಗೆ ಸಮಾನ ಪರಿಹಾರ ನೀಡಲು ಸರಕಾರ ಆದೇಶ
ಬೆಂಗಳೂರು, ಫೆ.3: ಪ್ರಕೃತಿ ವಿಕೋಪ, ಆಕಸ್ಮಿಕ ಅವಘಡ ಹಾಗೂ ಮಾನವ ನಿರ್ಮಿತ ವ್ಯವಸ್ಥೆಗಳಿಂದ ಮೃತಪಡುವ ಕುಟುಂಬಗಳಿಗೆ ಸಮಾನ ಪರಿಹಾರ ನೀಡುವ ಸಂಬಂಧ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ಕೇಂದ್ರದ ಎನ್ಡಿಆರ್ಎಫ್ ಮಾರ್ಗಸೂಚಿಯ ಪ್ರಕಾರ ಪ್ರಕೃತಿ ವಿಕೋಪದಿಂದ ಜೀವ ಹಾನಿಯಾದರೆ ಕಂದಾಯ ಇಲಾಖೆ, ರೈತರು ಆತ್ಮಹತ್ಯೆ ಪ್ರಕರಣಗಳಲ್ಲಿ ಕೃಷಿ ಇಲಾಖೆ, ಕಾಡು ಪ್ರಾಣಿಗಳಿಂದ ಹಾನಿಯಾದರೆ ಅರಣ್ಯ ಇಲಾಖೆ, ವಿದ್ಯುತ್ ಅವಘಡವಾದರೆ ಇಂಧನ ಇಲಾಖೆ, ರಸ್ತೆ ಅಪಘಾತವಾದರೆ ಸಾರಿಗೆ ಇಲಾಖೆಗಳು ಪರಿಹಾರ ನೀಡಲಾಗುತ್ತದೆ.
ಇನ್ನುಳಿದಂತೆ ಮತ್ತಿತರೆ ಘಟನೆಗಳಿಂದ ಜೀವಹಾನಿಯಾದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಗಳಿಂದ ಸಂತ್ರಸ್ಥರಿಗೆ ಪರಿಹಾರ ಒದಗಿಸಲಾಗಿತ್ತಿತ್ತು. ಈ ಪರಿಹಾರ ಮೊತ್ತದಲ್ಲಿ ತಾರತಮ್ಯ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಎಲ್ಲ ಪ್ರಕರಣಗಳಲ್ಲಿ ಜೀವ ಹಾನಿಯಾದರೆ ಸಮಾನ ಪರಿಹಾರ ನೀಡಲು ಹೊಸ ನೀತಿ ರೂಪಿಸಿದ್ದು, ಈ ಸಂಬಂಧ ಆದೇಶ ಹೊರಡಿಸಲಾಗಿದೆ.
ರಾಜ್ಯ ಸರಕಾರದ ಹೊಸ ಆದೇಶದಲ್ಲಿ ಮರಣ ಹೊಂದಿದರೆ ಅಥವಾ ಶಾಶ್ವತ ಅಂಗವಕಲತೆಗೆ ಐದು ಲಕ್ಷ, ಭಾಗಶಃ ಅಂಗವಿಕಲತೆಗೆ, ಅಂಗವಿಕಲತೆಯ ಪ್ರಮಾಣ ಆಧರಿಸಿ ಗರಿಷ್ಠ 5 ಲಕ್ಷದಿಂದ ಕನಿಷ್ಠ ಒಂದು ಲಕ್ಷದವರೆಗೂ, ತೀವ್ರ ಗಾಯಗೊಂಡರೆ 20 ಸಾವಿರ, ಗರಿಷ್ಠ 1 ಲಕ್ಷ ವೈದ್ಯಕೀಯ ವೆಚ್ಚ, ಸರಕಾರಿ ಹಾಗೂ ನೋಂದಾಯಿತ ಆಸ್ಪತ್ರೆಗಳಲ್ಲಿ ಚಿಕಿತ್ಸೆಗೆ ಭರಿಸುವಂತೆ ತಿಳಿಸಲಾಗಿದೆ.
ರಾಜ್ಯದ ಎಲ್ಲ ಇಲಾಖೆಗಳಲ್ಲಿಯೂ ಆದೇಶದ ಪ್ರತಿ ತಲುಪಿದ ಕೂಡಲೇ ಏಕರೂಪದ ಪರಿಹಾರ ಜಾರಿಗೆ ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸೂಚಿಸಿದ್ದಾರೆ. ಬೆಳಗಾವಿಯಲ್ಲಿ ನಡೆದ ಚಳಿಗಾಲದ ಅಧಿವೇಶನದ ಸಂದರ್ಭದಲ್ಲಿ ಸಿಎಂ ಸರಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತರ ಅಧ್ಯಕ್ಷತೆಯಲ್ಲಿ ರಚಿಸಿದ್ದ ಸಮಿತಿ ಈ ಶಿಫಾರಸ್ಸು ಸಲ್ಲಿಸಿದ್ದು, ಸರಕಾಕರ ಆದೇಶ ಹೊರಡಿಸಿದೆ.