ಚಲಿಸುತ್ತಿದ್ದ ರೈಲಿನಡಿಗೆ ಬಿದ್ದು ಕಾಲು ಕಳೆದುಕೊಂದ ವ್ಯಕ್ತಿ
ಚಾಮರಾಜನಗರ,ಫೆ.3: ನಗರದ ರೈಲ್ವೆ ನಿಲ್ದಾಣದಲ್ಲಿ ಚಲಿಸುತ್ತಿದ್ದ ರೈಲು ಹತ್ತುವ ವೇಳೆ ಜಾರಿ ಬಿದ್ದು ಚಕ್ರಕ್ಕೆ ಸಿಲುಕಿ ವ್ಯಕ್ತಿಯೋರ್ವರು ಕಾಲು ಕಳೆದುಕೊಂಡ ಘಟನೆ ಶನಿವಾರ ಬೆಳಗ್ಗೆ ನಡೆದಿದೆ.
ತಾಲೂಕಿನ ಅರಕಲವಾಡಿ ಗ್ರಾಮದ ಕೆಂಪರಾಜು(40) ಕಾಲು ಕಳೆದುಕೊಂಡವರು. ಇವರು ಶನಿವಾರ ಬೆಳಗ್ಗೆ ಚಾಮರಾಜನಗರದಿಂದ ಮೈಸೂರಿಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಹತ್ತಲು ಹೋಗಿದ್ದಾರೆ. ಈ ವೇಳೆ ರೈಲು ಚಲಿಸುತ್ತಿದ್ದರಿಂದ ಕೆಳಗೆ ಬಿದ್ದು ರೈಲಿನ ಚಕ್ರಕ್ಕೆ ಕಾಲು ಸಿಲುಕಿದ್ದು ಒಂದು ಕಾಲು ಕತ್ತರಿಸಿ ಹೋಗಿದೆ.
ತೀವ್ರ ರಕ್ತಸ್ರಾವದಿಂದ ರೈಲು ಹಳಿಗಳ ನಡುವೆ ನರಳಾಡುತ್ತಿದ್ದ ವ್ಯಕ್ತಿಯನ್ನು ರೈಲ್ವೆ ಪೊಲೀಸರು ನಗರದ ಜಿಲ್ಲಾಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ರವಾನಿಸಿದರು. ಈ ಸಂಬಂಧ ರೈಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story