ಬೈಕ್ - ಕಾರು ಮುಖಾಮುಖಿ ಢಿಕ್ಕಿ: ದಂಪತಿ ಸಾವು
ಮಂಡ್ಯ,ಫೆ.3: ಬೆಂಗಳೂರು-ಮಂಗಳೂರು ರಾಷ್ಟ್ರಿಯ ಹೆದ್ದಾರಿಯಲ್ಲಿ ಬೈಕ್ ಮತ್ತು ಕಾರಿನ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿ ದಂಪತಿಗಳು ಸಾವಿಗೀಡಾದ ಘಟನೆ ಶನಿವಾರ ರಾತ್ರಿ 10.45ರ ವೇಳೆ ನಡೆದಿದೆ.
ನಾಗಮಂಗಲ ತಾಲೂಕಿನ ಬೆಳ್ಳೂರು ಸೂರನಹಳ್ಳಿ ಗ್ರಾಮದ ಕೃಷ್ಣಮೂರ್ತಿ, ಕದಬಹಳ್ಳಿ ಗ್ರಾಮದ ಮೊರಾರ್ಜಿ ಶಾಲೆಯಲ್ಲಿ ತನ್ನ ಮಗಳ ಶಾಲಾ ಕಾರ್ಯಕ್ರಮ ಮುಗಿಸಿ ಪತ್ನಿ ರೂಪಾ, ಮಗಳು ಯಶಸ್ವಿನಿಯೊಂದಿಗೆ ಬೈಕಿನಲ್ಲಿ ಬರುತ್ತಿದ್ದರು. ಅಗಚಹಳ್ಳಿ ಬಳಿ ತಿರುವು ತೆಗೆದುಕೊಳ್ಳುತ್ತಿದ್ದಂತೇ ಎದುರಿನಿಂದ ಕೆಂಪು ಬಣ್ಣದ ಬೆಂಝ್ ಕಾರು ವೇಗವಾಗಿ ಬಂದು ಢಿಕ್ಕಿ ಹೊಡೆದಿದ್ದು, ಪರಿಣಾಮ ಕೃಷ್ಣಮೂರ್ತಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ತೀವ್ರ ಗಾಯಗೊಂಡ ರೂಪಾ ಮತ್ತು ಮಗಳನ್ನು ಆದಿಚುಂಚನಗಿರಿ ಆಸ್ಪತ್ರೆಗೆ ಸೇರಿಸಿದ್ದು, ರೂಪಾ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಬೆಳಗಿನ ಜಾವ ಮೃತಪಟ್ಟಿದ್ದಾರೆ.
ಕಾರಿನ ಮುಂದೆ ಗಾಂಜಾ ಬಿದ್ದಿರುವುದು ಕಂಡು ಬಂದ ಹಿನ್ನಲೆಯಲ್ಲಿ ಕಾರಿನಲ್ಲಿದ್ದವರು ಗಾಂಜಾ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದರು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.