ನರ್ಸ್ ಜೊತೆ ಅಸಭ್ಯ ವರ್ತನೆ ಆರೋಪ: ಯುವನಕನಿಗೆ ಜೈಲು ಶಿಕ್ಷೆ
ಚಾಮರಾಜನಗರ,ಪೆ.3: ಜಿಲ್ಲೆಯ ಕೊಳ್ಳೇಗಾಲ ತಾಲೂಕಿನ ಚಿಲಕವಾಡಿ ಗ್ರಾಮದಲ್ಲಿ ಸ್ಟಾಫ್ ನರ್ಸ್ ಕೈ ಹಿಡಿದು ಎಳೆದು ಅನುಚಿತವಾಗಿ ವರ್ತಿಸಿದ್ದ ವ್ಯಕ್ತಿಗೆ ಇಲ್ಲಿನ ಪ್ರಧಾನ ಸಿವಿಲ್ ನ್ಯಾಯಾಲಯ 4 ವರ್ಷ ಸಜೆ, 12,500 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಚಿಲಕವಾಡಿ ಗ್ರಾಮದ ನಿವಾಸಿ ಮಹೇಶ್ ಶಿಕ್ಷೆಗೆ ಗುರಿಯಾದ ಆರೋಪಿ. ಒಂದೂವರೆ ವರ್ಷದ ಹಿಂದೆ ಸ್ಟಾಫ್ ನರ್ಸ್ ಜತೆ ಅನುಚಿತ ವರ್ತನೆ ತೋರಿದ್ದ ಮಹೇಶ್ ವಿರುದ್ಧ ಪ್ರಕರಣ ದಾಖಲಾಗಿತ್ತು.
ವಿವರ: ಮೈಸೂರಿನ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ ಸಲ್ಲಿಸುತ್ತಿದ್ದ ಮಹಿಳೆ 2017ರ ಮೇ 8ರಂದು ಊರಿಗೆ ಬಂದಿದ್ದಾಗ ಮಹೇಶ್ ರಸ್ತೆಯಲ್ಲಿ ಕೈ ಹಿಡಿದು ಎಳೆದಾಡಿ ಅವಾಚ್ಯ ಶಬ್ಧಗಳಿಂದ ನಿಂದಿಸಿ ಅನುಚಿತವಾಗಿ ವರ್ತಿಸಿದ್ದ ಎನ್ನಲಾಗಿದೆ. ಇದರಿಂದ ನೊಂದ ಮಹಿಳೆ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ಈ ಸಂಬಂಧ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ಪ್ರಧಾನ ಸಿವಿಲ್ ನ್ಯಾಯಧೀಶರಾದ ಟಿ.ಶ್ರೀಕಾಂತ್ ಅವರು ಮಹೇಶ್ಗೆ ಶಿಕ್ಷೆ ವಿಧಿಸಿ ಆದೇಶ ನೀಡಿದ್ದಾರೆ.