ಕಾಂಗ್ರೆಸ್ ಸಚಿವರಿಗೆ ಫೆ.5ರಂದು ಸಿದ್ದರಾಮಯ್ಯ ಔತಣಕೂಟ
![ಕಾಂಗ್ರೆಸ್ ಸಚಿವರಿಗೆ ಫೆ.5ರಂದು ಸಿದ್ದರಾಮಯ್ಯ ಔತಣಕೂಟ ಕಾಂಗ್ರೆಸ್ ಸಚಿವರಿಗೆ ಫೆ.5ರಂದು ಸಿದ್ದರಾಮಯ್ಯ ಔತಣಕೂಟ](https://www.varthabharati.in/sites/default/files/images/articles/2019/02/4/176236.jpg)
ಬೆಂಗಳೂರು, ಫೆ.4: ರಾಜ್ಯದ ಸಮ್ಮಿಶ್ರ ಸರಕಾರದಲ್ಲಿನ ಕಾಂಗ್ರೆಸ್ ಸಚಿವರಿಗೆ ಮಾಜಿ ಮುಖ್ಯಮಂತ್ರಿ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಫೆ.5ರಂದು ಸಂಜೆ 7 ಗಂಟೆಗೆ ತಮ್ಮ ಸರಕಾರಿ ನಿವಾಸ ಕಾವೇರಿಯಲ್ಲಿ ಔತಣಕೂಟ ಏರ್ಪಡಿಸಿದ್ದಾರೆ.
ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಫೆ.8ರಂದು ಸಮ್ಮಿಶ್ರ ಸರಕಾರದ ಬಜೆಟ್ ಮಂಡನೆ ಮಾಡಲಿರುವ ಹಿನ್ನೆಲೆಯಲ್ಲಿ, ಸದನದಲ್ಲಿ ಯಾವ ರೀತಿ ಪ್ರತಿಪಕ್ಷ ಬಿಜೆಪಿಯನ್ನು ಎದುರಿಸಬೇಕು. ಅತೃಪ್ತಗೊಂಡಿರುವ ಶಾಸಕರನ್ನು ಶೀಘ್ರದಲ್ಲೆ ಸಂಪರ್ಕಿಸಿ, ಸದನದಲ್ಲಿ ಬಜೆಟ್ ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ಅನುಸರಿಸಬೇಕಾದ ಕ್ರಮಗಳ ಕುರಿತು ಸಚಿವರೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.
ಕುಮಾರಸ್ವಾಮಿ ಬಜೆಟ್ ಮಂಡನೆ ಮಾಡುವುದೇ ಅನುಮಾನ ಎಂದು ಬಿಜೆಪಿ ನಾಯಕರು ನೀಡುತ್ತಿರುವ ಹೇಳಿಕೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಸಿದ್ದರಾಮಯ್ಯ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಪಕ್ಷದಿಂದ ಸರಕಾರದ ಅಸ್ತಿತ್ವಕ್ಕೆ ಧಕ್ಕೆ ಬರಬಾರದು ಎಂಬ ಸ್ಪಷ್ಟ ಸಂದೇಶವನ್ನು ಸಚಿವರಿಗೆ ರವಾನಿಸಿದ್ದಾರೆ ಎಂದು ತಿಳಿದು ಬಂದಿದೆ.
ಸಚಿವ ಸಂಪುಟದಿಂದ ಕೈ ಬಿಟ್ಟಿರುವುದರಿಂದ ಅಸಮಾಧಾನಗೊಂಡು ಯಾರ ಕೈಗೂ ಸಿಗದೆ ಓಡಾಡುತ್ತಿರುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ, ಚಿಂಚೋಳಿ ಶಾಸಕ ಡಾ.ಉಮೇಶ್ ಜಾಧವ್, ಅಥಣಿ ಶಾಸಕ ಮಹೇಶ್ ಕಮಟಳ್ಳಿ ಹಾಗೂ ಶಾಸಕ ಆನಂದ್ಸಿಂಗ್ ಮೇಲೆ ಹಲ್ಲೆ ನಡೆಸಿ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಜೆ.ಎನ್.ಗಣೇಶ್ರನ್ನು ಸದನಕ್ಕೆ ಕರೆ ತರುವುದು, ಇಲ್ಲವೇ ಅವರ ಅನುಪಸ್ಥಿತಿಯಲ್ಲಿ ಧನ ವಿನಿಯೋಗ ಮಸೂದೆಯನ್ನು ಅಂಗೀಕಾರ ಪಡೆಯುವ ನಿಟ್ಟಿನಲ್ಲಿ ರಣತಂತ್ರ ರೂಪಿಸುವ ಕುರಿತು ಸಿದ್ದರಾಮಯ್ಯ ಕರೆದಿರುವ ಔತಣಕೂಟದ ಸಂದರ್ಭದಲ್ಲಿ ಚರ್ಚೆಯಾಗಲಿದೆ ಎಂದು ಹೇಳಲಾಗುತ್ತಿದೆ.