ಆಚಾರ್ಯ ಮಧ್ವ- ಪುರಂದರರ ಭಾವ ಪರಸ್ಪರ ಪೂರಕವಾದುದು: ಪಲಿಮಾರುಶ್ರೀ

ಉಡುಪಿ, ಫೆ.6: ಮಧ್ವಾಚಾರ್ಯ ಹಾಗೂ ಪುರಂದರದಾಸರ ಭಾವ ಬೇರೆ ಬೇರೆ ಅಲ್ಲ. ಶುದ್ಧತೆಯಿಂದ ಕೂಡಿರುವ ಆಚಾರ್ಯ ಭಾವ ಮತ್ತು ಪುರಂದರ ದಾಸರ ಭಾವ ಎರಡು ಒಂದೇ ಆಗಿದ್ದು, ಪರಸ್ಪರ ಪೂರಕವಾಗಿದೆ. ಪುರಂದರ ದಾಸರ ಅನುಸಂಧಾನ ಮಧ್ವಾಚಾರ್ಯರ ಚಿಂತನೆಯಾಗಿದೆ ಎಂದು ಪರ್ಯಾಯ ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶ ತೀರ್ಥ ಸ್ವಾಮೀಜಿ ಹೇಳಿದ್ದಾರೆ.
ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಬುಧವಾರ ನಡೆದ ಶ್ರೀಮಧ್ವ ಪುರಂದರೋತ್ಸವದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ವೇದ ಸಮ್ಮತವಾದ ಮಧ್ವಾಚಾರ್ಯರ ಸಿದ್ಧಾಂತವು ಪುರಂದದಾಸರು ಸೇರಿ ದಂತೆ ಎಲ್ಲ ದಾಸರ ಸಿದ್ಧಾಂತವಾಗಿದೆ. ಭಗವಂತನ ಅಭಿಪ್ರಾಯವು ಮಧ್ವಾ ಚಾರ್ಯರಿಂದ ದಾಸ ಪರಂಪರೆಯ ಮೂಲಕ ಈವರೆಗೆ ಉಳಿದುಕೊಂಡು ಬಂದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯ ತೀರ್ಥ ಸ್ವಾಮೀಜಿ ಉಪಸ್ಥಿತರಿದ್ದರು. ಮೈಸೂರು ರಾಮಚಂದ್ರಾಚಾರ್ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ಬಳಿಕ ಕುಂಭಾಶಿ ಪೂರ್ಣಚಂದ್ರ ಕಲಾ ಪ್ರತಿಷ್ಠಾನದಿಂದ ಶ್ರೀರಾಮ ಪಟ್ಟಾಭಿಷೇಕ ಯಕ್ಷಗಾನ ಪ್ರದರ್ಶನ ನಡೆಯಿತು.





