ಎ. ಈಶ್ವರಯ್ಯ ಸ್ಮಾರಕ ರಾಜ್ಯಮಟ್ಟದ ಛಾಯಾ ಚಿತ್ರ ಸ್ಪರ್ಧೆಯ ವಿಜೇತರು
ಉಡುಪಿ, ಫೆ.7: ಉಡುಪಿಯ ಎಂಜಿಎಂ ಕಾಲೇಜಿನ ಪತ್ರಿಕೋದ್ಯಮ ವಿಭಾಗ, ಬಿಳಿಕಲ್ಲು ಪ್ರಕಾಶನ ಹಾಗೂ ಫೋಕಸ್ ಸ್ಟುಡಿಯೋ ಸಹಯೋಗದಲ್ಲಿ ಹಮ್ಮಿಕೊಂಡ ಎ. ಈಶ್ವರಯ್ಯ ಸ್ಮರಣಾರ್ಥ ರಾಜ್ಯಮಟ್ಟದ ಛಾಯಾಚಿತ್ರ ಸ್ಪರ್ಧೆ ‘ನೆಲದ ನೆಲೆ ಗ್ರಾಮೀಣ ಸೊಬಗಿನ ನೈಜ ಚಿತ್ರಣ’ ಇದರ ಬಹುಮಾನ ವಿಜೇತರ ಹೆಸರುಗಳನ್ನು ಪ್ರಕಟಿಸಲಾಗಿದೆ.
ಪ್ರಥಮ ಬಹುಮಾನವನ್ನು ಕೊಪ್ಪಳದ ಭರತ್ ಕಂದಕೂರ್, ದ್ವಿತೀಯ ಬಹುಮಾನವನ್ನು ಸುರತ್ಕಲ್ನ ಕಾರ್ತಿಕ್ ಎಂ.ಡಿ ಹಾಗೂ ತೃತೀಯ ಬಹುಮಾನವನ್ನು ಮಂಗಳೂರಿನ ದೀಕ್ಷಿತ್ ಆರ್. ಪೈ ಪಡೆದಿದ್ದಾರೆ.
ಪ್ರಶಸ್ತಿಯನ್ನು ಪ್ರಸಿದ್ಧ ಛಾಯಾಗ್ರಾಹಕ ಗುರುದತ್ ಕಾಮತ್ ನಾಳೆ ಫೆ.8ರ ಶುಕ್ರವಾರ ಅಪರಾಹ್ನ 3:30ಕ್ಕೆ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ನಡೆಯುವ ‘ಕ್ಲಾಪ್ ಬೋರ್ಡ್ ಆ್ಯಂಡ್ ಬಿಯಾಂಡ್’ ವಿಚಾರ ಸಂಕಿರಣ ಮತ್ತು ಕಾರ್ಯಾಗಾರದ ಸಮಾರೋಪ ಸಮಾರಂಭದಲ್ಲಿ ವಿತರಿಸಲಿದ್ದಾರೆ.
ಸ್ಪರ್ಧೆಯ ಆಯ್ದ ಛಾಯಾಚಿತ್ರಗಳ ಪ್ರದರ್ಶನ ನಾಳೆ ಬೆಳಗ್ಗೆ 11:00ರಿಂದ ಸಂಜೆ 5:00 ಗಂಟೆಯವರೆಗೆ ಎಂಜಿಎಂ ಕಾಲೇಜಿನ ಗೀತಾಂಜಲಿ ಸಭಾಂಗಣ ದಲ್ಲಿ ನಡೆಯಲಿದೆ ಎಂದು ಕಾಲೇಜಿನ ಪತ್ರಿಕೋದ್ಯಮ ವಿಭಾಗದ ಮಂಜುನಾಥ ಕಾಮತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.





