ವೃದ್ಧ ಮಹಿಳೆಯರ ಮೇಲೆ ಹಲ್ಲೆ ಪ್ರಕರಣ: ಐವರು ಬಜರಂಗದಳ ಕಾರ್ಯಕರ್ತರ ಬಂಧನ

ಸಕಲೇಶಪುರ,ಫೆ.7: ಸಂತೆಯಲ್ಲಿ ಮಾಂಸದ ಅಹಾರ ಮಾರುತ್ತಿದ್ದಾರೆಂದು ಆರೋಪಿಸಿ ಟೆಂಟ್ಗಳನ್ನು ಸುಟ್ಟು ಇಬ್ಬರು ವೃದ್ದ ಮಹಿಳೆಯರ ಮೇಲೆ ಬಜರಂಗದಳದ ಕಾರ್ಯಕರ್ತರು ಹಲ್ಲೆ ನಡೆಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು 5 ಆರೋಪಿಗಳನ್ನು ಬಂಧಿಸಿ, ನ್ಯಾಯಲಯಕ್ಕೆ ಹಾಜರು ಪಡಿಸಿದ್ದಾರೆ.
ಪ್ರತಾಪ್, ರವಿ, ರಘು, ಕಾರ್ತಿಕ್ ಮತ್ತು ಚೇತನ್ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾಗಿದ್ದಾರೆ. ಪ್ರಮುಖ ಆರೋಪಿ ಜೀವನ್ ಬಂಧನಕ್ಕೆ ಬಲೆ ಬೀಸಲಾಗಿದೆ.
ಪ್ರಕರಣದ ಹಿನ್ನಲೆ: ಸುಮಾರು 40 ವರ್ಷಗಳಿಂದ ಸಂತೆ ಮೈದಾನದಲ್ಲಿ ಟೆಂಟ್ ಹಾಕಿ ವ್ಯಾಪಾರ ನಡೆಸುತ್ತಿದ್ದ ನಗರದ ಬಾಳೆಗದ್ದೆ ನಿವಾಸಿಗಳಾದ ಇಬ್ಬರು ವೃದ್ಧ ಮಹಿಳೆಯರಾದ ಖಮರುನ್ನಿಸಾ (70) ಹಾಗೂ ಶಂಶಾದ್(70) ಎಂಬವರ ಮೇಲೆ 8 ಮಂದಿ ಬಜರಂಗದಳ ಕಾರ್ಯಕರ್ತರು ದನದ ಮಾಂಸದ ಅಡುಗೆ ಮಾಡುತ್ತಿದ್ದಾರೆ ಎಂದು ಆರೋಪಿಸಿ ಹಲ್ಲೆ ನಡೆಸಿದ್ದರು. ಅಲ್ಲದೇ, ಟೆಂಟ್ ಅನ್ನು ಸುಟ್ಟು ಹಾಕಿ, ಬಿಸಿ ಸಾಂಬಾರ್ ವೃದ್ದೆಯರ ಮೇಲೆ ಎರಚಿ ಇನ್ನೊಮ್ಮೆ ಇಲ್ಲಿ ಮಾಂಸದ ಅಡುಗೆ ಮಾಡಿ ಮಾರಿದರೆ ನಿಮ್ಮನ್ನೇ ಸುಟ್ಟು ಹಾಕುತ್ತೇವೆ ಎಂದು ಬೆದರಿಕೆ ಹಾಕಿದ್ದ ಬಗ್ಗೆ ಪ್ರಕರಣ ದಾಖಲಾಗಿತ್ತು.





