ಸೇವಾ ಭದ್ರತೆಗೆ ಆಗ್ರಹ: ಹಾಸ್ಟೆಲ್ ನೌಕರರ ಧರಣಿ ಮೂರನೇ ದಿನಕ್ಕೆ
ಬೆಂಗಳೂರು, ಫೆ.7: ಸರಕಾರಿ ವಿದ್ಯಾರ್ಥಿ ನಿಲಯ ಹಾಗೂ ವಸತಿ ನಿಲಯಗಳಲ್ಲಿ ಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವ ಅಡುಗೆ ತಯಾರಕರು ಮತ್ತು ಸಹಾಯಕರಿಗೆ ನಿವೃತ್ತಿವರೆಗೂ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿ ಹಮ್ಮಿಕೊಂಡಿರುವ ಅನಿರ್ದಿಷ್ಟಾವಧಿ ಧರಣಿ ಮೂರನೇ ದಿನಕ್ಕೆ ಮುಂದುವರಿದಿದೆ.
ಬುಧವಾರದಿಂದ ಆರಂಭ ಮಾಡಿರುವ ಧರಣಿಯು ಸರಕಾರದಿಂದ ಯಾವುದೇ ಬೆಂಬಲ, ಭರವಸೆ ಸಿಗದ ಹಿನ್ನೆಲೆಯಲ್ಲಿ ಎರಡನೇ ದಿನ ಪೂರ್ತಿಗೊಂಡು ಮೂರನೇ ದಿನಕ್ಕೆ ಕಾಲಿಟ್ಟಿದೆ. ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಅಡಿಯಲ್ಲಿ ದುಡಿಯುತ್ತಿರುವ ಸಾವಿರಾರು ನೌಕರರು ಚಳಿ, ಗಾಳಿ ಎನ್ನದೇ ಬೀದಿಯಲ್ಲಿ ಮಲಗಿದ್ದಾರೆ.
ರಾಜ್ಯ ಸರಕಾರ ಹಾಸ್ಟೆಲ್ಗಳಲ್ಲಿನ ಅಡುಗೆ ತಯಾರಕರನ್ನು ಆರು ತಿಂಗಳಿಗೊಮ್ಮೆ ಕೆಲಸದಿಂದ ತೆಗೆಯಲು ಮುಂದಾಗಿದೆ. ಅದರ ಬದಲಿಗೆ, ಒಂದೇ ಬಾರಿಗೆ ನಮ್ಮ ಕುತ್ತಿಗೆಯನ್ನು ಕೊಯ್ದು ಬಿಡಲಿ ಎಂದು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಮಹಿಳೆಯೊಬ್ಬರು ಆಕ್ರೋಶ ವ್ಯಕ್ತಪಡಿಸಿದರು.
ಸದನದಲ್ಲಿ ರಾಜಕೀಯ ದೊಂಬರಾಟ ನಡೆಯುತ್ತಿದ್ದು, ನಮ್ಮ ಹೋರಾಟವನ್ನು, ನಮ್ಮ ನೋವನ್ನು ಕೇಳುವ ಮನಸ್ಸು ಯಾರಿಗೂ ಇಲ್ಲದಂತಾಗಿದೆ. ಕಳೆದ ಒಂದು ತಿಂಗಳಿನಿಂದ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಹಲವು ಭಾರಿ ಭೇಟಿ ಮಾಡಿ ಮಾತುಕತೆ ಮಾಡಲಾಗಿದೆ. ಅವರಿಗೆ ನಮ್ಮ ಮೇಲೆ ಕನಿಷ್ಠ ಕಾಳಜಿಯಿದ್ದರೆ, ನಮ್ಮ ಬೇಡಿಕೆಗಳನ್ನು ಅಂದೇ ಈಡೇರಿಸಬೇಕಿತ್ತು ಎಂದು ಹೋರಾಟದ ನಾಯಕತ್ವ ವಹಿಸಿಕೊಂಡಿರುವ ನಿತ್ಯಾನಂದಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಸರಕಾರ ನಮ್ಮ ಬೇಡಿಕೆಗಳನ್ನು ಈಡೇರಿಸುವವರೆಗೂ ನಾವು ಹೋರಾಟವನ್ನು ಮೊಟಕುಗೊಳಿಸುವುದಿಲ್ಲ ಎಂದ ಅವರು, ಸಮಾಜ ಕಲ್ಯಾಣ ಇಲಾಖೆಯ ಆಯುಕ್ತರು ಹಾಗೂ ಸರಕಾರದ ಅಧಿಕಾರಿಗಳು ಪೋಸ್ಟ್ ಮಾಸ್ಟರ್ ರೀತಿಯಲ್ಲಿ ಬಂದು ಹೋಗಿದ್ದಾರೆ. ನಮ್ಮ ಬೇಡಿಕೆಗಳು ಈ ಹಂತದಲ್ಲಿ ಈಡೇರಿಸುವ ಯಾವುದೇ ನಂಬಿಕೆಯಿಲ್ಲ. ಆದುದರಿಂದ ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಅವರು ತಿಳಿಸಿದರು.
ಹಾಸ್ಟೆಲ್ ನೌಕರರನ್ನು ಖಾಯಂ ಮಾಡಬೇಕು. ನಿವೃತ್ತಿವರೆಗೂ ಸೇವೆಯಲ್ಲಿ ಮುಂದುವರಿಯಲು ಅವಕಾಶ ನೀಡಬೇಕು. ವೇತನದಲ್ಲಿ ಕಡಿತ ಮಾಡಿರುವ ಭವಿಷ್ಯನಿಧಿ, ಇಎಸ್ಐ ಅನ್ನು ಖಾತೆಗಳಿಗೆ ಜಮಾ ಮಾಡಬೇಕು. ಬಾಕಿ ಉಳಿಸಿಕೊಂಡಿರುವ ವೇತನವನ್ನು ಕೂಡಲೇ ಬಿಡುಗಡೆ ಮಾಡಬೇಕು. ಕಡ್ಡಾಯವಾಗಿ ವಾರಕ್ಕೊಮ್ಮೆ ರಜೆ ನೀಡಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಸಂಬಂಧ ಸರಕಾರ ಸೂಕ್ತ ನಿರ್ಧಾರ ಪ್ರಕಟಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.