ಫೆ.8ರಿಂದ ರಿಯಾಯಿತಿಯಲ್ಲಿ ಪುಸ್ತಕ ಮಾರಾಟ: ಓದುಗರ ಬರುವಿಕೆಗಾಗಿ ಕಾಯುತ್ತಿರುವ ಪುಸ್ತಕ ಮೇಳ
ಬೆಂಗಳೂರು, ಫೆ.8: ಕನ್ನಡ ಪುಸ್ತಕ ಪ್ರಾಧಿಕಾರದ ನೇತೃತ್ವದಲ್ಲಿ ಸುಮಾರು 60ಪುಸ್ತಕ ಪ್ರಕಾಶನ ಸಂಸ್ಥೆಗಳು ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ ಪುಸ್ತಕ ಜಾತ್ರೆಯನ್ನು ಏರ್ಪಡಿಸಿದ್ದು, ಲಕ್ಷಾಂತರ ಪುಸ್ತಕಗಳು ಓದುಗರ ಬರುವಿಕೆಗಾಗಿ ಕಾಯುತ್ತಿವೆ.
ರವೀಂದ್ರ ಕಲಾಕ್ಷೇತ್ರದ ವಿಶಾಲ ಆವರಣದಲ್ಲಿ ನಾಡಿನ ವಿವಿಧ ಮೂಲೆಗಳಿಂದ ಆಗಮಿಸಿರುವ ಪುಸ್ತಕ ಪ್ರಕಾಶನ ಸಂಸ್ಥೆಗಳು ಸಾಹಿತ್ಯ, ಸಂಸ್ಕೃತಿ, ಸಾಮಾಜಿಕ, ರಾಜಕೀಯ, ಅದ್ಯಾತ್ಮ, ಆರೋಗ್ಯ, ಪ್ರವಾಸ ಕಥನ, ಅನುವಾದ ಒಳಗೊಂಡಂತೆ ಎಲ್ಲ ವಿಷಯಗಳ ಪುಸ್ತಕಗಳನ್ನು ಓದುಗರಿಗಾಗಿ ಪ್ರದರ್ಶನ ಹಾಗೂ ಮಾರಾಟಕ್ಕೆ ಇಟ್ಟಿದ್ದಾರೆ.
ಪುಸ್ತಕ ಪ್ರಕಾಶನ ಸಂಸ್ಥೆಗಳು: ನವಕರ್ನಾಟಕ ಪ್ರಕಾಶನ, ಸಪ್ನ ಬುಕ್ ಹೌಸ್, ಕ್ರಿಯಾ ಪ್ರಕಾಶನ, ಆಕೃತಿ ಪ್ರಕಾಶನ, ಚಂದ ಪ್ರಕಾಶನ, ವಸಂತ ಪ್ರಕಾಶನ, ಅಮ್ಮ ಪ್ರಕಾಶನ, ಕಾವ್ಯ ಕಲಾ ಪ್ರಕಾಶನ, ಸ್ನೇಹ ಬುಕ್ ಹೌಸ್, ಅಂಕಿತಾ, ಸಾವಣ್ಣ ಪ್ರಕಾಶನ, ಅಭಿನವ, ನ್ಯಾಷನಲ್ ಬುಕ್ ಟ್ರಸ್ಟ್, ಕೇಂದ್ರ ಸಾಹಿತ್ಯ ಅಕಾಡೆಮಿ, ಶಾಂತಿ ಪುಸ್ತಕ, ಟೋಟಲ್ ಕನ್ನಡ ಸೇರಿದಂತೆ ಕರ್ನಾಟಕ ಜಾನಪದ ಅಕಾಡೆಮಿ, ಲಲಿತಕಲಾ ಅಕಾಡೆಮಿ, ನಾಟಕ ಅಕಾಡೆಮಿ, ಶಿಲ್ಪಕಲಾ ಅಕಾಡೆಮಿ, ಯಕ್ಷಗಾನ ಅಕಾಡೆಮಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ ಸೇರಿದಂತೆ ಸುಮಾರು 60ಪ್ರಕಾಶನದ ಪುಸ್ತಕಗಳು ಮಾರಾಟಕ್ಕೆ ಸಿಗಲಿವೆ.
ಆಸಕ್ತಿದಾಯಕ ಪುಸ್ತಕಗಳು: ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಪ್ರಕಟಗೊಂಡಿರುವ ‘ಸಾಲು ದೀಪಗಳು’ ಪುಸ್ತಕವು ಆಧುನಿಕ ಸಾಹಿತ್ಯ ಪ್ರಕಾರದ ಪ್ರಾರಂಭದ ಲೇಖಕರಿಂದ ಮೊದಲಗೊಂಡು ಇಲ್ಲಿಯವರಿಗೆ ಲೇಖಕರ ಕುರಿತು ಆಸಕ್ತಿದಾಯಕ ಮಾಹಿತಿಯನ್ನೊಳಗೊಂಡಿದೆ. ಹಾಗೂ ಕುಲ ಕಸುಬು ಮತ್ತು ಜನ ಬದುಕು, ಬಹಮನಿ ಸಾಮ್ರಾಜ್ಯ, ದಕ್ಷಿಣ ದಂಡಾಜೀವಿಕ, ಬುಡಕಟ್ಟು ವೃತ್ತಿ ಮತ್ತು ಪಾರಂಪರಿಕ ಜ್ಞಾನ, ದಲಿತ ನೋಟ, ರೈತ ಕಾರ್ಮಿಕ ಓದು ಸೇರಿದಂತೆ ಹತ್ತು ಹಲವು ಪುಸ್ತಕಗಳು ಮಾರಾಟಕ್ಕಿದೆ.
ಕರ್ನಾಟಕ ಶಿಲ್ಪಕಲಾ ಅಕಾಡೆಮಿಯ ಪುಸ್ತಕಗಳು: ಕಲಾರಾಧನೆ, ಹೊಯ್ಸಳ ಶಿಲ್ಪಕಲೆ, ಶಿಲ್ಪಕಲಾ ಆರಾಧಕರು, ಕಲಾಚರಿತ್ರೆ, ಕನ್ನಡ ಶಿಲ್ಪಕಲೆಯ ಸಮಕಾಲೀನ ದೃಶ್ಯ, ಕರ್ನಾಟಕ ಆರಂಭಿಕ ಶಿಲ್ಪಕಲೆ, ಬಾದಾಮಿ ಚಾಲುಕ್ಯ ಶಿಲ್ಪಕಲೆ, ಗಂಗ ಶಿಲ್ಪಕಲೆ, ರಾಷ್ಟ್ರಕೂಟ ಶಿಲ್ಪಕಲೆ, ವಿಜಯನಗರ ಶಿಲ್ಪಕಲೆ, ಹೊಯ್ಸಳ ಶಿಲ್ಪಕಲೆ ಸೇರಿದಂತೆ ಶಿಲ್ಪಕಲೆಗೆ ಸಂಬಂಧಿಸಿದ ಹತ್ತು ಹಲವು ಪುಸ್ತಕಗಳು ಪ್ರದರ್ಶನ ಹಾಗೂ ಮಾರಾಟಕ್ಕಿವೆ.
ನವಕರ್ನಾಟಕ ಪ್ರಕಾಶನ: ಲೇಖಕ ಲಕ್ಷ್ಮಣ ಕೊಡಸೆ ಅವರ ಕೆಚ್ಚೆದೆಯ ಅಚ್ಚಕನ್ನಡಿಗ ಟಿಪ್ಪು ಸುಲ್ತಾನ, ಡಾ.ರಹಮತ್ ತರೀಕೆರೆರವರ ನಡೆದಷ್ಟೂ ನಾಡು, ಡಾ.ನಾ.ಸೋಮೇಶ್ವರ ಅವರ ಅದೃಶ್ಯ ಲೋಕದ ಅಗೋಚರ ಜೀವಿಗಳು, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರ ಎರವಲು ಪದಕೋಶ, ಪಾ.ವೆಂ.ಅಚಾರ್ಯರವರ ಪದಾರ್ಥ ಚಿಂತಾಮಣಿ, ಪ್ರೊ.ರಮೇಶ್ ರಾವ್ರವರ ಕ್ಯಾನ್ಸರ್ ಯಾರಿಗೆ ಮತ್ತು ಏಕೆ ಬರುತ್ತದೆ? ಸೇರಿದಂತೆ ಹತ್ತು ಹಲವು ಉಪಯುಕ್ತ ಪುಸ್ತಕಗಳು ಮಾರಾಟಕ್ಕೆ ಇಡಲಾಗಿದೆ.
ಅಭಿನವ ಪ್ರಕಾಶನ: ಹಿರಿಯ ಸಾಹಿತಿ ದೇವನೂರ ಮಹಾದೇವರ ಎದೆಗೆ ಬಿದ್ದ ಅಕ್ಷರ, ಎಚ್.ನರಸಿಂಹಯ್ಯರವರ ಆತ್ಮಕತೆ ಹೋರಾಟದ ಹಾದಿ, ವಿ.ಕೃ.ಗೋಕಾಕ್ರವರ ಆಂಗ್ಲ ಸಾಹಿತ್ಯ ನೀಡಿದ ಸ್ಫೂರ್ತಿ, ಚೆಲುವಿನ ನಿಲುವು, ಹಿರಿಯ ಸಂಶೋಧಕ ಷ.ಶೆಟ್ಟರ್ರವರ ಸಂಶೋಧನಾ ಕೃತಿಗಳು ಸೇರಿದಂತೆ ಸಂಶೋಧನೆ, ಸಾಹಿತ್ಯ, ಸಾಮಾಜಿಕ ವಿಷಯಗಳಿಗೆ ಸಂಬಂಧಿಸಿದ ಪುಸ್ತಕಗಳು ಮೇಳದಲ್ಲಿವೆ.
ಕ್ರಿಯಾ ಪ್ರಕಾಶನ: ವಿಚಾರವಾದಿ ಎ.ಕೆ.ಸುಬ್ಬಯ್ಯರ ಆರೆಸ್ಸೆಸ್ ಅಂತರಂಗ, ನ್ಯಾ.ಎಚ್.ಎನ್.ನಾಗಮೋಹನದಾಸ್ರ ಸಂವಿಧಾನ ಓದು, ಪಿಕೆಪಿ ಕೃಷ್ಣನ್ ಅನುವಾದಿಸಿರುವ ನರಕದ ಗರ್ಭಗುಡಿಯೊಳಗೆ, ಕೆ.ನೀಲಾರವರ ಜೆಎನ್ಯು ಮೇಲೆ ದಾಳಿ-ಭಾರತದ ಮೇಲೆ ದಾಳಿ ಸೇರಿದಂತೆ ಅಂಬೇಡ್ಕರ್, ಮಾರ್ಕ್ಸ್, ಲೆನಿನ್ ಕುರಿತ ವೈಚಾರಿಕ ಚಿಂತನೆಯನ್ನು ಪರಿಚಯಿಸುವ ಪುಸ್ತಕಗಳು ಮಾರಾಟಕ್ಕೆ ಲಭ್ಯವಿವೆ.







