ಕಳಸ ಹೋಬಳಿಗೆ ತಾಲೂಕಿನ ಕಿರೀಟ: ನನಸಾದ 3 ದಶಕಗಳ ಕನಸು

ಕಳಸ, ಫೆ.8: ಕಳಸ ತಾಲೂಕು ಕೇಂದ್ರವಾಗಬೇಕು ಎನ್ನುವ ಕಳೆದ ಮೂರು ದಶಕಗಳ ಇಲ್ಲಿಯ ಸಾವಿರಾರು ಜನರ ಕನಸು ಹಾಗೂ ಬೇಡಿಕೆ ಈ ಬಾರಿಯ ಬಜೆಟ್ನಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿಯ ಘೋಷನೆ ಮಾಡುವುದರೊಂದಿಗೆ ನನಸಾಗಿದೆ.
ಕಳೆದ ಮೂವತ್ತು ವರ್ಷಗಳಿಂದ ಇಲ್ಲಿಯ ಪ್ರತಿಯೊಂದು ಪಕ್ಷಗಳು, ನಾಯಕರುಗಳು, ಸಂಘ ಸಂಸ್ಥೆಗಳು ಹೋರಾಟವನ್ನು ಮಾಡಿಕೊಂಡು ಬಂದಿದ್ದವು. ಅದೆಷ್ಟೋ ಪ್ರತಿಭಟನೆಗಳು ಕಳಸ ಬಂದ್ ಮುಖಾಂತರ ಸರ್ಕಾರದ ಕಣ್ತೆರೆಸುವ ಯತ್ನವನ್ನು ಮಾಡಿದರಾದರೂ ಬೇಡಿಕೆ ಈಡೇರಿರಲಿಲ್ಲ.
ಕೆಲ ವರ್ಷಗಳ ಹಿಂದೆ 49 ತಾಲೂಕು ಕೇಂದ್ರ ಘೋಷಣೆಯಾದ ಸಂದರ್ಭದಲ್ಲಿ ಕಳಸ ತಾಲೂಕಿನ ಘೋಷಣೆಯನ್ನು ಜನರು ನಿರೀಕ್ಷಿಸಿದ್ದರು. ಆದರೆ ನಿರೀಕ್ಷೆ ಸುಳ್ಳಾಗಿತ್ತು. ಇಲ್ಲಿಯ ರಾಜಕೀಯ ನಾಯಕರುಗಳು ಸಾಕಷ್ಟು ಟೀಕೆಗಳನ್ನು ಎದುರಿಸುವಂತಾಯಿತು. ಅಲ್ಲದೆ ಇನ್ನು ಕಳಸ ತಾಲೂಕು ಕೇಂದ್ರ ಬರೇ ಕನಸು ಮಾತ್ರ ಎನ್ನುವ ಸ್ಥಿತಿಗೂ ಬಂದಿತ್ತು. ಕಳೆದ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಈಗಿನ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಚಾರಕ್ಕಾಗಿ ಬಂದ ಸಂದರ್ಭದಲ್ಲಿ ನಾನು ಮುಖ್ಯಮಂತ್ರಿ ಆದರೆ 24 ಗಂಟೆಯಲ್ಲಿ ತಾಲೂಕು ಘೋಷನೆ ಮಾಡುವ ಭರವಸೆಯನ್ನು ಕೂಡ ಕೊಟ್ಟಿದ್ದರು. ಆದರೆ ಕಳೆದ ಸಾಲಿನ ಬಜೆಟ್ನಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದರೂ ಕೂಡ ಘೋಷಣೆಯಾಗಿರಲಿಲ್ಲ. ನಂತರದಲ್ಲಿ ಇಲ್ಲಿಯ ಮೂರು ಪಕ್ಷಗಳ ನಾಯಕರು ಸಾಕಷ್ಟು ಒತ್ತಡಗಳನ್ನು ಹಾಕಿದ್ದರು. ಅಲ್ಲದೆ ಬೆಳಗಾವಿಯಲ್ಲಿ ನಡೆದ ಅಧಿವೇಶನದಲ್ಲೂ ಈ ಬಗ್ಗೆ ಚರ್ಚೆಗೂ ಬಂದಿತ್ತು. ಆದರೆ ಈ ಬಾರಿಯ ಬಜೆಟ್ ನಲ್ಲಿ ಕಳಸ ತಾಲೂಕು ಕೇಂದ್ರ ಘೋಷನೆಯಾಗುತ್ತದೆ ಎನ್ನುವ ನಿರೀಕ್ಷೆ ಯಾರಲ್ಲೂ ಇರಲಿಲ್ಲ. ಆದರೆ ಬಜೆಟ್ ಮಂಡನೆಯಲ್ಲಿ ಕುಮಾರಸ್ವಾಮಿ ಕಳಸವನ್ನು ತಾಲೂಕು ಕೇಂದ್ರ ಘೋಷಣೆ ಮಾಡಿದಾಗ ಕಳಸ ಹೋಬಳಿಯ ಸಾವಿರಾರು ಜನರ ಕನಸು ನನಸಾದಾಂತಾಗಿದೆ.
ಮುಖ್ಯಮಂತ್ರಿಗಳಿಗೂ ಕಳಸಕ್ಕೂ ಇದ್ದ ನಂಟು: ಸಿಎಂ ಕುಮಾರಸ್ವಾಮಿಗೂ ಕಳಸಕ್ಕೂ ಹತ್ತಿರದ ನಂಟು ಇತ್ತು. ಅವರು ಇಲ್ಲಿನ ಜೆಡಿಎಸ್ ಮುಖಂಡರುಗಳಿಗೆ ತುಂಬಾ ಹತ್ತಿರವಾಗಿದ್ದರು. ಆ ಕಾರಣಕ್ಕಾಗಿಯೇ ಇಲ್ಲಿಯ ಹಿರಿಯರಾದ ಹೆಚ್.ಡಿ.ಜ್ವಾಲನಯ್ಯರವನ್ನು ರಾಜ್ಯ ಉಪಾಧ್ಯಕ್ಷರನ್ನಾಗಿ ಕೂಡ ಮಾಡಿದ್ದರು. ಇಲ್ಲಿಗೆ ಹಲವಾರು ಬಾರಿ ಭೇಟಿ ನೀಡಿದ್ದ ಕುಮಾರಸ್ವಾಮಿ ಕಳಸ ಇನಾಂ ಭೂಮಿಯ ಹೋರಾಟದ ಸಂದರ್ಭದಲ್ಲಿ ಖುದ್ದಾಗಿ ಬಂದು ರಸ್ತೆಯಲ್ಲಿ ಧರಣಿ ಕುಳಿತು ಅವತ್ತು ಎದುರಾಗಿದ್ದ ದೊಡ್ಡ ಸಮಸ್ಯೆಯನ್ನು ನಿವಾರಿಸಿದ್ದರು. ಅಲ್ಲದೆ ಕ್ರಿಕೇಟ್ ಪಂದ್ಯಾವಳಿಯೊಂದನ್ನು ನಡೆಸಿದಾಗಲೂ ಅದರ ಉದ್ಘಾಟನೆಗೂ ಬಂದಿದ್ದರು. ಚುನಾವಣೆಯ ಸಂದರ್ಭದಲ್ಲಿ ಇಲ್ಲಿಯ ಮುಖಂಡರ ಪರವಾಗಿ ಪ್ರಚಾರವನ್ನು ಕೂಡ ಮಾಡಿದ್ದರು.
ಅನುಕೂಲಗಳು: ಪ್ರಸ್ತುತ ಮೂಡಿಗೆರೆ ತಾಲೂಕಿಗೆ ಒಳಪಟ್ಟಿರುವ ಕಳಸ ಹೋಬಳಿಯು ತಾಲೂಕು ಕೇಂದ್ರದಿಂದ ಸುಮಾರು 100 ಕಿ.ಮೀ ದೂರದಲ್ಲಿದೆ. ಇಲ್ಲಿ ವಾಸಿಸುವ ಹೆಚ್ಚಿನ ಜನರು ಕೂಲಿ ಕಾರ್ಮಿಕರೆ ಆಗಿದ್ದಾರೆ. ಇವರಿಗೆ ತಾಲೂಕು ಕಚೇರಿಯ ಮುಖಾಂತರ ಆಗಬೇಕಾದ ಕೆಲಸವನ್ನು ಮಾಡಿಸಬೇಕಾದರೆ ಅದೊಂದು ದೊಡ್ಡ ಸಹಾಸವೇ ಆಗುತ್ತಿತ್ತು. ತಿಂಗಳು ವರ್ಷಗಳ ಕಾಲ ಅಲೆದಾಡುವಂತಾಗುತ್ತಿತ್ತು.
ಕಳಸಕ್ಕೆ ಸೇರಲಿರುವ ಗ್ರಾಮಗಳು: ಕಳಸ, ಹೊರನಾಡು, ಗಂಗಾಮೂಲ, ಕುದುರೆಮುಖ, ಬಿಳಗಲ್, ಜಾಂಬಳೆ, ಬೆಲ್ಲಿಬೀಡು, ಕಳಕೋಡು, ಬಲಿಗೆ, ಅತ್ತಿಕುಡಿಗೆ, ಮರಸಣಿಗೆ, ತನೂಡಿಹಳುವಳ್ಳಿ, ಕೆಳಗೂರು, ಮರಸಣಿಗೆ, ದುರ್ಗದಹಳ್ಳಿ, ಬಲ್ಲಾಳರಾಯನ ದುರ್ಗ, ಮೇಗೂರು, ಜಾವಳಿ, ಬಾಳೂರು, ನಿಡುವಾಳೆ, ಮಾಳಿಂಗನಾಡು, ಕಲ್ಮನೆ, ಮಾಗುಂಡಿ, ಮಧುಗುಂಡಿ, ಇಡಕಿಣಿ, ಮರ್ಕಲ್ ಮಂತಾದ ಗ್ರಾಮಗಳ ಪ್ರಸ್ತಾವಣೆಯನ್ನು ಕಳುಹಿಸಲಾಗಿತ್ತಾದರೂ ಇದರಲ್ಲಿ ಕೆಲ ಗ್ರಾಮಗಳು ಆಕ್ಷೇಪವನ್ನು ಕೂಡ ವ್ಯಕ್ತಪಡಿಸಿರುವುದರಿಂದ ಕೆಲವೊಂದು ಗ್ರಾಮಗಳನ್ನು ಹೊರತು ಪಡಿಸಿ ಪ್ರಸ್ತಾವಣೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.
ಅಂಕಿ ಅಂಶಗಳು: ತಾಲೂಕಿನಿಂದ ಕಳಸ ಪಟ್ಟಣಕ್ಕೆ ಇರುವ ದೂರ 60ಕಿ.ಮೀ, ಬೌಗೋಳಿಕ ವಿಸ್ತೀರ್ಣ 31,411,46 ಹೆಕ್ಟೇರ್, ಕಂದಾಯ ಗ್ರಾಮಗಳು 13, ದಾಖಲೆ ಗ್ರಾಮಗಳು 384, ಜನಸಂಖ್ಯೆ 48,098, ವಾರ್ಷಿಕ ಸರಾಸರಿ ಮಳೆ 3,200 ಮೀ.ಮಿ.








