ದಿಲ್ಲಿಯಲ್ಲೂ ಸದ್ದು ಮಾಡಿದ ಬಿಎಸ್ವೈ ಆಪರೇಶನ್ ಕಮಲದ ಆಡಿಯೋ
ಮೋದಿ, ಶಾ, ಬಿಎಸ್ವೈ ಅವರಿಂದ ಕರ್ನಾಟಕ ಸರಕಾರ ಉರುಳಿಸಲು ಸಂಚು: ಕಾಂಗ್ರೆಸ್
ಹೊಸದಿಲ್ಲಿ, ಫೆ.9: ಕರ್ನಾಟಕದಲ್ಲಿರುವ ಸಂವಿಧಾನ ಬದ್ಧ ಸರಕಾರವನ್ನು ಉರುಳಿಸಲು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಯತ್ನಿಸುತ್ತಿದ್ದಾರೆ. ಇದಕ್ಕಾಗಿ ಕೋಟ್ಯಂತರ ರೂ. ಆಮಿಷ ಒಡ್ಡುತ್ತಿದ್ದು, ಇಷ್ಟೊಂದು ಹಣ ಬಿಜೆಪಿಗೆ ಎಲ್ಲಿಂದ ಬಂತು.ಇದು ಕಪ್ಪು ಹಣವೋ ಅಥವಾ ಬಿಳಿ ಹಣವೋ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್ ಶನಿವಾರ ಇಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ.
ಇತ್ತೀಚೆಗೆ ದೇವದುರ್ಗದಲ್ಲಿ ಗುರುಮಿಠಕಲ್ ಜೆಡಿಎಸ್ ಶಾಸಕ ಮಗ ಶರಣಗೌಡನೊಂದಿಗೆ ಯಡಿಯೂರಪ್ಪ ಆಪರೇಶನ್ ಕಮಲದ ಬಗ್ಗೆ ಮಾತನಾಡಿರುವ ವಿಡಿಯೋವನ್ನು ದಿಲ್ಲಿಯಲ್ಲಿ ಪತ್ರಕರ್ತರ ಮುಂದೆ ಕೇಳಿಸಲಾಯಿತು.
ಒಬ್ಬ ಶಾಸಕನಿಗೆ 10 ಕೋ.ರೂ. ನೀಡುವ ಜೊತೆಗೆ ಚುನಾವಣಾ ಖರ್ಚು-ವೆಚ್ಚ ನೀಡುವುದಾಗಿ ಆಮಿಷ ಒಡುತ್ತಿದ್ದಾರೆ. ಆಡಿಯೋದಲ್ಲಿ ಕರ್ನಾಟಕದ ಪ್ರಾಮಾಣಿಕ ಸ್ಪೀಕರ್ ಹೆಸರನ್ನು ಉಲ್ಲೇಖಿಸಲಾಗಿದೆ. ಆಪರೇಶನ್ ಕಮಲಕ್ಕೆ 450 ಕೋ.ರೂ. ಖರ್ಚು ಮಾಡಲು ಹೊರಟಿರುವ ಬಿಜೆಪಿಗೆ ಇಷ್ಟೊಂದು ಹಣ ಎಲ್ಲಿಂದ ಬಂತು. ಇದು ಕಪ್ಪು ಹಣವೋ, ಬಿಳಿ ಹಣವೋ? ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ್ ಪ್ರಶ್ನಿಸಿದ್ದಾರೆ.