ದೃಷ್ಟಿ ವಿಕಲಚೇತನ ಸಿದ್ದು ಲೌಟೆಯ ಐಎಎಸ್ ಕನಸಿಗೆ ನೆರವಾಗಲು ಮನವಿ

ಉಡುಪಿ, ಫೆ.10: ಅಗಾಧ ನೆನಪಿನ ಶಕ್ತಿ, ಗಣಿತದಲ್ಲಿ ಪ್ರಾವೀಣ್ಯತೆ ಹೊಂದಿರುವ ಹುಟ್ಟು ದೃಷ್ಟಿ ವಿಕಲಚೇತನರಾದ ಸಿದ್ದು ಎಸ್.ಲೌಟೆ, ಐಎಎಸ್ ಅಧಿಕಾರಿ ಯಾಗುವ ಕನಸ್ಸಿಗೆ ಪ್ರೋತ್ಸಾಹ ಹಾಗೂ ನೆರವು ನೀಡುವಂತೆ ಮನವಿ ಮಾಡಿದ್ದಾರೆ.
ಉಡುಪಿಯಲ್ಲಿ ಶನಿವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಐಎಎಸ್ ಅಧಿಕಾರಿಯಾಗಿ ಹಿಂದುಳಿದ, ನೊಂದವರ, ದೀನ ದಲಿತರ ಹಾಗೂ ಮಹಿಳೆಯರ ಸೇವೆ ಮಾಡುವ ಗುರಿಯನ್ನು ಹೊಂದಿದ್ದು, ಅದಕ್ಕಾಗಿ ಲಕ್ಷಾಂತರ ರೂ. ಹಣದ ಅಗತ್ಯವಿದೆ. ಇದರ ಅಧ್ಯಯನಕ್ಕೆ ನೆರವು ನೀಡಿದರೆ ನನ್ನ ಗುರಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು.
ಸಾಹಿತಿ ಶೇಖರ್ ಭಂಡಾರಿ ಕಾರ್ಕಳ ಮಾತನಾಡಿ, ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕಕಮಾರಿ ಗ್ರಾಮದಲ್ಲಿ ಹುಟ್ಟಿದ ಸಿದ್ದು ಲೌಟೆ, ಹುಟ್ಟು ದೃಷ್ಟಿ ವಿಕಲಚೇತನರಾಗಿದ್ದಾರೆ. ಇದೀಗ ಅವರು ಬೆಂಗಳೂರಿನಲ್ಲಿ ನಾಲ್ಕನೇ ವರ್ಷದ ಕಾನೂನು ಪದವಿ ಪಡೆಯುತ್ತಿದ್ದಾರೆ. ಕಂಪ್ಯೂಟರ್ ಶಿಕ್ಷಣಕ್ಕೂ ಸೇರ್ಪಡೆ ಯಾಗಿದ್ದೇನೆ ಎಂದು ಹೇಳಿದರು.
ಅಂಕಿಗಳ ಗುಣಾಕಾರ ಮಾಡಿ ಕ್ಷಣಾರ್ಧದಲ್ಲೇ ಉತ್ತರಿಸುತ್ತಾರೆ. ಯಾವುದೇ ವರ್ಷದ ಯಾವುದೇ ತಿಂಗಳಿನ ದಿನಾಂಕ ಯಾವ ವಾರ ಬರುತ್ತದೆ ಎನ್ನುವುದನ್ನು ನಿಖರವಾಗಿ ಹೇಳುತ್ತಾರೆ. ಮುಂದಿನ 5 ಸಾವಿರ ವರ್ಷಗಳ ಹಾಗೂ ಹಿಂದಿನ 5 ಸಾವಿರ ವರ್ಷಗಳ ದಿನಾಂಕವನ್ನು ಯಾವ ವಾರ ಬರುತ್ತದೆಯೆಂದು ಹೇಳುತ್ತಾರೆ. ಇವರ ಐಎಎಸ್ ಕನಸ್ಸಿಗೆ ನೆರವು ನೀಡುವ ಇಚ್ಛಿಸುವರು ಇವರ ಮೊಬೈಲ್ ನಂಬ 9980068440ನ್ನು ಸಂಪರ್ಕಿಸಬಹುದು ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸುರೇಶ್ ಸಿ.ಎಂ., ಸುರೇಶ್ ಪಾಂಗಾಳ ಉಪಸ್ಥಿತರಿದ್ದರು.







