'ಸರ್ಕಾರ ಮಾಡಬೇಕಾದ ಕೆಲಸವನ್ನು ಸಮರ್ಪಕವಾಗಿ ಮಾಡುವ ಪುಣ್ಯ ಪುರುಷ ಹೆಗ್ಗಡೆಯವರು'
ಧರ್ಮಸ್ಥಳದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟನೆ

ಬೆಳ್ತಂಗಡಿ, ಫೆ. 10: ಲೋಕ ಕಲ್ಯಾಣ ಮತ್ತು ವಿಶ್ವ ಶಾಂತಿಗಾಗಿ ಸರ್ಕಾರ ಮಾಡಬೇಕಾದ ಕೆಲಸವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಸದಾ ಸಮರ್ಪಕವಾಗಿ ಮಾಡುತ್ತಿದ್ದಾರೆ ಎಂದು ಸಚಿವೆ ಜಯಮಾಲಾ ಹೇಳಿದರು.
ಧರ್ಮಸ್ಥಳದಲ್ಲಿ ಮಹಾ ಮಸ್ತಕಾಭಿಷೇಕ ಸಂದರ್ಭದಲ್ಲಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮವನ್ನು ರತ್ನಗಿರಿಯಲ್ಲಿ ಉದ್ಘಾಟಿಸಿ ಅವರು ಮಾತನಾಡಿದರು. ನಟರಾಜನ ಮೂರ್ತಿಯನ್ನು ಮೂಡಬಿದ್ರೆಯ ಡಾ. ಎಂ. ಮೋಹನ ಆಳ್ವ ಅವರಿಗೆ ನೀಡುವ ಮೂಲಕ ಅವರು ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕಾರ್ಕಳದಿಂದ ಧರ್ಮಸ್ಥಳಕ್ಕೆ ಬಾಹುಬಲಿ ಮೂರ್ತಿ ಸಾಗಾಣಿಕೆ ಮಾಡುವ ಸಂದರ್ಭ ತಾನು ನಿತ್ಯವೂ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದುದನ್ನು ಧನ್ಯತೆಯಿಂದ ಸ್ಮರಿಸಿದರು.
ಚಲನಚಿತ್ರ ನಟ ರಮೇಶ್ ಅರವಿಂದ್ ಲೇಸರ್ ಶೋ ಕಾರ್ಯಕ್ರಮವನ್ನು ಉದ್ಘಾಟಿಸಿ ಧರ್ಮ, ಧಾರ್ಮಿಕ ಕ್ಷೇತ್ರಗಳು ಮತ್ತು ದೇವಸ್ಥಾನಗಳು ಅಪರಿಚಿ ತರನ್ನು ಒಟ್ಟು ಮಾಡುವ ಹಾಗೂ ಆತ್ಮೀಯತೆಯಿಂದ ಬೆರೆಯುವಂತೆ ಮಾಡುವ ಸಾರ್ಥಕ ಕೆಲಸವನ್ನು ಮಾಡುತ್ತವೆ. ಈ ದಿಸೆಯಲ್ಲಿ ಧರ್ಮಸ್ಥಳದ ಸೇವೆ, ಸಾಧನೆ ಶ್ಲಾಘನೀಯವಾಗಿದೆ ಎಂದರು.
ನಮ್ಮೆಲ್ಲರಲ್ಲಿಯೂ ಸತ್ಯ, ಅಹಿಂಸೆ, ತ್ಯಾಗ, ತಾಳ್ಮೆ, ಸಂಯಮ ಮೊದಲಾದ ಮಾನವೀಯ ಗುಣಗಳು ಬಾಹುಬಲಿಯ ಮೂರ್ತಿಯಷ್ಟೇ ಉನ್ನತವಾಗಿರಬೇಕು ಎಂಬ ಉದ್ದೇಶದಿಂದ ಎತ್ತರದ ಬಾಹುಬಲಿ ಮೂರ್ತಿಯನ್ನು ಪ್ರತಿಷ್ಠಾಪಿಸಿದ್ದಾರೆ ಎಂದು ಅವರು ಹೇಳಿದರು. ಆದುದರಿಂದ ನಿತ್ಯವೂ ನಮ್ಮ ಗುಣಗಳು ಮತ್ತು ಆದರ್ಶಗಳು ಶ್ರೇಷ್ಠತೆ ಮತ್ತು ಉತ್ಕøಷ್ಟತೆನ್ನು ಹೊಂದಿರಬೇಕು ಎಂದು ಅವರು ಹೇಳಿದರು.
ಬಳಿಕ 15 ನಿಮಿಷಗಳ ಕಾಲ ಲೇಸರ್ ಶೋ ನಡೆಯಿತು. ಬಾಹುಬಲಿ ಮೂರ್ತಿಯ ಮೇಲೆ ಧ್ವನಿ ಮತ್ತು ಬೆಳಕಿನ ಅಲೆಗಳನ್ನು ಹಾಯಿಸಿ ಭರತ-ಬಾಹುಬಲಿಯ ಕಥಾನಕವನ್ನು ವಿವರಿಸುವುದೇ ಲೇಸರ್ ಶೋ. ಇದೇ 10 ರಿಂದ ಭಾನುವಾರ ಪ್ರತಿ ದಿನ ಸಂಜೆ ಗಂಟೆ 7 ರಿಂದ 8 ರ ವರೆಗೆ ಮೂರು ಬಾರಿ 15 ನಿಮಿಷಗಳ ಅವಧಿಯ ಲೇಸರ್ ಶೋ ನಡೆಯಲಿದೆ ಎಂದು ಸಂಘಟಕರು ತಿಳಿಸಿದ್ದಾರೆ.
ಪ್ರೊ.ಎಸ್. ಪ್ರಭಾಕರ್ ಬಾಹುಬಲಿ ಮೂರ್ತಿ ಕೆತ್ತಿದ ರೆಂಜಾಳ ಗೋಪಾಲಕೃಷ್ಣ ಶೆಣೈ ಅವರು ಮೂರ್ತಿಯನ್ನು ರತ್ನಗಿರಿಯಲ್ಲಿ ಅನಾವರಣಗೊಳಿಸಿದರು.
ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು, ಹೇಮಾವತಿ ಹೆಗ್ಗಡೆಯವರು, ಶಾಸಕ ಹರೀಶ್ ಪೂಂಜಾ, ಡಿ. ಸುರೇಂದ್ರ ಕುಮಾರ್, ಅನಿತಾ ಸುರೇಂದ್ರ ಕುಮಾರ್, ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಡಾ. ಎಂ. ಮೋಹನ ಆಳ್ವ ಮತ್ತು ಡಾ. ಬಿ. ಯಶೋವರ್ಮ ಉಪಸ್ಥಿತರಿದ್ದರು.
ಪ್ರೊ. ಎಮ್. ರಾಮಚಂದ್ರ ಕಾರ್ಕಳ ಸ್ವಾಗತಿಸಿದರು. ಸುನಿಲ್ ಕುಮಾರ್ ಬಜಗೋಳಿ ಧನ್ಯವಾದವಿತ್ತರು. ಎ. ಮಿತ್ರಸೇನ ಜೈನ್ ಉಪ್ಪಿನಂಗಡಿ ಕಾರ್ಯಕ್ರಮ ನಿರ್ವಹಿಸಿದರು.
ಅಮೃತವರ್ಷಿಣಿ ಸಭಭವನದಲ್ಲಿ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗಳ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.







