20 ಕೆರೆಗಳ ಅಭಿವೃದ್ಧಿಗೆ ಬಿಬಿಎಂಪಿ ಯೋಜನೆ
ಬೆಂಗಳೂರು, ಫೆ.12: ಬಿಬಿಎಂಪಿ ವ್ಯಾಪ್ತಿಯ 20 ಕೆರೆಗಳನ್ನು 20 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪಾಲಿಕೆಯು ಯೋಜನೆ ರೂಪಿಸಿದೆ. ನಗರದ ಕೆರೆಗಳು ಕಲುಷಿತಗೊಳ್ಳುವುದು ಹಾಗೂ ಒತ್ತುವರಿಯಾಗುತ್ತಿರುವ ಬಗ್ಗೆ ಪಾಲಿಕೆ ಸಭೆಯಲ್ಲಿ ಹಲವಾರು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ, ಪಾಲಿಕೆಯು ಕೆರೆಗಳ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಲಾಗಿದೆ. ಅದರಂತೆ ಪ್ರತಿಯೊಂದು ಕೆರೆ ಅಭಿವೃದ್ಧಿಗೆ ಒಂದು ಕೋಟಿ ರೂ. ವೆಚ್ಚ ಮಾಡಲು ನಿರ್ಧರಿಸಲಾಗಿದೆ.
ಕೆರೆಗಳ ಅಭಿವೃದ್ಧಿ ಕಾಮಗಾರಿಯನ್ನು ಮುಂದಿನ 11 ತಿಂಗಳುಗಳಲ್ಲಿ ಪೂರ್ಣಗೊಳಿಸಬೇಕು ಎಂದು ಟೆಂಡರ್ನಲ್ಲಿ ಸೂಚಿಸಲಾಗಿದೆ. ಅದರ ಪ್ರಕಾರ, ಪ್ರತಿಯೊಂದು ಕೆರೆಯ ಬಂಡುದಾರಿ, ತಂತಿಬೇಲಿ, ಆವರಣ ಅಭಿವೃದ್ಧಿ ಹಾಗೂ ಕೆರೆಗೆ ಕಲುಷಿತ ಅಥವಾ ತ್ಯಾಜ್ಯ ನೀರು ಸೇರದಂತೆ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ನೂರಾರು ಎಕರೆ ವಿಸ್ತೀರ್ಣದಲ್ಲಿರುವ ಕೆರೆಗಳ ಅಭಿವೃದ್ಧಿಗೆ ಒಂದು ಕೋಟಿ ರೂ.ಸಾಕಾಗುವುದಿಲ್ಲ. ಆದುದರಿಂದಾಗಿ ಮೊದಲ ಹಂತವಾಗಿ ಕೆರೆ ಒತ್ತುವರಿ ಹಾಗೂ ತ್ಯಾಜ್ಯ ನೀರು ತಡೆಗೆ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೆ, ಪ್ರಸಕ್ತ ಬಜೆಟ್ನಲ್ಲಿ ಕೆರೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಮೇಯರ್ ಹಾಗೂ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಮನವಿ ಮಾಡಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಅಭಿವೃದ್ಧಿಯಾಗಲಿರುವ ಕೆರೆಗಳು: ಹಲಸೂರು, ಬಸಪುರ, ದೊಡ್ಡಕನ್ನೇನಹಳ್ಳಿ, ಉಳ್ಳಾಲ, ಕೋನೇನ ಅಗ್ರಹಾರ, ಬೈಯಪ್ಪನಕುಂಟೆ, ಕಮ್ಮಗೊಂಡನಹಳ್ಳಿ, ದೇವರಬೀಸನಹಳ್ಳಿ, ಸುಬ್ರಮಣ್ಯಪುರ, ವಿಭೂತಿಪುರ, ಸಾದರಮಂಗಲ, ಮಂಗನಮ್ಮನಪಾಳ್ಯ, ಉತ್ತರಹಳ್ಳಿ, ಕೊಡಿಗೆಸಿಂಗಸಂದ್ರ, ಸೋಮಸುಂದರಪಾಳ್ಯ, ಗರುಡಾಚಾರಪಾಳ್ಯ, ಕೊತ್ತನೂರು, ಹೇರೋಹಳ್ಳಿ, ದೇವರಕೆರೆಗಳು ಅಭಿವೃದ್ಧಿಯಾಗಲಿವೆ.