ಮದ್ಯ ಸೇವನೆಗೆ ಹಣ ನೀಡದ ಪತ್ನಿಯ ಕೊಲೆಯತ್ನ ಪ್ರಕರಣ: ಅಪರಾಧಿಗೆ 10 ವರ್ಷ ಜೈಲು ಶಿಕ್ಷೆ
ಮಂಗಳೂರು, ಫೆ.12: ಮದ್ಯ ಸೇವನೆಗೆ ಹಣ ನೀಡದ ಸಿಟ್ಟಿನಿಂದ ಚೂರಿಯಿಂದ ಇರಿದು ಪತ್ನಿಯ ಕೊಲೆಗೆ ಯತ್ನಿಸಿದ ಅಪರಾಧಿಗೆ ಒಂದನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 10 ವರ್ಷ ಜೈಲು ಶಿಕ್ಷೆ ಹಾಗೂ 16 ಸಾವಿರ ರೂ.ದಂಡ ವಿಧಿಸಿ ತೀರ್ಪು ನೀಡಿದೆ.
ಮೂಲತಃ ಹಾಸನ ಜಿಲ್ಲೆ ಬೇಲೂರು ತಾಲೂಕಿನ ರವಿ (44) ಶಿಕ್ಷೆಗೊಳಗಾದ ಅಪರಾಧಿ.
ಈತ ಪತ್ನಿ ರೇಖಾ (38) ಹಾಗೂ ಪುತ್ರಿಯೊಂದಿಗೆ ಪೆರ್ಮನ್ನೂರು ಗ್ರಾಮದ ಚೆಂಬುಗುಡ್ಡೆ ಬಳಿ ವಾಸವಿದ್ದ. ಪ್ರತಿ ದಿನ ಹಣ ನೀಡುವಂತೆ ಪೀಡಿಸುತ್ತಿದ್ದ. 2017ರ ಜುಲೈ 7ರಂದು ರಾತ್ರಿ 9ಗಂಟೆಗೆ ಹಣ ನೀಡುವಂತೆ ಒತ್ತಾಯಿಸಿದಾಗ ಪತ್ನಿ ಹಣ ಇಲ್ಲ ಎಂದು ಹೇಳಿರುವುದಕ್ಕೆ ಸಿಟ್ಟುಗೊಂಡು ಚೂರಿಯಿಂದ ಆಕೆಯ ಹೊಟ್ಟೆಗೆ ಇರಿದು ಕೊಲೆಗೆ ಯತ್ನಿಸಿದ್ದ. ಇದರಿಂದ ಗಂಭೀರ ಗಾಯಗೊಂಡಿದ್ದ ರೇಖಾ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆ ಬಳಿಕ ಚೇತರಿಸಿಕೊಂಡಿದ್ದರು.
ಮನೆಯಲ್ಲಿದ್ದ ಪುತ್ರಿ, ಅತ್ತೆ ಹಾಗೂ ನೆರೆಮನೆಯ ಯೋಗೀಶ ಎಂಬವರು ಘಟನೆಯನ್ನು ನೋಡಿದ್ದರು. ನ್ಯಾಯಾಲಯ ಒಟ್ಟು 11 ಮಂದಿಯ ಸಾಕ್ಷಿ ವಿಚಾರಣೆ ನಡೆಸಿದೆ. 13 ದಾಖಲೆ ಹಾಗೂ 3 ಸಾಂದರ್ಭಿಕ ಸಾಕ್ಷಿಗಳನ್ನು ಕ್ರೋಡೀಕರಿಸಿತ್ತು. ಕೊಲೆ ಯತ್ನಕ್ಕೊಳಗಾದ ರೇಖಾ ಅವರ ಹೇಳಿಕೆ ಅಪರಾಧಿಗೆ ಶಿಕ್ಷೆ ಯಾಗಲು ಪ್ರಮುಖ ಸಾಕ್ಷಿಯಾಯಿತು.
ಐಪಿಸಿ ಸೆಕ್ಷನ್ 307 (ಕೊಲೆಯತ್ನ) 10 ವರ್ಷ ಜೈಲು, 10 ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದರೆ 1 ವರ್ಷ ಮತ್ತೆ ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 504 (ಅವಾಚ್ಯ ಶಬ್ದಗಳಿಂದ ಬೈದಿರುವುದಕ್ಕೆ) 1 ವರ್ಷ ಜೈಲು, ಐಪಿಸಿ ಸೆಕ್ಷನ್ 326 (ತೀವ್ರ ಸ್ವರೂಪದ ಗಾಯ) 10 ವರ್ಷ ಜೈಲು, 6 ಸಾವಿರ ರೂ. ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳು ಜೈಲು ಶಿಕ್ಷೆ, ಐಪಿಸಿ ಸೆಕ್ಷನ್ 506 (ಜೀವ ಬೆದರಿಕೆ) 1 ವರ್ಷ ಜೈಲು ಶಿಕ್ಷೆ ಅನುಭವಿಸಬೇಕು ಎಂದು ನ್ಯಾಯಾಲಯ ತೀರ್ಪಿನಲ್ಲಿ ತಿಳಿಸಿದೆ.
ಅಪರಾಧಿ ರವಿ ದೇರಳಕಟ್ಟೆಯ ಆಸ್ಪತ್ರೆಯೊಂದರಲ್ಲಿ ಈ ಹಿಂದೆ ಕೆಲಸ ಮಾಡುತ್ತಿದ್ದ. ಮದ್ಯ ಸೇವನೆಯಿಂದ ಸಮರ್ಪಕವಾಗಿ ಕೆಲಸ ಮಾಡದೇ ಇದ್ದುದರಿಂದ ಅಲ್ಲಿ ಕೆಲಸ ಕಳೆದುಕೊಂಡಿದ್ದ. ರೇಖಾ ಗೃಹರಕ್ಷಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಅಂದಿನ ಪಿಎಸ್ಸೈ ಪ್ರಕಾಶ್ ಕುಮಾರ್ ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ನ್ಯಾಯಾಧೀಶೆ ಶಾರದಾ ಬಿ.ಅವರು ಸಾಕ್ಷಿ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದಾರೆ.
ಸಂತ್ರಸ್ತೆ ರೇಖಾ ಅವರಿಗೆ ಪರಿಹಾರ ಒದಗಿಸಲು ಕಾನೂನು ಸೇವಾ ಪ್ರಾಧಿಕಾರಕ್ಕೆ ನ್ಯಾಯಾಲಯ ಶಿಫಾರಸು ಮಾಡಿದೆ. ಸರಕಾರದ ಪರವಾಗಿ ಸರಕಾರಿ ಅಭಿಯೋಜಕ ರಾಜು ಪೂಜಾರಿ ಬನ್ನಾಡಿ ವಾದಿಸಿದ್ದರು.







