ಫೆ.16: ಬಿಡಬ್ಲ್ಯೂಎಫ್ನಿಂದ 14 ಜೋಡಿ ಸಾಮೂಹಿಕ ವಿವಾಹ

ಮಂಗಳೂರು, ಫೆ.13: ಸಮುದಾಯದ ಅನಾಥ ಮತ್ತು ಆರ್ಥಿಕವಾಗಿ ತೀರಾ ಹಿಂದುಳಿದಿರುವ ಕುಟುಂಬದ ಹೆಣ್ಮಕ್ಕಳ ಮದುವೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಅಬುಧಾಬಿಯ ಬ್ಯಾರೀಸ್ ವೆಲ್ಫೇರ್ ಫೋರಂ (ಬಿಡಬ್ಲ್ಯೂಎಫ್) ತನ್ನ 7ನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಫೆ.16ರಂದು ನಗರದ ಮಿಲಾಗ್ರಿಸ್ ಸಭಾಂಗಣದಲ್ಲಿ ಹಮ್ಮಿಕೊಂಡಿದೆ ಎಂದು ಬಿಡಬ್ಲ್ಯೂಎಫ್ ಅಧ್ಯಕ್ಷ ಮುಹಮ್ಮದ್ ಅಲಿ ಉಚ್ಚಿಲ್ ತಿಳಿಸಿದ್ದಾರೆ.
ಬುಧವಾರ ನಗರದ ಖಾಸಗಿ ಹೊಟೇಲಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು 14 ಜೋಡಿಗಳಿಗೆ ವಿವಾಹ ನಡೆಯಲಿದ್ದು, ಖಾಝಿ ಅಲ್ಹಾಜ್ ತ್ವಾಕಾ ಅಹ್ಮದ್ ಮುಸ್ಲಿಯಾರ್ ನಿಖಾಹ್ನ ನೇತೃತ್ವ ವಹಿಸಲಿದ್ದಾರೆ. ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಯು.ಟಿ.ಖಾದರ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.
ಬಿಡಬ್ಲ್ಯೂಎಫ್ 2008ರಿಂದ ಮಂಗಳೂರಿನಲ್ಲಿ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದು, ಈ ಹಿಂದೆ ಒಟ್ಟು 100 ಜೋಡಿಗಳ ಮದುವೆ ನೆರವೇರಿಸಿದೆ. ಜಿಲ್ಲೆಯ 150ಕ್ಕೂ ಅಧಿಕ ಕುಟುಂಬಗಳು ಕಳೆದ ನಾಲ್ಕು ವರ್ಷಗಳಲ್ಲಿ ‘ಬಿಡಬ್ಲ್ಯೂಎಫ್ ಶೌಚಾಲಯ ನಿರ್ಮಾಣ ಯೋಜನೆ’ಯ ಪ್ರಯೋಜನ ಪಡೆದಿವೆ. ಅಲ್ಲದೆ, ಅನೇಕ ಮಂದಿಗೆ ಗಾಲಿ ಕುರ್ಚಿ ವಿತರಿಸಲಾಗಿದೆ ಎಂದರು.
ಸನ್ಮಾನ ಕಾರ್ಯಕ್ರಮ
ಕಾರ್ಯಕ್ರಮದಲ್ಲಿ ಜೀವಮಾನ ಸಮುದಾಯ ಸೇವೆಗಾಗಿ ತುಂಬೆ ಬಿ.ಎ. ಗ್ರೂಪ್ನ ಸ್ಥಾಪಕಾಧ್ಯಕ್ಷ ಡಾ.ಬಿ.ಅಹ್ಮದ್ ಹಾಜಿ ಮೊಹಿದೀನ್ ಮತ್ತು ಇತ್ತೀಚೆಗೆ ಕೊಲಂಬಿಯಾ ವಿ.ವಿ.ಯಲ್ಲಿ ಡಾಕ್ಟರೇಟ್ ಪದವಿ ಪಡೆದ ಡಾ. ಎಮ್ಮೆಸ್ಸೆಎಂ ಅಬ್ದುಲ್ ರಶೀದ್ ಝೈನಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಲಾಗುವುದು.
ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್, ಮುಸ್ಲಿಮ್ ಸೆಂಟ್ರಲ್ ಕಮಿಟಿಯ ಅಧ್ಯಕ್ಷ ಕೆ.ಎಸ್. ಮುಹಮ್ಮದ್ ಮಸೂದ್, ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಯು.ಕೆ. ಮೋನು ಕಣಚೂರು, ಮಾಜಿ ಶಾಸಕ ಬಿ.ಎ. ಮೊಯ್ದಿನ್ ಬಾವ, ರಾಜ್ಯ ವಕ್ಫ್ ಸಲಹಾ ಸಮಿತಿಯ ಸದಸ್ಯ ಶಾಫಿ ಸಅದಿ, ಕೆನರಾ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಪಿ.ಬಿ. ಅಬ್ದುಲ್ ಹಮೀದ್, ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಅಧ್ಯಕ್ಷ ಎಸ್.ಎಂ. ರಶೀದ್, ಇಸ್ಲಾಮಿಕ್ ಕಲ್ಚರಲ್ ಸೆಂಟರ್ನ ಪ್ರಧಾನ ಕಾರ್ಯದರ್ಶಿ ಬಿ.ಎಂ. ಮುಮ್ತಾಝ್ ಅಲಿ, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಕೆ. ಮುಹಮ್ಮದ್ ಮತ್ತು ನಿದಾ ಸೋಶಿಯೊ ಕೇರ್ ಫೌಂಡೇಶನ್ನ ಅಧ್ಯಕ್ಷ ಮೌಲಾನಾ ವಿ.ಕೆ. ಅಬ್ದುಲ್ ಖಾದರ್, ಭಾರತ್ ಇನ್ಫ್ರಾಸ್ಟ್ರಕ್ಚರ್ಸ್ನ ಆಡಳಿತ ನಿರ್ದೇಶಕ ಮುಸ್ತಫಾ ಎಸ್.ಎಂ., ಹಾಸನದ ಜನಪ್ರಿಯ ಆಸ್ಪತ್ರೆಯ ಸ್ಥಾಪಕಾಧ್ಯಕ್ಷ ಡಾ. ಅಬ್ದುಲ್ ಬಶೀರ್ ವಿ.ಕೆ., ಹಾಜಿ ಅಬ್ದುಲ್ಲ ಮೆಮೋರಿಯಲ್ ಟ್ರಸ್ಟ್ನ ಸದಸ್ಯ ಸೈಯದ್ ಸಿರಾಜ್ ಅಹ್ಮದ್, ವೈಟ್ಸ್ಟೋನ್ ಡೆವಲಪರ್ಸ್ನ ಆಡಳಿತ ನಿರ್ದೇಶಕ ಬಿ.ಎಂ. ಶರೀಫ್, ಅಬುಧಾಬಿ ಇನ್ವೆಸ್ಟ್ಮೆಂಟ್ ಅಥೋರಿಟಿಯ ಫಕ್ರುದ್ದೀನ್ ಭಟ್, ನೂರುಲ್ ಹುದಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬದ್ರುದ್ದೀನ್ ಪಣಂಬೂರು ಭಾಗವಹಿಸಲಿದ್ದಾರೆ.
ಉಳ್ಳಾಲ ದರ್ಗಾ ಸಮಿತಿಯ ಅಧ್ಯಕ್ಷ ಅಬ್ದುಲ್ ರಶೀದ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ಮಾಜಿ ಅಧ್ಯಕ್ಷ ಎಂ.ಬಿ. ಅಬ್ದುಲ್ ರಹಿಮಾನ್, ಆಝಾದ್ ಗ್ರೂಪ್ನ ಆಡಳಿತ ನಿರ್ದೇಶಕ ಮನ್ಸೂರ್ ಅಹ್ಮದ್, ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ತುಂಬೆ, ಕತರ್ನ ಕರ್ನಾಟಕ ಮುಸ್ಲಿಮ್ ಕಲ್ಚರಲ್ ಅಸೋಸಿಯೇಶನ್ನ ಅಧ್ಯಕ್ಷ ಅಬ್ದುಲ್ಲ ಮೋನು, ಏಸ್ ಫೌಂಡೇಶನ್ನ ಅಧ್ಯಕ್ಷ ಸಾದುದ್ದೀನ್ ಎಂ. ಸಾಲಿಹ್, ಜೆಡಿಎಸ್ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಎ.ಎ. ಹೈದರ್ ಪರ್ತಿಪ್ಪಾಡಿ, ತೆಕ್ಕಿಲ್ ರೂರಲ್ ಡೆವಲಪ್ಮೆಂಟ್ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಟಿ.ಎಂ. ಶಹೀದ್, ಹಿದಾಯ ಫೌಂಡೇಶನ್ನ ಸ್ಥಾಪಕಾಧ್ಯಕ್ಷ ಖಾಸಿಂ ಅಹ್ಮದ್ ಎಚ್.ಕೆ., ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ನ ಯುಎಇ ಘಟಕದ ಅಧ್ಯಕ್ಷ ಎಸ್.ಎಂ. ಬಶೀರ್, ದ.ಕ. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಎನ್.ಎಸ್. ಕರೀಮ್, ಅಲ್ವಫಾ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಮುಹಮ್ಮದ್ ಹನೀಫ್ ಜಿ. ಉಪಸ್ಥಿತರಿರುವರು.
ಸುದ್ದಿಗೋಷ್ಠಿಯಲ್ಲಿ ಬಿಡಬ್ಲುಎಫ್ ಉಪಾಧ್ಯಕ್ಷ ಮುಹಮ್ಮದ್ ರಫೀಕ್ ಕೃಷ್ಣಾಪುರ, ಬಿಡಬ್ಲ್ಯೂಎಫ್ ಸಂಯೋಜಕ ಇಮ್ರಾನ್ ಅಹ್ಮದ್ ಕುದ್ರೋಳಿ, ಮುಖ್ಯ ಸಲಹೆಗಾರ ಬಶೀರ್ ಬಜ್ಪೆ, ಸಲಹೆಗಾರ ಹನೀಫ್ ಉಳ್ಳಾಲ್, ಕಾರ್ಯಕಾರಿ ಸಮಿತಿ ಸದಸ್ಯ ನಝೀರ್ ಉಬಾರ್, ಬಿಡಬ್ಲ್ಯೂಎಫ್ ಸಾಮೂಹಿಕ ವಿವಾಹ ಸಂಘಟನಾ ಸಮಿತಿಯ ಸಂಚಾಲಕ ಉಮರ್ ಯು.ಎಚ್. ಉಪಸ್ಥಿತರಿದ್ದರು.











