ವಿಷಾಹಾರ ಸೇವಿಸಿ ಹಾಸ್ಟೆಲ್ ನ 40 ವಿದ್ಯಾರ್ಥಿನಿಯರು ಅಸ್ವಸ್ಥ
ಪ್ರಾಣಾಪಾಯದಿಂದ ಪಾರು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ

ಚಿಕ್ಕಮಗಳೂರು, ಫೆ.12: ವಿಷ ಆಹಾರ ಸೇವಿಸಿದ ಬಿಸಿಎಂ ಹಾಸ್ಟೆಲ್ನ ವಿದ್ಯಾರ್ಥಿನಿಯರು ವಾಂತಿ, ನಿಶ್ಶಕ್ತಿ, ತಲೆನೋವಿನಿಂದ ಅಸ್ವಸ್ಥರಾಗಿ ಜಿಲ್ಲಾಸ್ಪತ್ರೆ ಸೇರಿರುವ ಘಟನೆ ಘಟನೆ ತಾಲೂಕಿನ ಶಿರವಾಸೆ ಗ್ರಾಮದಲ್ಲಿ ಬುಧವಾರ ಮಧ್ಯಾಹ್ನ ವರದಿಯಾಗಿದೆ.
ಬುಧವಾರ ಬೆಳೆಗ್ಗೆ ಎಂದಿನಂತೆ ಹಾಸ್ಟೆಲ್ನಲ್ಲಿ ತಂಗಿರುವ 71 ಮಂದಿ ವಿದ್ಯಾರ್ಥಿಗಳು ಹಾಸ್ಟೆಲ್ನಲ್ಲಿ ನೀಡಿದ ಪುಳಿಯೊಗರೆ ಸೇವಿಸಿ ಗ್ರಾಮದ ವಿವೇಕಾನಂದ ಶಾಲೆಗೆ ತೆರಳಿದ್ದರು. ಸಿರವಾಸೆಯ ವಿವೇಕಾನಂದ ವಿದ್ಯಾ ಸಂಸ್ಥೆ ಶಾಲೆಯಲ್ಲಿ ಓದುತ್ತಿರುವ 250 ಮಕ್ಕಳಿಗೆ ಮಧ್ಯಾಹ್ನದ ವೇಳೆ ಬಿಸಿಹಾಲು ನೀಡಲಾಗಿತ್ತು. ಹಾಲನ್ನು ಸೇವಿಸಿದ ನಂತರ ತರಗತಿಗಳಿಗೆ ತೆರಳಿ ಪಾಠ ಪ್ರವಚನಗಳಲ್ಲಿ ತೊಡಗಿಕೊಂಡಿದ್ದರು. ಆದರೆ ಸ್ವಲ್ವ ಹೊತ್ತಿನ ಬಳಿಕ ಶಾಲೆಯ 250 ಮಂದಿ ವಿದ್ಯಾರ್ಥಿಗಳ ಪೈಕಿ ಹಾಸ್ಟೆಲ್ನಿಂದ ಹೋಗುವ 40 ಮಂದಿ ವಿದ್ಯಾರ್ಥಿಗಳು ಇದ್ದಕ್ಕಿದಂತೆ ವಾಂತಿ, ಬೇಧಿ, ತಲೆನೋವಿನಿಂದ ಬಳಲಿ ಅಸ್ವಸ್ಥರಾಗಿದ್ದಾರೆಂದು ತಿಳಿದು ಬಂದಿದೆ.
ಇದರಿಂದ ವಿಚಲಿತರಾದ ಶಿಕ್ಷಕರು ಹಾಗೂ ಹಾಸ್ಟೆಲ್ ವಾರ್ಡನ್ ಮತ್ತಿತರರರು ಕೂಡಲೇ ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಮಕ್ಕಳಿಗೆ ಪ್ರಥಮ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಸ್ಥಳೀಯರ ಸಹಕಾರದಿಂದ 35 ಮಂದಿ ವಿದ್ಯಾರ್ಥಿಗಳನ್ನು ಮಧ್ಯಾಹ್ನ ಚಿಕ್ಕಮಗಳೂರಿನ ಜಿಲ್ಲಾಸ್ಪತ್ರೆಗೆ ಕರೆತಂದು ಚಿಕಿತ್ಸೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ದಾಖಲಿಸಿದ 35 ಮಂದಿ ವಿದ್ಯಾರ್ಥಿಗಳಲ್ಲಿ ಐದು ಮಂದಿ ಭೀತಿಗೊಳಗಾಗಿ ರಕ್ತದ ಒತ್ತಡ ಹೆಚ್ಚಾಗಿರುವುದು ಕಂಡ ಬಂದ ಹಿನ್ನೆಲೆಯಲ್ಲಿ ಅವರನ್ನು ತುರ್ತು ಚಿಕಿತ್ಸ ಘಟಕದಲ್ಲಿ ದಾಖಲಿಸಿ ತೀವ್ರನಿಗಾ ವಹಿಸಲಾಗಿತ್ತು. ಉಳಿದ 30 ವಿದ್ಯಾರ್ಥಿನಿಯರಿಗೆ ಮಕ್ಕಳ ವಾರ್ಡ್ನಲ್ಲಿ ಚಿಕಿತ್ಸೆ ನೀಡಲಾಗಿದೆ. ಎಲ್ಲಾ ವಿದ್ಯಾರ್ಥಿಗಳು ಪ್ರಾಣಾಪಾಯದಿಂದ ಪಾರಾಗಿದ್ದು, ಸಂಪೂರ್ಣ ಗುಣಮುಖರಾಗಿದ್ದಾರೆಂದು ತಾಲೂಕು ವೈದ್ಯಾಧಿಕಾರಿ ಕುಮಾರ್ ತಿಳಿಸಿದ್ದಾರೆ.
ವಿದ್ಯಾರ್ಥಿಗಳು ಅಸ್ವಸ್ಥರಾಗಿರುವುದು ಹಾಸ್ಟೆಲ್ನಲ್ಲಿ ನೀಡಿದ ಪುಳಿಯೊಗೆರೆಯಿಂದಲೋ ಅಥವಾ ಶಾಲೆಯಲ್ಲಿ ನೀಡಿದ ಹಾಲಿನ ಕಾರಣಕ್ಕೋ ಅಥವಾ ಕುಡಿಯುವ ನೀರಿನ ಸಮಸ್ಯೆಯಿಂದಲೋ ಎಂಬುದು ಇನ್ನೂ ತಿಳಿದು ಬಂದಿಲ್ಲ. ಮಕ್ಕಳು ಸೇವಿಸಿದ ಪುಳಿಯೊಗರೆ, ಬಿಸಿಹಾಲು ಮತ್ತು ಕುಡಿಯುವ ನೀರಿನ ಮಾದರಿ ಸಂಗ್ರಹಿಸಿ ಶಿವಮೊಗ್ಗದ ಪ್ರಯೋಗಾಲಯಕ್ಕೆ ವೈದ್ಯಧಿಕಾರಿಗಳು ಕಳಿಸಿದ್ದು, ಪ್ರಯೋಗಾಲಯದಿಂದ ವರದಿ ಬಂದ ನಂತರ ಮಕ್ಕಳು ಅಸ್ವಸ್ಥರಾಗಲು ಕಾರಣ ಏನೆಂಬುದು ತಿಳಿಯಲಿದೆ.
ವಿಷಯ ತಿಳಿಯುತ್ತಿದ್ದಂತೆ ತಾಲೂಕು ವೈದ್ಯಧಿಕಾರಿ ಡಾ.ಸೀಮಾ, ಜಿಲ್ಲಾ ಪಂಚಾಯತ್ ಸಹಾಯಕ ಕಾರ್ಯದರ್ಶಿ ರಾಜಗೋಪಾಲ್, ಜಿಪಂ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ ಜಸಂತಾ ಅನಿಲ್ ಕುಮಾರ್ ಸ್ಥಳಕ್ಕೆ ಧಾವಿಸಿ ವಿದ್ಯಾರ್ಥಿಗಳ ಆರೋಗ್ಯದ ಬಗ್ಗೆ ವಿಚಾರಿಸಿದರು. ಅಸ್ವಸ್ಥಗೊಂಡ ಮಕ್ಕಳಿಗೆ ಪ್ರಾಥಮಿಕ ಚಿಕಿತ್ಸೆ ಕೊಡಿಸುವಲ್ಲಿ ಹಾಸ್ಟೆಲ್ ವಾರ್ಡನ್ ದೇವಮ್ಮ, ಎಲ್ಎಚ್ವಿ ನಾಗರತ್ನಾ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಯಶಸ್ವಿನಿ, ಕಿರಿಯ ಪುರುಷ ಆರೋಗ್ಯ ಸಹಾಯಕ ನವೀನ್, ಆಶಾ ಕಾರ್ಯಕರ್ತೆ ಚಂದ್ರಮ್ಮ, ಶುಶ್ರೂಷಕಿ ರೂಪ ಸೇರಿದಂತೆ ಅನೇಕರು ಶ್ರಮಿಸಿದರು.
35 ಮಕ್ಕಳೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆಸ್ಪತ್ರೆಗೆ ದಾಖಲಾದ ಮಕ್ಕಳೆಲ್ಲರೂ ಶಿರವಾಸೆಯ ಬಿಸಿಎಂ ಹಾಸ್ಟೆಲ್ನವರು. ವಿವೇಕಾನಂದ ಶಾಲೆಯಲ್ಲಿ ಓದುತ್ತಿದ್ದ ಈ ಹಾಸ್ಟೆಲ್ ವಿದ್ಯಾರ್ಥಿನಿಯರು ಶಾಲೆಯ ಉಳಿದ ಮಕ್ಕಳೊಂದಿಗೆ ಮಧ್ಯಾಹ್ನದ ವೇಳೆ ಹಾಲು ಸೇವಿಸಿದ್ದಾರೆ. ಆದರೆ ಹಾಸ್ಟೆಲ್ ವಿದ್ಯಾರ್ಥಿನಿಯರು ಮಾತ್ರ ಅಸ್ವಸ್ಥರಾಗಿದ್ದಾರೆ. ಘಟನೆ ಸಂಬಂಧ ಹಾಸ್ಟೆಲ್ನಲ್ಲಿ ತಯಾರಿಸಿದ ಪುಳಿಯೊಗರೆ ಹಾಗೂ ಶಾಲೆಯಲ್ಲಿ ನೀಡಿದ ಹಾಲು, ನೀರಿನ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಘಟನೆಗೆ ಕಾರಣ ತಿಳಿಯಲಿದೆ. ಘಟನೆಯಲ್ಲಿ ತಪ್ಪಿತಸ್ಥರಿದ್ದಲ್ಲಿ ಕ್ರಮಕೈಗೊಳ್ಳಲಾಗುವುದು.
- ಜಸಂತಾ ಅನಿಲ್ ಕುಮಾರ್, ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷೆ
ಬೆಳಗ್ಗೆ ಹಾಸ್ಟೆಲ್ನಲ್ಲಿ ಪುಳಿಯೊಗರೆ ಸೇವಿಸಿದ್ದ ವಿದ್ಯಾರ್ಥಿನಿಯರು ಯಾವುದೇ ತೊಂದರೆ ಇಲ್ಲದೇ ಶಾಲೆಗೆ ಹೋಗಿದ್ದಾರೆ. ಮಧ್ಯಾಹ್ನದ ವೇಳೆ ಶಾಲೆಯಲ್ಲಿ ಹಾಲು ಸೇವಿಸಿದ ಬಳಿಕ ಅಸ್ವಸ್ಥರಾಗಿದ್ದಾರೆ. 35 ಮಕ್ಕಳು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಎಲ್ಲರೂ ಗುಣಮುಖರಾಗಿದ್ದಾರೆ.
- ದೇವಮ್ಮ, ಹಾಸ್ಟೆಲ್ ವಾರ್ಡನ್, ಶಿರವಾಸೆಬೆಳಗ್ಗೆ 8ಕ್ಕೆ ಶಿರವಾಸೆಯ ಬಿಸಿಎಂ ಹಾಸ್ಟೆಲ್ನಲ್ಲಿ ಪುಳಿಯೊಗರೆ ಸೇವಿಸಿದ್ದೆವು. ಅಲ್ಲಿಂದ ಶಾಲೆಗೆ ಬಂದ ತಕ್ಷಣ ಹಾಸ್ಟೆಲ್ನಲ್ಲಿ ಪುಳಿಯೊಗರೆ ಸೇವಿಸಿದ ವಿದ್ಯಾರ್ಥಿನಿಯರ ಪೈಕಿ ಒಬ್ಬೊಬ್ಬರಿಗೆ ಹೊಟ್ಟೆ ನೋವು, ವಾಂತಿ ಬೇದಿ ಕಾಣಿಸಿಕೊಂಡಿದೆ. ನಂತರ ಶಿಕ್ಷಕರು ನಮ್ಮನ್ನು ಶಿರವಾಸೆ ಆಸ್ಪತ್ರೆಗೆ ದಾಖಲಿಸಿದ್ದರು. ಅಲ್ಲಿ ಹೊಟ್ಟೆ ನೋವು, ವಾಂತಿ ಬೇದಿ ಕಡಿಮೆಯಾಗದ ಕಾರಣ ಜಿಲ್ಲಾಸ್ಪತ್ರೆಗೆ ಕರೆತಂದಿದ್ದಾರೆ. ಚಿಕಿತ್ಸೆ ಬಳಿಕ ಆರಾಮಾಗಿದ್ದೇನೆ.
- ನಮಿತಾ, ಚಿಕಿತ್ಸೆಗೆ ದಾಖಲಾಗಿರುವ 10 ನೇ ತರಗತಿ ವಿದ್ಯಾರ್ಥಿನಿ






.jpg)
.jpg)
.jpg)



