ಕುಷ್ಠರೋಗ ವಿಚ್ಛೇದನಕ್ಕೆ ಕಾರಣವಾಗದು: ಸಂಸತ್ತಿನಲ್ಲಿ ಮಸೂದೆ ಅಂಗೀಕಾರ
ಹೊಸದಿಲ್ಲಿ, ಫೆ.13: ಕುಷ್ಠರೋಗವು ವಿಚ್ಛೇದನಕ್ಕೆ ಕಾರಣವಾಗಬಹುದು ಎಂಬ ಅಂಶವನ್ನು ರದ್ದುಪಡಿಸುವ ಮಸೂದೆಗೆ ಸಂಸತ್ತು ಬುಧವಾರ ಅನುಮೋದನೆ ನೀಡಿದೆ. ಬಜೆಟ್ ಅಧಿವೇಶನದ ಅಂತಿಮ ದಿನವಾಗಿರುವ ಬುಧವಾರ ಈ ಮಸೂದೆಯನ್ನು ಯಾವುದೇ ಚರ್ಚೆಯಿಲ್ಲದೆ ರಾಜ್ಯಸಭೆಯಲ್ಲಿ ಅಂಗೀಕರಿಸಲಾಗಿದೆ. ಆದರೆ ಗ್ರಾಹಕ ರಕ್ಷಣೆ ಮಸೂದೆಯ ಬಗ್ಗೆ ಒಮ್ಮತ ಮೂಡದ ಕಾರಣ ಇದಕ್ಕೆ ರಾಜ್ಯಸಭೆಯಲ್ಲಿ ಅಂಗೀಕಾರ ದೊರಕಿಲ್ಲ.
ಹಿಂದೂ ವಿವಾಹ ಕಾಯ್ದೆ , ಮುಸ್ಲಿಂ ವಿವಾಹ ರದ್ದು ಕಾಯ್ದೆ, ವಿಚ್ಛೇದನ ಕಾಯ್ದೆ(ಕ್ರಿಶ್ಚಿಯನ್ನರಿಗೆ), ವಿಶೇಷ ವಿವಾಹ ಕಾಯ್ದೆ ಮತ್ತು ಹಿಂದು ದತ್ತು ಮತ್ತು ನಿರ್ವಹಣೆ ಕಾಯ್ದೆಯಲ್ಲಿ ಕುಷ್ಠರೋಗವು ವಿವಾಹ ವಿಚ್ಛೇದನಕ್ಕೆ ಕಾರಣವಾಗಬಹುದು ಎಂದು ತಿಳಿಸಲಾಗಿದೆ. ಕುಷ್ಠರೋಗ ಬಾಧಿತ ವ್ಯಕ್ತಿಗಳ ವಿರುದ್ಧ ತಾರತಮ್ಯ ತೋರುವ ಕಾನೂನು ಹಾಗೂ ಅಂಶಗಳನ್ನು ರದ್ದುಗೊಳಿಸಬೇಕು ಎಂದು ಕಾನೂನು ಆಯೋಗದ ವರದಿಯಲ್ಲಿ ಸಲಹೆ ಮಾಡಲಾಗಿತ್ತು. ಅಲ್ಲದೆ, ಕುಷ್ಠರೋಗ ಬಾಧಿತರ ವಿರುದ್ಧದ ತಾರತಮ್ಯವನ್ನು ಕೊನೆಗೊಳಿಸುವ ವಿಶ್ವಸಂಸ್ಥೆಯ ನಿರ್ಣಯಕ್ಕೆ ಭಾರತವೂ ಸಹಿ ಹಾಕಿದೆ.
ಕುಷ್ಠರೋಗ ಬಾಧಿತ ವ್ಯಕ್ತಿಗಳನ್ನು ಮುಖ್ಯವಾಹಿನಿಗೆ ತರುವ ಪುನಶ್ಚೈತನ್ಯ ಕಾರ್ಯಕ್ರಮ ರೂಪಿಸುವಂತೆ 2014ರಲ್ಲಿ ಸುಪ್ರೀಂಕೋರ್ಟ್ ಕೇಂದ್ರ ಸರಕಾರಕ್ಕೆ ಸೂಚಿಸಿತ್ತು. ವೈಯಕ್ತಿಕ ಕಾನೂನುಗಳ ತಿದ್ದುಪಡಿ ಮಸೂದೆಯನ್ನು ರಾಜ್ಯಸಭೆಯಲ್ಲಿ ಧ್ವನಿಮತದಿಂದ ಅಂಗೀಕರಿಸಿದ ಬಳಿಕ ಸಭಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಗ್ರಾಹಕ ರಕ್ಷಣೆ ಮಸೂದೆಯನ್ನು ಕೈಗೆತ್ತಿಕೊಂಡರು. ಆದರೆ ಈ ಹಂತದಲ್ಲಿ ಟಿಎಂಸಿ ಹಾಗೂ ಎಡಪಕ್ಷಗಳ ಸದಸ್ಯರು ಗದ್ದಲ ಎಬ್ಬಿಸಿ ಪ್ರತಿಭಟನೆ ನಡೆಸಿದಾಗ ಕಲಾಪವನ್ನು 10 ನಿಮಿಷ ಮುಂದೂಡಲಾಯಿತು. ಸದನ ಮರು ಸಮಾವೇಶಗೊಂಡಾಗ ವಿಷಯ ಪ್ರಸ್ತಾವಿಸಿದ ನಾಯ್ಡು, ಗ್ರಾಹಕ ರಕ್ಷಣೆ ಮಸೂದೆ ಬಗ್ಗೆ ಸಂವಹನದ ಕೊರತೆ ಇರುವ ಕಾರಣ ಈ ಮಸೂದೆಯನ್ನು ಕೈಗೆತ್ತಿಕೊಳ್ಳುವುದಿಲ್ಲ ಎಂದು ಪ್ರಕಟಿಸಿದರು.
ಸರಕಾರ 1986ರ ಗ್ರಾಹಕ ರಕ್ಷಣೆ ಕಾಯ್ದೆಯನ್ನು ಬದಲಿಸಿ 2018ರ ಗ್ರಾಹಕ ರಕ್ಷಣೆ ಮಸೂದೆಯನ್ನು ಜಾರಿಗೊಳಿಸಲು ಬಯಸಿದ್ದು ಇದರಲ್ಲಿ ಗ್ರಾಹಕರ ಹಕ್ಕುಗಳನ್ನು ಮತ್ತಷ್ಟು ಸಶಕ್ತಗೊಳಿಸಲಾಗಿದ್ದು ಪೂರೈಕೆ ಮಾಡಿದ ಸರಕಿನಲ್ಲಿ ದೋಷ ಹಾಗೂ ಸೇವೆಯ ಕೊರತೆಯ ಕುರಿತಾದ ದೂರುಗಳನ್ನು ನಿರ್ವಹಿಸಲು ವ್ಯವಸ್ಥೆಯೊಂದರ ಸ್ಥಾಪನೆಗೆ ಅನುವು ಮಾಡಿಕೊಡುತ್ತದೆ ಎಂದು ಸರಕಾರ ತಿಳಿಸಿದೆ. ಆದರೆ ಚರ್ಚೆಯಿಲ್ಲದೆ ಈ ಮಸೂದೆಯನ್ನು ಅಂಗೀಕರಿಸಲು ವಿಪಕ್ಷ ಸದಸ್ಯರು ಆಕ್ಷೇಪಿಸಿದರು.