ಜಮ್ಮುವಿನಲ್ಲಿ ಉಗ್ರರ ದಾಳಿ:ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೆ ಏರಿಕೆ
ಶ್ರೀನಗರ, ಫೆ.14: ಜಮ್ಮು -ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಅವಂತಿಪೊರಾದ ರಾಷ್ಟ್ರೀಯ ಹೆದ್ದಾರಿಯಲ್ಲಿ ಗುರುವಾರ ಸಿಆರ್ ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ ಪರಿಣಾಮವಾಗಿ ಹುತಾತ್ಮರಾದ ಯೋಧರ ಸಂಖ್ಯೆ 20ಕ್ಕೇರಿದೆ.
ಈ ದುರ್ಘಟನೆಯಲ್ಲಿ 15ಕ್ಕೂ ಅಧಿಕ ಯೋಧರು ಗಾಯಗೊಂಡಿದ್ದಾರೆ. 2004ರ ಬಳಿಕ ದೊಡ್ಡ ಮಟ್ಟದಲ್ಲಿ ಉಗ್ರರು ಪೈಶಾಚಿಕ ಕೃತ್ಯ ನಡೆಸಿದ್ದಾರೆ.
ಸಿಆರ್ ಪಿಎಫ್ ಯೋಧರು ಬರುವುದನ್ನು ಖಚಿತಪಡಿಸಿಕೊಂಡಿದ್ದ ಉಗ್ರರು ಆಟೋ ರಿಕ್ಷಾವೊಂದರಲ್ಲಿ ಬಾಂಬ್ ಇಟ್ಟಿದ್ದರು. ಸಿಆರ್ ಪಿಎಫ್ ನ 54ನೇ ಬೆಟಾಲಿಯನ್ ಗೆ ಸೇರಿದ ಬಸ್ ಬರುತ್ತಿದ್ದಂತೆ ಬಾಂಬ್ ಸ್ಫೋಟಿಸಿದ ಉಗ್ರರು ಬಳಿಕ ಗ್ರೆನೇಡ್ ದಾಳಿ ನಡೆಸಿ , ವಾಹನದ ಮೇಲೆ ಗುಂಡಿನ ಮಳೆಗೆರೆದರು ಎನ್ನಲಾಗಿದೆ.
ಉಗ್ರರ ದಾಳಿಯಿಂದಾಗಿ ವಾಹನದಲ್ಲಿದ್ದ 20 ಮಂದಿ ಯೋಧರು ಹುತಾತ್ಮರಾದರು. 15 ಮಂದಿ ಯೋಧರು ಗಾಯಗೊಂಡರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಾಹನದಲ್ಲಿ ಒಟ್ಟು 35 ಮಂದಿ ಯೋಧರು ಜಮ್ಮುವಿನಿಂದ ಶ್ರೀನಗರಕ್ಕೆ ಪ್ರಯಾಣಿಸುತ್ತಿದ್ದರು ಎಂದು ಹೇಳಲಾಗಿದೆ.
ಜೈಷ್ ಎ ಮೊಹಮ್ಮದ್ ಸಂಘಟನೆ ದಾಳಿಯ ಹೊಣೆ ಹೊತ್ತುಕೊಂಡಿದೆ. ಉಗ್ರ ಸಂಘಟನೆಯ ಕಮಾಂಡರ್ ಆದಿಲ್ ಅಹ್ಮದ್ ಈ ಕೃತ್ಯದ ನೇತೃತ್ವ ವಹಿಸಿರುವುದಾಗಿ ಹೇಳಿಕೊಂಡಿದ್ದಾನೆ.