ವ್ಯಕ್ತಿ ಪ್ರತಿಷ್ಠೆಗಿಂತ ದೇಶ ದೊಡ್ಡದು: ಪ್ರಧಾನಿ ಮೋದಿ ಸಹೋದರ ಪ್ರಹ್ಲಾದ್ ಮೋದಿ

ಬಂಟ್ವಾಳ, ಫೆ. 14: ವ್ಯಕ್ತಿ ಪ್ರತಿಷ್ಠೆಗಿಂತ ದೇಶವೇ ದೊಡ್ಡದು. ವ್ಯಕ್ತಿಯೊಬ್ಬ ಯಾವ ಮಟ್ಟಕ್ಕೆ ಏರಿದರೂ ಕೂಡಾ ದೇಶದ ಮುಂದೆ ಎಲ್ಲರೂ ಸಮಾನರು. ತಾನು ಇರುವ ಹುದ್ದೆಯ ಜವಾಬ್ದಾರಿ ಅರಿತು ವ್ಯವಹರಿಸಿದರೆ ಆತ ಶ್ರೇಷ್ಠನಾಗುವನು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿ ಹೇಳಿದ್ದಾರೆ.
ಅವರು ಗುರುವಾರ ಕಲ್ಲಡ್ಕದ ಶ್ರೀರಾಮವಿದ್ಯಾ ಕೇಂದ್ರಕ್ಕೆ ಭೇಟಿ ನೀಡಿ, ಇಲ್ಲಿನ ಶೈಕ್ಷಣಿಕ ಚಟುವಟಿಕೆಗಳನ್ನು ವೀಕ್ಷಿಸಿ ಬಳಿಕ ವಿದ್ಯಾರ್ಥಿಗಳೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಶಿಶುಮಂದಿರದ ಚಟುವಟಿಕೆಗಳನ್ನು ವೀಕ್ಷಿಸಿದ ಅವರು, ಇಲ್ಲಿ ಜೀವನ ಕೌಶಲ್ಯದ ಶಿಕ್ಷಣವನ್ನು, ಸಂಸ್ಕಾರ ಹಾಗೂ ಭಾರತೀಯ ನೆಲೆಗಟ್ಟಿನ ಆಧಾರದಲ್ಲಿ ನೀಡಲಾಗುತ್ತಿದೆ. ಸಂಸ್ಕೃತದ ವ್ಯವಹಾರ ಉತ್ತರ ಭಾಗಕ್ಕಿಂತ ಹೆಚ್ಚು ಬಳಕೆಯಲ್ಲಿದೆ ಎಂದರು.
ನರೇಂದ್ರ ಮೋದಿಯವರದ್ದು ಸಮಾಜ ಸಮರ್ಪಕ ಬದುಕು. ದೇಶದ ಬಗೆಗಿನ ಅವರ ಕಾಳಜಿ ದೊಡ್ಡದು. ಬಾಲ್ಯದಿಂದಲೂ ಪ್ರತಿಯೊಂದು ಕಾಲದಲ್ಲೂ ಶಿಶ್ತುಬದ್ಧ ಜೀವನ ನಡೆಸಿವರು. ಅವರ ಹುದ್ದೆಯ ನಡುವೆ ನಾವೂ ಗುರುತಿಸಿಕೊಳ್ಳುವಂತಾಗಬೇಕು ಎಂದು ನಮಗ್ಯಾರಿಗೂ ಅನಿಸಲೇ ಇಲ್ಲ. ಆದರೆ, ಸಮಾಜ ನಮ್ಮನ್ನು ವಿಶೇಷ ಆದರದಿಂದ ಕಾಣುತ್ತಿರುವುದರ ಬಗ್ಗೆ ಸಂತೋಷವಿದೆ. ಎಲ್ಲೂ ನಮ್ಮಕುಟುಂಬವು ಅವರ ಜವಾಬ್ದಾರಿ ನಿರ್ವಹಣೆಗೆ ತೊಡಕಾಗದಂತೆ ಎಚ್ಚರ ವಹಿಸಿದೆ ಎಂದು ವಿದ್ಯಾರ್ಥಿಗಳ ಪ್ರಶ್ನೆಗೆ ಉತ್ತರಿಸಿದರು.
ವೇದಿಕೆಯಲ್ಲಿ ಕುಟುಂಬದ ಜ್ಯೋತಿಷ್ಯ ಶಿವಗಿರಿ ಮಹಾರಾಜ್, ತೆಲಂಗಾಣ ಸಂಸ್ಕೃತ ಶಿಶುಮಂದಿರದ ಪ್ರವೀಣ್ ಕೊರೊಲ್ ಪೇ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ವಿಭಾಗ ಪ್ರಚಾರ ಪ್ರಮುಖ್ ಸುನಿಲ್ ಕುಲಕರ್ಣಿ, ಉದ್ಯಮಿ ದೀಪಕ್ ರಾವ್, ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ. ಪ್ರಭಾಕರ ಭಟ್, ವಿದ್ಯಾಕೇಂದ್ರದ ಸಂಚಾಲಕ ವಸಂತ ಮಾಧವ, ಸಹ ಸಂಚಾಲಕ ರಮೇಶ್ ಎನ್ ಉಪಸ್ಥಿತರಿದ್ದರು.
ಪ್ರಾಂಶುಪಾಲ ಕೃಷ್ಣಪ್ರಸಾದ್ ಕಾರ್ಯಕ್ರಮ ನಿರೂಪಿಸಿದರು.







