ಎಲ್.ಡಿ.ಎಫ್.ನಿಂದ ಕೇರಳ ಸಂರಕ್ಷಣಾ ರಾಜ್ಯ ಜಾಥಾ: ಫೆ.16ರಂದು ಸೀತರಾಮ ಯೆಚೂರಿ ಚಾಲನೆ
ಮಂಜೇಶ್ವರ, ಫೆ.15: ಎಲ್.ಡಿ.ಎಫ್. ರಾಜ್ಯ ಸಮಿತಿಯ ಮುಂದಾಳತ್ವದಲ್ಲಿ ಹಮ್ಮಿಕೊಂಡಿರುವ ಎಂಟು ದಿನಗಳ 'ಕೇರಳ ಸಂರಕ್ಷಣಾ ಯಾತ್ರೆ' ಇದರ ಉತ್ತರ ವಲಯ ಜಾಥಾಕ್ಕೆ ಸಿಪಿಎಂ ಪಾಲಿಟ್ ಬ್ಯೂರೋ ಪ್ರಧಾನ ಕಾರ್ಯುದರ್ಶಿ ಸೀತಾರಾಮ್ ಯೆಚೂರಿ ಫೆ.16ರಂದು ಚಾಲನೆ ನೀಡಲಿದ್ದಾರೆ. ಇದಕ್ಕೆ ಸಂಬಂಧಿಸಿ ಉಪ್ಪಳದಲ್ಲಿ ಸಿದ್ಧತೆಗಳು ಪೂರ್ಣಗೊಂಡಿರುವುದಾಗಿ ಎಲ್.ಡಿ.ಎಫ್. ನೇತಾರರು ಮಂಜೇಶ್ವರ ಪ್ರೆಸ್ ಕ್ಲಬ್ ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಸಿಪಿಐ ರಾಜ್ಯ ಕಾರ್ಯದರ್ಶಿ ಕಾನಂ ರಾಜೇಂದ್ರನ್ ಜಾಥಾಕ್ಕೆ ನೇತೃತ್ವ ವಹಿಸುವರು. ಜೊತೆಯಾಗಿ ಎಲ್ ಡಿ ಎಫ್ ರಾಜ್ಯ ಘಟಕದಲ್ಲಿರುವ ಹತ್ತು ಪಕ್ಷಗಳ ನೇತಾರರು ಜಾಥಾದಲ್ಲಿ ಭಾಗವಹಿಸಲಿದ್ದು, 'ಬಿಜೆಪಿಯನ್ನು ಹೊರದಬ್ಬಿರಿ ರಾಷ್ಟ್ರವನ್ನು ರಕ್ಷಿಸಿರಿ', ಎಡ ಪಕ್ಷ ಜನಪಕ್ಷ ಎಂಬ ಘೋಷಣೆಯೊಂದಿಗೆ ಜಾಥಾ ಸಾಗಲಿದೆ.
ಫೆ.23ರಂದು ಜಾಥಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ. ಇದರ ಜೊತೆಯಾಗಿ ತಿರವನಂತಪುರದಿಂದ ಸಿಪಿಐ ರಾಷ್ಟ್ರೀಯ ಕಾರ್ಯದರ್ಶಿ ಎಸ್.ಸುಧಾಕರ ರೆಡ್ಡಿ ಚಾಲನೆ ನೀಡಿದ ದಕ್ಷಿಣ ವಲಯ ಜಾಥಾ ಕೂಡಾ ತ್ರಿಶೂರಿನಲ್ಲಿ ಸಮಾಪ್ತಿಗೊಳ್ಳಲಿದೆ ಎಂದವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಚಾಲಕ ವಿ.ಪಿ.ಪಿ.ಮುಸ್ತಫ, ಅಧ್ಯಕ್ಷ ಬಿ.ವಿ.ರಾಜನ್, ಕೆ.ಆರ್.ಜಯಾನಂದ, ಅಬ್ದುಲ್ ರಝಾಕ್ ಚಿಪ್ಪಾರು, ಜಯರಾಂ ಬುಲ್ಲಂಗುಡೇಲ್, ಡಾ.ಕೆ.ಎ.ಖಾದರ್, ಮುಹಮ್ಮದಲಿ, ತಾಜುದ್ದೀನ್ ಮೊದಲಾದವರು ಉಪಸ್ಥಿತರಿದ್ದರು.