ವಚನಪಾಲಕ ರಾಮನ ಹೆಸರು ಹೇಳಿ ವಚನ ಭ್ರಷ್ಟರಾಗುತ್ತಿರುವ ಪ್ರಧಾನಿ: ದೇವನೂರು ಮಹಾದೇವ
ಮೈಸೂರು,ಫೆ.15: ರಾಮಾಯಣದ ವಚನಪಾಲಕ ರಾಮನ ಹೆಸರು ಹೇಳಿಕೊಂಡು ದಿನೇ ದಿನೇ ರಾಮನನ್ನು ಕೊಲ್ಲುವ ಮೂಲಕ ಬಿಜೆಪಿಯವರು ವಚನ ಭ್ರಷ್ಟರಾಗುತ್ತಿದ್ದಾರೆ ಎಂದು ಖ್ಯಾತ ಸಾಹಿತಿ ದೇವನೂರು ಮಹಾದೇವ ಕಿಡಿಕಾರಿದರು.
ನಗರದ ಜೆ.ಎಲ್.ಬಿ.ರಸ್ತೆಯಲ್ಲಿರುವ ರೋಟರಿ ಸಭಾಂಗಣದಲ್ಲಿ ಶುಕ್ರವಾರ ಆಲ್ ಇಂಡಿಯಾ ಡೆಮಾಕ್ರೆಟಿಕ್ ಯೂತ್ ಆರ್ಗನೈಜೇಶನ್ (ಎಐಡಿವೈಓ) ಫೆ.27ರ ಪಾರ್ಲಿಮೆಂಟ್ ಚಲೋ ಅಂಗವಾಗಿ ರಾಜ್ಯ ಮಟ್ಟದ ಯುವಜನ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಸುಳ್ಳು ಮತ್ತು ಪೊಳ್ಳು ಭರವಸೆಯನ್ನು ನೀಡುವ ಮೂಲಕ ಜನರನ್ನು ಮೋಡಿ ಮಾಡುತ್ತಿದ್ದಾರೆ. ದೇಶದ ರಾಜಕಾರಣವೇ ಜಾದು ಆಗಿಬಿಟ್ಟಿದೆ. ಜಾದು ನೋಡಲು ಖುಷಿ ನೀಡುತ್ತದೆ. ಆದರೆ ರಾಜಕಾರಣ ಬಹಳ ಕ್ರೂರಿ ಮತ್ತು ಭಯಾನಕ, ಜನರ ಕಷ್ಟ ಸುಖ, ದುಖಃ ದುಮ್ಮಾನಗಳಿಗೆ ಮುಖಾಮುಖಿಯಾಗಬೇಕಾದ ರಾಜಕಾರಣ ಭ್ರಮಾ ಸಂತೃಪ್ತಿಗೊಳಿಸುತ್ತಿದೆ. ಮೋದಿ ಒಂದು ರೀತಿಯಲ್ಲಿ ಜಾದು ಮಾಡುವ ಮೂಲಕ ಜನರನ್ನು ಭ್ರಮಾಲೋಕಕ್ಕೆ ತಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಜಾದು ಹೆಸರು ಕೇಳಿದರೆ ಮನಸ್ಸು ಹೊರಳುತ್ತದೆ. ಜಾದುವಿನಲ್ಲಿ ಎಲ್ಲವೂ ಸಾಧ್ಯ, ಇರುವುದನ್ನು ಇದ್ದಂತೆ, ಇಲ್ಲದಿರುವುದನ್ನೂ ಸೃಷ್ಟಿಮಾಡಬಹುದು. ವಿಮಾನವನ್ನು ಕೂಡ ಮಾಯ ಮಾಡಬಹುದಂತೆ. ಇದರಿಂದ ಜನಮರುಳಾಗುವುದರಲ್ಲಿ ತಪ್ಪಿಲ್ಲ. ಇಂದಿನ ರಾಜಕಾರಣ ನೋಡಿದರೆ ಅದು ಕೂಡ ಜಾದು ಅನಿಸುತ್ತದೆ. ರಾಜಕಾರಣ ಭ್ರಮೆಯನ್ನು ಹುಟ್ಟಿಸುತ್ತಿದೆ. ಈ ರೀತಿ ಆದರೆ ಜನಸಾಮಾನ್ಯರ ಬದುಕು ನರಕವಾಗಲಿದೆ ಎಂದರು.
ಚುನಾವಣೆಗೂ ಮುನ್ನ ಪ್ರಧಾನಿ ನರೇಂದ್ರ ಮೋದಿ ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ಹಾಕುತ್ತೇನೆ ಎಂದಿದ್ದರು. ಅವರು ಹಣವನ್ನು ಹಾಕುತ್ತಾರೆ ಎಂದು ಜನ ಕಾಯುತ್ತಿದ್ದರು. ಆ ಹಣವನ್ನು ಹೇಗೆ ಖರ್ಚುಮಾಡಬೇಕು ಎಂಬ ಕನಸನ್ನು ಕಂಡಿದ್ದರು. 1 ರೂಪಾಯಿಯು ಖಾತೆಗೆ ಬೀಳಲಿಲ್ಲ, ಆದರೆ ಸ್ವಪ್ನ ಸುಖ ಸಿಕ್ಕಿತು. ಇದೂ ಒಂತರಾ ಜಾದೂ ಅಲ್ಲವೇ ಎಂದು ಪ್ರಶ್ನಿಸಿದರು.
ಬಜೆಟ್ನಲ್ಲಿ ಹಿಂದಿನದನ್ನೇ ಪ್ರಸ್ತಾಪಿಸುವ ಮೂಲಕ ಮತ್ತೆ ಮತ್ತೆ ಅದೇ ಕಾಮನಬಿಲ್ಲನ್ನು ಜನರ ಮುಂದೆ ಇಟ್ಟಿದ್ದಾರೆ. ಇದು ಮರಳುಗಾಡಿನ ಮರೀಚಿಕೆಯಂತೆ. ಇದರಿಂದ ಯುವ ಜನತೆ ಎಚ್ಚರದಿಂದ ಇರಬೇಕು ಎಂದ ದೇವನೂರು ಮಹಾದೇವ, ಬಾಳಿ ಬದುಕ ಬೇಕಾದ ವಿದ್ಯಾರ್ಥಿಗಳಾದ ನೀವು ಭಾರತದ ಭವಿಷ್ಯವನ್ನು ನಿರ್ಧಾರ ಮಾಡಬೇಕು, ಮಾತಿನ ಮನೆ ಕಟ್ಟುವ ರಾಜಕಾರಣಿಗಳ ಮುಖಕ್ಕೆ ವಾಸ್ತವವನ್ನು ಮುಖಾಮುಖಿಯಾಗಿ ತಿಳಿಸುವ ಗುರಿ ನಿಮ್ಮ ಮೇಲಿದೆ. ಜಾತಿ ಮತ ಭಾಷೆ ಭಾವನಾತ್ಮಕ ವಿಷಯಗಳಿಗೆ ಬಲಿಯಾಗಬೇಡಿ ಎಂದು ಕರೆ ನೀಡಿದರು.
ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ ಅವರ ಕಿಡಿನುಡಿ ಅಥವಾ ನುಡಿ ಕಿಡಿ ಪತ್ರಿಕೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಜಾದೂಗಾರ ಎಂದು ಅಭಿಮಾನದಿಂದಲೋ ಏನೊ ಬರೆದಿದ್ದರು. ಆವಾಗಲಿನಿಂದ ನನಗೂ ಮೋದಿ ಜಾದೂಗಾರ ಅನ್ನಿಸಲು ಪ್ರಾರಂಭವಾಯಿತು.
-ದೇವನೂರು ಮಹಾದೇವ, ಖ್ಯಾತ ಸಾಹಿತಿ.
ಜನಪರ ಹೋರಾಟದ ಯಾವುದೇ ಸಂಘಟನೆಗಳಿರಲಿ, ಅಥವಾ ವಿದ್ಯಾರ್ಥಿ ಸಂಘಟನೆಗಳಿರಲಿ, ನಾವು ಮಾತ್ರ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎನ್ನುವುದನ್ನು ಬಿಡಬೇಕು, ಎಲ್ಲರನ್ನು ಒಟ್ಟಾಗಿ ಕೊಂಡೊಯ್ಯುವ ಕೆಲಸ ಮಾಡಬೇಕು, ಒಬ್ಬರೇ ಏನೂ ಮಾಡಲು ಸಾಧ್ಯವಿಲ್ಲ, ಎಲ್ಲರೂ ಒಟ್ಟಿಗೆ ಸಾಗಬೇಕು.
-ದೇವನೂರು ಮಹಾದೇವ, ಖ್ಯಾತ ಸಾಹಿತಿ.