ಪ್ರಬಲ ಸರ್ಕಾರಕ್ಕಾಗಿ ಬಿಜೆಪಿಗೆ ಮತ ಹಾಕಿ: ಪುಲ್ವಾಮಾ ಘಟನೆಯ ನಂತರ ಮೋದಿ ಭಾಷಣ
ರಾಜಕೀಯ ಸಮಾರಂಭಗಳನ್ನು ರದ್ದುಪಡಿಸಿದ್ದೇವೆ ಎಂದಿತ್ತು ಬಿಜೆಪಿ
ಝಾನ್ಸಿ, ಫೆ.17: ಕೇಂದ್ರದಲ್ಲಿ ಪ್ರಬಲ ಸರ್ಕಾರ ರಚಿಸುವ ಸಲುವಾಗಿ ಉತ್ತರ ಪ್ರದೇಶದ ಜನತೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಮತ ಹಾಕಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ಪುಲ್ವಾಮಾ ಉಗ್ರರ ದಾಳಿ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಸಮಾರಂಭಗಳನ್ನು ರದ್ದುಪಡಿಸಿರುವುದಾಗಿ ಬಿಜೆಪಿ ಹೇಳಿದ ಕೆಲವೇ ಗಂಟೆಗಳಲ್ಲಿ ಝಾನ್ಸಿಯಲ್ಲಿ ಮಾಡಿದ ಭಾಷಣದ ಕೊನೆಗೆ ಮೋದಿ ಈ ಮನವಿ ಮಾಡಿದರು.
ಸುಮಾರು 20 ಸಾವಿರ ಕೋಟಿ ರೂಪಾಯಿ ಅಂದಾಜು ವೆಚ್ಚದ ಕಾಮಗಾರಿಗಳಿಗೆ ಶಿಲಾನ್ಯಾಸ ಮಾಡಿದ ಬಳಿಕ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಮೋದಿ ಜನತೆಯಲ್ಲಿ ಬಿಜೆಪಿಗೆ ಮತ ಹಾಕುವಂತೆ ಕೋರಿದರು.
ಮೂರು ದಶಕಗಳ ಬಳಿಕ 2014ರ ಚುನಾವಣೆಯಲ್ಲಿ ಇಲ್ಲಿನ ಜನತೆಯ ಆಶೀರ್ವಾದದಿಂದಾಗಿ ಬಹುಮತದ ಸರ್ಕಾರ ಕೇಂದ್ರದಲ್ಲಿ ಅಧಿಕಾರಕ್ಕೆ ಬರುವುದು ಸಾಧ್ಯವಾಯಿತು ಎಂದು ಮೋದಿ ಬಣ್ಣಿಸಿದರು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಭರವಸೆಗೆ ಅನುಗುಣವಾಗಿ ಸರ್ಕಾರ ಕಾರ್ಯನಿರ್ವಹಿಸುತ್ತಿದೆ ಎಂದು ಮೋದಿ ಪ್ರತಿಪಾದಿಸಿದರು.
ಉತ್ತರ ಪ್ರದೇಶದ ಜನತೆ ಭಾರತದ ಭವಿಷ್ಯವನ್ನೇ ಬದಲಾಯಿಸಿದ್ದಾರೆ. 2014ರ ಚುನಾವಣೆಯಲ್ಲಿ 30 ವರ್ಷಗಳ ನಿರಾಸೆಯ ಬಳಿಕ ದೇಶಕ್ಕೆ ಹೊಸ ನಿರೀಕ್ಷೆ ಮೂಡಿಸಿದ್ದಾರೆ. ಪ್ರಬಲ ಸರ್ಕಾರ ಎಂದರೇನು ಎನ್ನುವುದನ್ನು ಇಲ್ಲಿನ ಜನ ತೋರಿಸಿಕೊಟ್ಟಿದ್ದಾರೆ. ಇದು ಜನರಿಗೆ ಎಷ್ಟು ಪ್ರಯೋಜನಕಾರಿ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲೂ ಎಷ್ಟು ಖ್ಯಾತಿ ತರಲು ಸಾಧ್ಯವಾಯಿತು ಎನ್ನುವುದನ್ನು ಜನ ತೋರಿಸಿಕೊಟ್ಟಿದ್ದಾರೆ ಎಂದು ಹೇಳಿಕೊಂಡರು.