ವಿಜ್ಞಾನದ ಆವಿಷ್ಕಾರಗಳನ್ನು ಮಕ್ಕಳ ಅರಿವಿಗೆ ತರಬೇಕು: ಪ್ರೊ.ಎನ್.ಆರ್.ಶೆಟ್ಟಿ
ಬೆಂಗಳೂರು, ಫೆ.19: ವಿಜ್ಞಾನ ಹಾಗೂ ತಂತ್ರಜ್ಞಾನ ಕ್ಷೇತ್ರಗಳಲ್ಲಿ ಆಗುತ್ತಿರುವ ಮಹತ್ತರ ಬದಲಾವಣೆಗಳನ್ನು ಪ್ರತಿನಿತ್ಯ ಮಕ್ಕಳ ಗಮನಕ್ಕೆ ತಂದಾಗ ಮಾತ್ರ ಮಕ್ಕಳು ಹೊಸ ತಂತ್ರಜ್ಞಾನಗಳನ್ನು ಅರಿತುಕೊಳ್ಳಲು ಸಹಕಾರಿಯಾಗುತ್ತದೆ ಎಂದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಾದಿಪತಿ ಪ್ರೊ.ಎನ್.ಆರ್.ಶೆಟ್ಟಿ ಅಭಿಪ್ರಾಯಿಸಿದರು.
ಮಂಗಳವಾರ ಯಲಹಂಕದ ನಿಟ್ಟೆ ಇಂಟರ್ ನ್ಯಾಶನಲ್ ಸ್ಕೂಲ್ನಲ್ಲಿ ಆಯೋಜಿಸಿದ್ದ ವಿಜ್ಞಾನ ಹಾಗೂ ತಂತ್ರಜ್ಞಾನ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿಮರ್ಶಾತ್ಮಕ ಚಿಂತನೆ, ಸಂವಹನ, ಸಹಯೋಗ ಹಾಗೂ ಸೃಜನಶೀಲತೆಯನ್ನು ಮಕ್ಕಳಲ್ಲಿ ವೃದ್ಧಿಸಲು ನಮ್ಮ ಶಾಲೆಗಳು ನಿರಂತರ ಯತ್ನಿಸಬೇಕು ಎಂದರು.
ಕೃತಕ ಬುದ್ಧಿವಂತಿಕೆ ಈಗ ಅನೇಕ ಹೊಸ ಹೊಸ ಸಂಶೋಧನೆ ಹಾಗೂ ಅನ್ವೇಷಣೆಗಳಿಗೆ ಅಡಿಪಾಯವಾಗಿದೆ. ಬಯೋಮೆಟ್ರಿಕ್ ಮಾಹಿತಿಗಳ ಆಧಾರದ ಮೇಲೆ ಕಂಪ್ಯೂಟರ್ ಅತಿ ಶೀಘ್ರದಲ್ಲಿಯೇ ಹುಟ್ಟು, ಸಾವುಗಳ ಕರಾರುವಾಕ್ಕಾದ ವಿಶ್ಲೇಷಣೆ ಮಾಡಿ ಮನುಷ್ಯ ತನ್ನ ಸಾವನ್ನು ಮುಂದೂಡುವ ದಿನಗಳು ದೂರವಿಲ್ಲ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಒಂದನೇ ತರಗತಿಯಿಂದ ಪಿಯುಸಿ ವಿದ್ಯಾರ್ಥಿಗಳು ತಾವು ತರಗತಿಯಲ್ಲಿ ಕಲಿತ ವಿಜ್ಞಾನ, ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆಗಳನ್ನು ತಾವೇ ಸಿದ್ಧಪಡಿಸಿ ನೋಡುಗರಿಗೆ ನಿರೂಪಿಸಿದರು. ರಾಸಾಯನಿಕ ವಿಜ್ಞಾನ, ಭೌತವಿಜ್ಞಾನ, ತಂತ್ರಜ್ಞಾನ, ಸಂಚಾರ ನಿಯಂತ್ರಣ, ಹಸಿರುವಲಯದ ಸಂರಕ್ಷಣೆ, ಹಿತಮಿತವಾದ ನೀರಿನ ಬಳಕೆ, ಸಾವಯವ ಕೃಷಿ, ಕಸದ ಸದ್ಬಳಕೆ ವಿಷಯಗಳ ಪ್ರಾತ್ಯಕ್ಷಿಕೆಗಳು ನೋಡುಗರ ಗಮನ ಸೆಳೆದವು. ಈ ವೇಳೆ ನಿಟ್ಟೆ ಇಂಟರ್ ನ್ಯಾಶನಲ್ ಸ್ಕೂಲ್ನ ಪ್ರಾಂಶುಪಾಲೆ ಸಂಧ್ಯಾಸಿಂಗ್ ಹಾಗೂ ಮಕ್ಕಳ ಪೋಷಕರು ಸಮಾರಂಭದಲ್ಲಿ ಪಾಲ್ಗೊಂಡಿದ್ದರು.