ಪುಲ್ವಾಮಾ ದಾಳಿಯನ್ನು ಖಂಡಿಸುತ್ತೇನೆ: ಪಾಕ್ ಪತ್ರಕರ್ತರು, ಯುವಜನರಿಂದ ಅಭಿಯಾನ
ಹೊಸದಿಲ್ಲಿ/ಇಸ್ಲಾಮಾಬಾದ್, ಫೆ.21: ಪುಲ್ವಾಮಾ ಉಗ್ರರ ದಾಳಿ ಘಟನೆಯು ಭಾರತದಾದ್ಯಂತ ಆಕ್ರೋಶಕ್ಕೆ ಕಾರಣವಾಗಿದ್ದರೆ, ಪಾಕಿಸ್ತಾನ ಈ ಘಟನೆಯಲ್ಲಿ ತನ್ನ ಪಾತ್ರವಿದೆ ಎಂದು ಒಪ್ಪಿಕೊಳ್ಳಲು ನಿರಾಕರಿಸಿದೆ. ಆದರೆ 40 ಮಂದಿ ಸೈನಿಕರನ್ನು ಭೀಕರವಾಗಿ ಹತ್ಯೆ ಮಾಡಿದ ಈ ಪೈಶಾಚಿಕ ಘಟನೆಯನ್ನು ಪಾಕಿಸ್ತಾನದ ಯುವಸಮುದಾಯ ಸಾಮಾಜಿಕ ಜಾಲತಾಣಗಳ ಮೂಲಕ ಕಟುವಾಗಿ ಖಂಡಿಸಿವೆ. ಈ ಮೂಲಕ ಪ್ರಧಾನಿ ಇಮ್ರಾನ್ ಖಾನ್ ಗೆ ನೈಜತೆಯ ಕನ್ನಡಿ ಹಿಡಿದಿದ್ದಾರೆ.
ಯುವ ಪತ್ರಕರ್ತ ಮತ್ತು ಭಾರತ- ಪಾಕ್ ಶಾಂತಿಯ ಹೋರಾಟಗಾರ್ತಿ ಶೆಹಿಯಾರ್ ಮಿರ್ಜಾ, ಫೇಸ್ ಬುಕ್ ನಲ್ಲಿ ತಮ್ಮ ಚಿತ್ರವನ್ನು ಪೋಸ್ಟ್ ಮಾಡಿ, "ನಾನು ಪಾಕಿಸ್ತಾನಿ ಹಾಗೂ ಪುಲ್ವಾಮಾ ಉಗ್ರರ ಕೃತ್ಯವನ್ನು ನಾನು ಖಂಡಿಸುತ್ತೇನೆ ಎಂದಿದ್ದಾರೆ. #ಆ್ಯಂಟಿಹೇಟ್ ಚಾಲೆಂಜ್#ನೋವಾರ್ ಈ ಚಿತ್ರವನ್ನು ಟ್ಯಾಗ್ ಮಾಡಿ, “ರಾಷ್ಟ್ರೀಯತೆಗಾಗಿ ನಾನು ಮಾನವೀಯತೆಯನ್ನು ಮಾರಾಟ ಮಾಡಲಾರೆ” ಎಂದು ಸ್ಪಷ್ಟಪಡಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ವಿಷಯದಲ್ಲಿ ದೇಶವನ್ನು ಬೆಂಬಲಿಸುವ ಕಾರಣಕ್ಕಾಗಿ ಪಾಕಿಸ್ತಾನ ಸರ್ಕಾರದ ಪ್ರತಿಪಾದನೆಯನ್ನು ಅಂಧವಾಗಿ ಅನುಸರಿಸಲು ಸಿದ್ಧವಿಲ್ಲ ಎಂದು ಹೇಳಿದ್ದಾರೆ.
ಅಮನ್ ಕಿ ಆಶಾ ಎಂಬ ಫೇಸ್ಬುಕ್ ಗ್ರೂಪ್ನಲ್ಲಿ ಕೂಡಾ ಈ ಸಂಬಂಧ ಸಂದೇಶವನ್ನು ಅವರು ಪ್ರಸಾರ ಮಾಡಿದ್ದಾರೆ. ಪಾಕಿಸ್ತಾನದ ಜನತೆ ಹೊರಬಂದು ಮಾತನಾಡಬೇಕಿದೆ ಎಂದು ಆಗ್ರಹಿಸಿದ್ದಾರೆ.