ಉಡುಪಿ: 5 ಮಂಗಗಳ ಕಳೇಬರ ಪತ್ತೆ
ಉಡುಪಿ, ಫೆ.23: ಉಡುಪಿ ಜಿಲ್ಲೆಯಲ್ಲಿ ಶನಿವಾರ ಇನ್ನೂ ಐದು ಮಂಗಗಳ ಕಳೇಬರ ಪತ್ತೆಯಾಗಿವೆ. ಕಾರ್ಕಳದ ಹೆಬ್ರಿ ಸೋಮೇಶ್ವರ, ಕುಕ್ಕಂದೂರು ಮಣಿಗದ್ದೆ, ಉಡುಪಿಯ ಪೇತ್ರಿ ಆರೂರು, ಕುಂದಾಪುರದ ಸಿದ್ಧಾಪುರ ಅಜ್ರಿ ಹಾಗೂ ಹಳ್ಳಿಹೊಳೆಯ ವಾಟೆಬಚ್ಲುವಿನಲ್ಲಿ ಇವು ಕಂಡುಬಂದಿವೆ.
ಇವುಗಳಲ್ಲಿ ಒಂದು ವಿದ್ಯುತ್ ಆಘಾತದಿಂದ, ಒಂದು ಅಕಸ್ಮಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟರೆ ಎರಡು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಹೀಗಾಗಿ ಯಾವುದೇ ಮಂಗಗಳ ಪೋಸ್ಟ್ಮಾರ್ಟಂ ನಡೆಸಿಲ್ಲ ಎಂದು ಜಿಲ್ಲಾ ನೋಡೆಲ್ ಅಧಿಕಾರಿ ಡಾ.ಪ್ರಶಾಂತ್ ಭಟ್ ತಿಳಿಸಿದ್ದಾರೆ.
ಇಂದು ಜಿಲ್ಲೆಯಲ್ಲಿ ಒಟ್ಟು ಐದು ಮಂದಿಯ ರಕ್ತವನ್ನು ಶಂಕಿತ ಮಂಗನ ಕಾಯಿಲೆ ವೈರಸ್ಗಾಗಿ ಪರೀಕ್ಷೆಗೊಳಪಡಿಸಿದರೂ, ಯಾವುದರಲ್ಲೂ ಸೋಂಕು ಪತ್ತೆಯಾಗಿಲ್ಲ. ಈ ಮೂಲಕ ಜಿಲ್ಲೆಯಲ್ಲಿ ಪರೀಕ್ಷೆಗೊಳಗಾದ 47 ಮಂದಿಯಲ್ಲೂ ಸೋಂಕು ಪತ್ತೆಯಾಗಿಲ್ಲ ಎಂದವರು ತಿಳಿಸಿದರು.
ಮಂಗಗಳಲ್ಲಿ ಸೋಂಕು ಪತ್ತೆಯಾದ ಪ್ರದೇಶಗಳಲ್ಲಿ ಇಂದೂ ಜ್ವರದ ಸರ್ವೆ ನಡೆದಿದ್ದು, ಆಶಾ ಮತ್ತು ಆರೋಗ್ಯ ಕಾರ್ಯಕರ್ತೆಯರು ಇಂದು 2351 ಮನೆಗಳಿಗೆ ಭೇಟಿ ನೀಡಿದರು. ಈ ಮೂಲಕ ಈವರೆಗೆ ಒಟ್ಟು 1,03,710 ಮನೆಗಳನ್ನು ಕಾರ್ಯಕರ್ತರು ಸಂದರ್ಶಿಸಿದಂತಾಗಿದೆ.