ದಿಲ್ಲಿಗೆ ಸಂಪೂರ್ಣ ರಾಜ್ಯದ ಸ್ಥಾನಮಾನಕ್ಕೆ ಆಗ್ರಹಿಸಿ ಮಾರ್ಚ್ 1ರಿಂದ ಕೇಜ್ರಿವಾಲ್ರಿಂದ ಅನಿರ್ದಿಷ್ಟಾವಧಿ ಧರಣಿ
ಹೊಸದಿಲ್ಲಿ, ಫೆ. 23: ದಿಲ್ಲಿಗೆ ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನಕ್ಕಾಗಿ ಮಾರ್ಚ್ 1ರಿಂದ ಧರಣಿ ಆರಂಭಿಸಲಾಗುವುದು ಎಂದು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ವಿಧಾನ ಸಬೆಯಲ್ಲಿ ಶನಿವಾರ ಘೋಷಿಸಿದ್ದಾರೆ.
ದಿಲ್ಲಿಗೆ ಸಂಪೂರ್ಣ ರಾಜ್ಯದ ಸ್ಥಾನ ಮಾನ ನೀಡುವಂತೆ ಮಾರ್ಚ್ 1ರಿಂದ ಚಳವಳಿ ಆರಂಭಿಸಲಾಗುವುದು. ದಿಲ್ಲಿಗೆ ರಾಜ್ಯದ ಸ್ಥಾನಮಾನ ದೊರಕುವ ವರೆಗೆ ನಾವು ಚಳವಳಿ ಮುಂದುವರಿಸಲಿದ್ದೇವೆ. ಪೂರ್ಣ ಪ್ರಮಾಣದ ರಾಜ್ಯ ಸ್ಥಾನಮಾನಕ್ಕೆ ಈಗ ದಿಲ್ಲಿ ಜನರು ಚಳವಳಿ ಆರಂಭಿಸುವ ಅಗತ್ಯತೆ ಇದೆ ಎಂದು ಕೇಜ್ರಿವಾಲ್ ಹೇಳಿದರು.
ವಿಧಾನ ಸಭೆಯಲ್ಲಿ ಮಾತನಾಡಿದ ಅವರು, ದಿಲ್ಲಿಯಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಡ್ಡಿ ಉಂಟು ಮಾಡುತ್ತಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರಕಾರವನ್ನು ತರಾಟೆಗೆ ತೆಗೆದುಕೊಂಡರು.
ದಿಲ್ಲಿಗೆ ಸಂಬಂಧಿಸಿದ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಕೇಂದ್ರ ಸರಕಾರ ಅನುಮೋದನೆ ನೀಡಿಲ್ಲ ಎಂದು ಅವರು ಹೇಳಿದರು.
ಜನರಿಂದ ಆಯ್ಕೆಯಾದ ದಿಲ್ಲಿ ಸರಕಾರಕ್ಕೆ ಯಾವುದೇ ಅಧಿಕಾರ ಇಲ್ಲ. ಒಂದು ವೇಳೆ ದಿಲ್ಲಿಗೆ ರಾಜ್ಯದ ಸ್ಥಾನ ಮಾನ ದೊರಕಿದರೆ, ಇಲ್ಲಿನ ಜನರು ಉದ್ಯೋಗ, ಮನೆ, ಭದ್ರತೆ ನ್ಯಾಯ ಪಡೆಯಲಿದ್ದಾರೆ ಎಂದು ಕೇಜ್ರಿವಾಲ್ ಹೇಳಿದರು.