ಈ ಸಂಸದ ಮಂತ್ರ,ವಿಭೂತಿಯಿಂದ ಜನರ ರೋಗಗಳನ್ನು ಗುಣಪಡಿಸುತ್ತಾರಂತೆ !

ಔರಂಗಾಬಾದ್,ಫೆ.24: ಜನರ ನಾಡಿಮಿಡಿತವನ್ನು ತಿಳಿದುಕೊಂಡು ಮತ್ತು ಮಂತ್ರಪಠಣ ಹಾಗೂ ವಿಭೂತಿ ನೀಡಿ ಅವರ ರೋಗಗಳನ್ನು ತಾನು ಗುಣಪಡಿಸಬಲ್ಲೆ ಎಂದು ಔರಂಗಾಬಾದ್ನ ಶಿವಸೇನೆ ಸಂಸದ ಚಂದ್ರಕಾಂತ ಖೈರೆ ಅವರು ಹೇಳಿಕೊಂಡಿದ್ದಾರೆ.
ಇಲ್ಲಿ, ಹಲವಾರು ವೈದ್ಯರು ಪಾಲ್ಗೊಂಡಿದ್ದ ರಾಷ್ಟ್ರೀಯ ಆರೋಗ್ಯ ಅಭಿಯಾನದ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದ ಖೈರೆ,ಮಂತ್ರಗಳನ್ನು ಪಠಿಸುವ ಅಥವಾ ತಿನ್ನಲು ಅಥವಾ ತಲೆದಿಂಬಿನಡಿ ಇರಿಸಲು ವಿಭೂತಿಯನ್ನು ನೀಡುವ ಮೂಲಕ ತಾನು ಹಲವಾರು ಜನರ ಕಾಯಿಲೆಗಳನ್ನು ವಾಸಿ ಮಾಡಿದ್ದೇನೆ ಎಂದರು.
2006ರಲ್ಲಿ ಬಿಜೆಪಿ ನಾಯಕ ಪ್ರಮೋದ ಮಹಾಜನ್ ಅವರು ಸೋದರನಿಂದ ಗುಂಡೇಟು ತಿಂದು ಆಸ್ಪತ್ರೆಯಲ್ಲಿ ಜೀವನ್ಮರಣ ಹೋರಾಟದಲ್ಲಿದ್ದಾಗ ಅವರ ಪುತ್ರ ರಾಹುಲ್ಗೆ ತಾನು ವಿಭೂತಿಯನ್ನು ನೀಡಿದ್ದೆ. ಆದರೆ ಆಸ್ಪತ್ರೆಯಲ್ಲಿನ ಬಿಗು ಭದ್ರತೆಯಿಂದಾಗಿ ಯಾರೂ ಮಹಾಜನ್ ಇದ್ದ ಕೋಣೆಯನ್ನು ಪ್ರವೇಶಿಸುವಂತಿರಲಿಲ್ಲ,ಹೀಗಾಗಿ ತಾನು ನೀಡಿದ್ದ ವಿಭೂತಿಯನ್ನು ಅವರ ತಲೆದಿಂಬಿನಡಿ ಇರಿಸಲಾಗಿರಲಿಲ್ಲ. ಬಳಿಕ ಅವರು ಸಾವನ್ನಪ್ಪಿದ್ದರು. ಅದೊಂದೇ ತನ್ನ ವೈಫಲ್ಯದ ಪ್ರಕರಣವಾಗಿತ್ತು ಎಂದೂ ಹೇಳಿಕೊಂಡ ಖೈರೆ,ತನ್ನ ಪಕ್ಷದ ಕಾರ್ಯಕರ್ತನೋರ್ವನ ಪತ್ನಿ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದಳು, ತಾನು ಆಕೆಯ ನಾಡಿಮಿಡಿತವನ್ನು ತಿಳಿದುಕೊಂಡು ಮಂತ್ರಗಳನ್ನು ಪಠಿಸಿದಾಗ ಕಣ್ಣುಗಳನ್ನು ತೆರೆದಿದ್ದಳು ಮತ್ತು ಎರಡೇ ದಿನಗಳಲ್ಲಿ ಸಂಪೂರ್ಣ ಗುಣಮುಖಳಾಗಿದ್ದಳು ಎಂದರು.
ಖೈರೆ ಬಿಎಸ್ಸಿ ಪದವೀಧರರಾಗಿದ್ದು,ಪರ್ಸನಲ್ ಮ್ಯಾನೇಜ್ಮೆಂಟ್ನಲ್ಲಿ ಡಿಪ್ಲೋಮಾ ಮಾಡಿದ್ದಾರೆ.







