ಬಾಬರಿ ಮಸೀದಿ ಧ್ವಂಸಗೈದಿದ್ದು ತಪ್ಪು: ಸೋನು ನಿಗಮ್
ಮುಂಬೈ, ಫೆ.24: ಆಝಾನ್ ಗೆ ಆಕ್ಷೇಪ ವ್ಯಕ್ತಪಡಿಸಿ ಹೇಳಿಕೆ ನೀಡುವ ಮೂಲಕ ವಿವಾದ ಸೃಷ್ಟಿಸಿದ್ದ ಗಾಯಕ ಸೋನು ನಿಗಮ್, ಬಾಬರಿ ಮಸೀದಿ ಕೆಡವಿರುವುದು ತಪ್ಪು ಎಂದು ಹೇಳಿದ್ದಾರೆ.
"ನಾನು ಎಂದೂ ಯಾವುದೇ ದೇವಾಲಯ ಅಥವಾ ಮಸೀದಿ ಕೆಡವುದರ ಪರವಾಗಿಲ್ಲ. ಮೊದಲನೆಯದಾಗಿ ಬಾಬರಿ ಮಸೀದಿ ಕೆಡವಿರುವುದು ತಪ್ಪು. ಆ ಒಂದು ತಪ್ಪು ಕೃತ್ಯ, ಇಂದು ಪ್ರತಿಯೊಂದು ತಪ್ಪುಗಳಿಗೆ ಕಾರಣವಾಗುತ್ತಿದೆ. ಅದು ನಡೆಯಬಾರದಿತ್ತು" ಎಂದು ಟೈಮ್ಸ್ ನೌ ಚಾನಲ್ ಜತೆ ಮಾತನಾಡಿದ ಅವರು ಹೇಳಿದ್ದಾರೆ.
"ರಾಮನ ಜನ್ಮಸ್ಥಾನದಲ್ಲಿ ಮೊಘಲ್ ರಾಜ ಬಾಬರ್ ದೇವಾಲಯವನ್ನು ಕೆಡವಿದ್ದು ತಪ್ಪು ಎಂದು ನಾನು ಒಪ್ಪಿಕೊಳ್ಳುತ್ತೇನೆ. ಇದಕ್ಕಿಂತ ದೊಡ್ಡ ಪ್ರಮಾದ ಅಥವಾ ಮೂರ್ಖತನ ಬೇರೆ ಇಲ್ಲ. ಆತ ತಪ್ಪು ಮಾಡಿದ ನಿಜ; ಆದರೆ ಬಾಬರನ ಆಳ್ವಿಕೆ ಇದ್ದ ಅವಧಿಯ ತಲೆಮಾರುಗಳ ಬಳಿಕ ಅದಕ್ಕೆ ಪ್ರತೀಕಾರ ತೆಗೆದುಕೊಳ್ಳುವುದು ಸರಿಯೇ? ಇದು ಸರಿಯಲ್ಲ...ಇದು ಖಂಡಿತವಾಗಿಯೂ ದೂರದೃಷ್ಟಿಯ ಚಿಂತನೆಯಲ್ಲ" ಎಂದು ಹೇಳಿದ್ದಾರೆ.
“ಅಯೋಧ್ಯೆಯಲ್ಲಿ ಸುಂದರವಾದ ರಾಮಮಂದಿರ, ಒಂದು ಮಸೀದಿ, ಒಂದು ಚರ್ಚ್ ಹಾಗೂ ಒಂದು ಗುರುದ್ವಾರ ನಿರ್ಮಿಸುವುದೇ ಅಯೋಧ್ಯೆ ವಿವಾದ ಪರಿಹಾರಕ್ಕೆ ಇರುವ ಮಾರ್ಗ" ಎಂದು ವಿವರಿಸಿದ್ದಾರೆ.