ಕರ್ನಾಟಕಕ್ಕೆ ಸುಲಭ ತುತ್ತಾದ ಅರುಣಾಚಲ
ಸೈಯದ್ ಮುಷ್ತಾಕ್ ಅಲಿ ಟ್ರೋಫಿ

ಕಟಕ್, ಫೆ.24: ನಾಯಕ ಮನೀಷ್ ಪಾಂಡೆ ಅವರ ಬಿರುಸಿನ ಬ್ಯಾಟಿಂಗ್(ಔಟಾಗದೆ 111,46 ಎಸೆತ)ಬೆಂಬಲದಿಂದ ಕರ್ನಾಟಕ ತಂಡ ಅರುಣಾಚಲ ಪ್ರದೇಶ ವಿರುದ್ಧದ ಮುಷ್ತಾಕ್ ಅಲಿ ಟ್ವೆಂಟಿ-20 ಪಂದ್ಯದಲ್ಲಿ 146 ರನ್ಗಳ ಅಂತರದಿಂದ ಜಯ ದಾಖಲಿಸಿದೆ. ಇದು ಭಾರತದಲ್ಲಿ ನಡೆದ ಟಿ-20 ಪಂದ್ಯದಲ್ಲಿ ದಾಖಲಾದ ನಾಲ್ಕನೇ ಜಂಟಿ ಭರ್ಜರಿ ಜಯ(ರನ್ ಅಂತರ).
ಟಾಸ್ ಜಯಿಸಿದ ಕರ್ನಾಟಕ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಪಾಂಡೆ ಪರಾಕ್ರಮದ ನೆರವಿನಿಂದ ಕರ್ನಾಟಕ 4 ವಿಕೆಟ್ ನಷ್ಟಕ್ಕೆ 226 ರನ್ ಗಳಿಸಿತು. ಗೆಲ್ಲಲು ಕಠಿಣ ಸವಾಲು ಪಡೆದ ಅರುಣಾಚಲ ಪ್ರದೇಶ 14.4 ಓವರ್ಗಳಲ್ಲಿ ಕೇವಲ 80 ರನ್ಗೆ ಆಲೌಟಾಯಿತು. ಸ್ಪಿನ್ನರ್ ಶ್ರೇಯಸ್ ಗೋಪಾಲ್(5-11)3.4 ಓವರ್ಗಳಲ್ಲಿ 5 ವಿಕೆಟ್ ಗೊಂಚಲು ಪಡೆದರು. ಶ್ರೇಯಸ್ ಇದೇ ಮೊದಲ ಬಾರಿ ಟಿ-20 ಇನಿಂಗ್ಸ್ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ. ಪಾಂಡೆ ಟಿ-20 ಕ್ರಿಕೆಟ್ನಲ್ಲಿ 2ನೇ ಶತಕ ದಾಖಲಿಸಿದರು. 2009ರ ಐಪಿಎಲ್ನಲ್ಲಿ ಆರ್ಸಿಬಿ ಪರ ಶತಕ ಸಿಡಿಸಿದ್ದರು. ಆಗ ಐಪಿಎಲ್ನಲ್ಲಿ ಶತಕ ಗಳಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದರು. 46 ಎಸೆತಗಳಲ್ಲಿ ಔಟಾಗದೆ 111 ರನ್ ಗಳಿಸಿದ ಪಾಂಡೆ ಇನಿಂಗ್ಸ್ನಲ್ಲಿ 9 ಬೌಂಡರಿ ಹಾಗೂ 7 ಸಿಕ್ಸರ್ಗಳಿದ್ದವು.
ಆರಂಭಿಕ ಆಟಗಾರ ಸಮರ್ಥ್ 49 ರನ್ ಗಳಿಸದೇ ಇರುತ್ತಿದ್ದರೆ ಅರುಣಾಚಲ ಪ್ರದೇಶ ಇನ್ನೂ ಕಡಿಮೆ ಮೊತ್ತ ಗಳಿಸುವ ಸಾಧ್ಯತೆಯಿತ್ತು.





