ಮೋದಿ ಬೆಂಗಳೂರಿಗೆ ಬಂದು ಕಸ ಗುಡಿಸುವವರ ಪಾದ ತೊಳೆಯಲಿ: ಸಚಿವ ಡಿ.ಸಿ.ತಮ್ಮಣ್ಣ
![ಮೋದಿ ಬೆಂಗಳೂರಿಗೆ ಬಂದು ಕಸ ಗುಡಿಸುವವರ ಪಾದ ತೊಳೆಯಲಿ: ಸಚಿವ ಡಿ.ಸಿ.ತಮ್ಮಣ್ಣ ಮೋದಿ ಬೆಂಗಳೂರಿಗೆ ಬಂದು ಕಸ ಗುಡಿಸುವವರ ಪಾದ ತೊಳೆಯಲಿ: ಸಚಿವ ಡಿ.ಸಿ.ತಮ್ಮಣ್ಣ](https://www.varthabharati.in/sites/default/files/images/articles/2019/02/25/179589.jpg)
ಬೆಂಗಳೂರು, ಫೆ. 25: ‘ಪ್ರಧಾನಿ ಮೋದಿ ಪೌರ ಕಾರ್ಮಿಕರ ಪಾದ ತೊಳೆದ ಕೂಡಲೇ ಸೇವೆ ಆಗುವುದಿಲ್ಲ. ಸ್ನಾನ ಮಾಡಿಸಿ ಎದುರು ತಂದು ಕೂರಿಸಿದವರ ಪಾದ ತೊಳೆಯುವುದಲ್ಲ. ಬದಲಿಗೆ ಬೆಂಗಳೂರಿಗೆ ಬಂದು ಇಲ್ಲಿ ಕಸ ಗುಡಿಸುವವರ ಪಾದ ತೊಳೆಯಲಿ ಎಂದು ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಹೇಳಿದ್ದಾರೆ.
ಸೋಮವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಮಲ ಹೊರುವವರು ಈಗಲೂ ಇದ್ದಾರೆ. ಅಂತಹವರ ಪಾದ ತೊಳೆಯಲಿ. ಪೌರ ಕಾರ್ಮಿಕರಿಗೆ ಸೂಕ್ತ ವೇತನ ಮತ್ತು ಸೌಲಭ್ಯಗಳನ್ನು ಮೊದಲು ಕಲ್ಪಿಸಲಿ ಎಂದು ಆಗ್ರಹಿಸಿದರು.
ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ: ಮಂಡ್ಯ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷಕ್ಕೆ ಬಿಟ್ಟುಕೊಡುವ ಪ್ರಶ್ನೆಯೇ ಇಲ್ಲ. ಜಿಲ್ಲೆಯಲ್ಲಿ ಏಳು ಮಂದಿ ಶಾಸಕರು ಆಯ್ಕೆಯಾಗಿದ್ದು ನಮ್ಮ ಅಭ್ಯರ್ಥಿಯನ್ನು ಕ್ಷೇತ್ರದಲ್ಲಿ ಕಣಕ್ಕಿಳಿಸುತ್ತೇವೆ. ಸುಮಲತಾ ಅವರನ್ನು ಪಕ್ಷಕ್ಕೆ ಕರೆ ತರುವುದು ವರಿಷ್ಠರಿಗೆ ಬಿಟ್ಟ ವಿಚಾರ. ಚುನಾವಣೆ ಸಂದರ್ಭದಲ್ಲಿ ಗೆದ್ದೆ ಗೆಲ್ಲುತ್ತಾರೆಂದು ಭಾವಿಸಿದವರು ಸೋತಿದ್ದಾರೆ. ಸೋಲುತ್ತಾರೆಂದುಕೊಂಡಿದ್ದ ಕೆಲವರು ಗೆದ್ದಿರುವ ಹಲವು ನಿದರ್ಶನಗಳು ಇವೆ. ಈಗಲೇ ಏನೂ ಹೇಳಲು ಬರುವುದಿಲ್ಲ. ಮಂಡ್ಯ ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲುವು ನಿಶ್ಚಿತ ಎಂದು ನುಡಿದರು.