ಅನ್ಯಾಯ ಸರಿಪಡಿಸದಿದ್ದರೆ ಸ್ಥಾಯಿ ಸಮಿತಿ ಸದಸ್ಯರ ಸಾಮೂಹಿಕ ರಾಜೀನಾಮೆ: ಮೇಯರ್ಗೆ ಎಚ್ಚರಿಕೆ
ಬಿಬಿಎಂಪಿ ಆಯವ್ಯಯದಲ್ಲಿ ತಾರತಮ್ಯ ಆರೋಪ
![ಅನ್ಯಾಯ ಸರಿಪಡಿಸದಿದ್ದರೆ ಸ್ಥಾಯಿ ಸಮಿತಿ ಸದಸ್ಯರ ಸಾಮೂಹಿಕ ರಾಜೀನಾಮೆ: ಮೇಯರ್ಗೆ ಎಚ್ಚರಿಕೆ ಅನ್ಯಾಯ ಸರಿಪಡಿಸದಿದ್ದರೆ ಸ್ಥಾಯಿ ಸಮಿತಿ ಸದಸ್ಯರ ಸಾಮೂಹಿಕ ರಾಜೀನಾಮೆ: ಮೇಯರ್ಗೆ ಎಚ್ಚರಿಕೆ](https://www.varthabharati.in/sites/default/files/images/articles/2019/02/26/179719.jpg)
ಬೆಂಗಳೂರು, ಫೆ.26: ಬಿಬಿಎಂಪಿಯ 2019-20 ನೆ ಸಾಲಿನ ಆಯವ್ಯದಲ್ಲಿ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಗೆ ಅನುದಾನ ನೀಡುವಲ್ಲಿ ತಾರತಮ್ಯ ಮಾಡಲಾಗಿದ್ದು, ಅನ್ಯಾಯ ಸರಿಪಡಿಸದಿದ್ದರೆ ಸ್ಥಾಯಿ ಸಮಿತಿಗೆ ಸಾಮೂಹಿಕ ರಾಜೀನಾಮೆ ನೀಡುತ್ತೇವೆ ಎಂದು ಸ್ಥಾಯಿ ಸದಸ್ಯರು ಮೈತ್ರಿ ಸರಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಬಿಬಿಎಂಪಿ ಕೇಂದ್ರ ಕಚೇರಿಯ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷ ರ ಕೊಠಡಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಾಮಾಜಿಕ ಸ್ಥಾಯಿ ಸಮಿತಿ ಸದಸ್ಯ ಲೋಕೇಶ್, ಬಿಬಿಎಂಪಿ ವ್ಯಾಪ್ತಿಯಲ್ಲಿ 600 ಸ್ಲಂಗಳಿದ್ದು, ಸ್ಲಂಗಳ ಅಭಿವೃದ್ಧಿಗೆ ಈ ಬಾರಿಯ ಬಜೆಟ್ನಲ್ಲಿ ಕೇವಲ 60 ಕೋಟಿ ರೂ. ಮಾತ್ರ ನೀಡಲಾಗಿದೆ. ಎಲ್ಲ ಸ್ಲಂಗಳಿಗೆ ಸಮಾನಾಗಿ ಹಂಚಿಕೆ ಮಾಡಿದರೆ ಕೇವಲ ಒಂದೊಂದು ವಾರ್ಡ್ಗೆ 10 ಲಕ್ಷ ರೂ. ಬರುತ್ತದೆ. ಈ ಅನುದಾನದಿಂದ ಅಭಿವೃದ್ಧಿ ಸಾಧ್ಯವೇ ಎಂದು ಪ್ರಶ್ನಿಸಿದರು.
ಒಂಟಿ ಮನೆ ಯೋಜನೆಯಲ್ಲಿ ಜಯನಗರ, ಬಿಟಿಎಂ ಲೇಔಟ್, ರಾಜರಾಜೇಶ್ವರಿ ನಗರ, ಯಶವಂತಪುರ ಸೇರಿದಂತೆ 8 ಕ್ಷೇತ್ರಗಳಿಗೆ 30 ಕೋಟಿ ರೂ.ರಂತೆ ಅನುದಾನ ನೀಡಲಾಗಿದೆ. ಉಳಿದ 20 ಕ್ಷೇತ್ರ ಮತ್ತು 110 ಹಳ್ಳಿಗಳನ್ನು ಕಡೆಗಣಿಸಲಾಗಿದೆ ಎಂದು ಆರೋಪಿಸಿದರು.
ಬಜೆಟ್ನಲ್ಲಿ 4500 ಮನೆ ನಿರ್ಮಾಣಕ್ಕಾಗಿ ಅನುದಾನ ನೀಡಲಾಗಿದ್ದು, 3500 ಮನೆಗಳು 8 ಕ್ಷೇತ್ರದಲ್ಲಿ ನಿರ್ಮಾಣವಾಗಲಿವೆ. ಈ ಬಗ್ಗೆ ಸಾಮಾಜಿಕ ಸ್ಥಾಯಿ ಸಮಿತಿ ಅಧ್ಯಕ್ಷರ ನೇತೃತ್ವದಲ್ಲಿ ಮೇಯರ್, ಆಯುಕ್ತರು, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಪತ್ರದ ಮೂಲಕ ಹೆಚ್ಚಿನ ಅನುದಾನ ಮತ್ತು ಮೂಲಭೂತ ಸೌಕರ್ಯಗಳಿಗೆ ಒತ್ತು ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದೆ. ಒಂದು ವೇಳೆ ಅನ್ಯಾಯ ಸರಿಪಡಿಸಲಿಲ್ಲವೆಂದರೆ ಸಮಿತಿಯಲ್ಲಿರುವ ಎಲ್ಲ ಬಿಜೆಪಿ ಸದಸ್ಯರು ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಲಿದ್ದಾರೆ ಎಂದರು.
ಪಾಲಿಕೆ ಸದಸ್ಯ ಮುನಿಸ್ವಾಮಿ ಮಾತನಾಡಿ, ಮೇಯರ್, ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಅಧ್ಯಕ್ಷರು ತಮಗೆ ಬೇಕಾದಂತೆ ಬಜೆಟ್ನಲ್ಲಿ ಅನುದಾನ ನೀಡಿದ್ದಾರೆ. ಸಾಮಾಜಿಕ ಸ್ಥಾಯಿ ಸಮಿತಿಗೆ ನ್ಯಾಯ ಒದಗಿಸಿಲ್ಲ. 198 ವಾರ್ಡ್ಗಳಿಂದ ಮನೆ ನಿರ್ಮಾಣಕ್ಕೆ ಸಂಬಂಧಿಸಿದ 2 ಸಾವಿರ ಫೈಲ್ಗಳು ವಿಲೇವಾರಿಯಾಗಿಲ್ಲ. ಈ ಬಾರಿಯ ಅನುದಾನದಲ್ಲಿ ಏನನ್ನೂ ಮಾಡಲು ಸಾಧ್ಯವಿಲ್ಲ. ಹೆಚ್ಚಿನ ಅನುದಾನ ನೀಡಲಿಲ್ಲವೆಂದರೆ ರಾಜೀನಾಮೆಗೆ ಸಿದ್ಧ ಎಂದರು.
ಜೆಡಿಎಸ್ನ ಸದಸ್ಯೆ ಮಂಜುಳಾ ನಾರಾಯಣಸ್ವಾಮಿ ಮಾತನಾಡಿ, ಕಳೆದ ವರ್ಷ ನನ್ನ ವಾರ್ಡ್ನಲ್ಲಿ 40 ಮನೆ ನಿರ್ಮಾಣ ಮಾಡಲಾಗಿದೆ. ಈ ಬಾರಿ 10 ಮನೆ ಮಾತ್ರ ಬಜೆಟ್ನಲ್ಲಿ ಘೋಷಿಸಲಾಗಿದೆ. ಹಾಗೇ ಸಾಮಾಜಿಕ ಸ್ಥಾಯಿ ಸಮಿತಿಗೂ ಅನುದಾನ ನೀಡುವಲ್ಲಿ ತಾರತಮ್ಯ ಮಾಡಿದ್ದಾರೆ. ತಮ್ಮ ಕ್ಷೇತ್ರಗಳಿಗೆ ಹೆಚ್ಚಿನ ಅನುದಾನ ಮೀಸಲಿಟ್ಟಿದ್ದಾರೆ. ತಾರತಮ್ಯ ಧೋರಣೆ ಮುಂದುವರಿದರೆ ಸ್ಥಾಯಿ ಸಮಿತಿಗೆ ರಾಜೀನಾಮೆ ನೀಡಲು ಸಿದ್ಧ ಎಂದು ಅಕ್ರೋಶ ವ್ಯಕ್ತಪಡಿಸಿದರು.
ಸ್ಥಾಯಿ ಸಮಿತಿಗೆ ಬೀಗ: ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಮ್ಯ ಶಿವಕುಮಾರ್, ಸ್ಲಂಗಳ ಅಭಿವೃದ್ಧಿಗೆ 200 ಕೋಟಿ ರೂ. ಅಗತ್ಯವಿದೆ ಎಂದು ಪ್ರಸ್ತಾವನೆ ಸಲ್ಲಿಸಲಾಗಿತ್ತು. ಆದರೆ, ಬಿಬಿಎಂಪಿ ಬಜೆಟ್ನಲ್ಲಿ 60 ಕೋಟಿ ರೂ. ಅನುದಾನ ನೀಡಲಾಗಿದೆ. ಹೆಚ್ಚಿನ ಅನುದಾನಕ್ಕೆ ಮನವಿ ಮಾಡಲಾಗಿದೆ. ಸದಸ್ಯರು ರಾಜೀನಾಮೆ ನೀಡಲು ಸಿದ್ಧರಾಗಿದ್ದು, ಅವರು ರಾಜೀನಾಮೆ ನೀಡಿದರೆ ಸ್ಥಾಯಿ ಸಮಿತಿಗೆ ಬೀಗ ಹಾಕಿಕೊಂಡು ಹೋಗಲಾಗುವುದು ಎಂದು ತಿಳಿಸಿದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಸಾಮಾಜಿನ ನ್ಯಾಯ ಸಮಿತಿಗೆ ಒಟ್ಟು 1,071 ಕೋಟಿ ರೂ. ಮೀಸಲಿಡಲಾಗಿದ್ದು, ಅವರು ನನ್ನ ಬಳಿ ಬಂದರೆ ಸ್ಪಷ್ಟನೆ ನೀಡುತ್ತೇನೆ. ಅಲ್ಲದೆ, ಯಾವುದೇ ತಾರತಮ್ಯ ಮಾಡದೆ ಎಲ್ಲ ವಾರ್ಡ್ಗಳಿಗೂ ಅಗತ್ಯ ಅನುದಾನ ನೀಡಿಯೇ ಬಜೆಟ್ ಮಂಡಿಸಲಾಗಿದೆ.
-ಗಂಗಾಂಬಿಕೆ ಮಲ್ಲಿಕಾರ್ಜುನ್, ಬಿಬಿಎಂಪಿ ಮೇಯರ್
ಆಡಳಿತ ಪಕ್ಷದವರೇ ತಮ್ಮ ನಡುವೆ ಭಿನ್ನಾಭಿಪ್ರಾಯ ಇಟ್ಟುಕೊಂಡು, ಸ್ಥಾಯಿ ಸಮಿತಿಗಳ ಪರಮಾಧಿಕಾರ ಕಸಿದುಕೊಂಡು ಬಜೆಟ್ ಮಂಡನೆ ಮಾಡಿರುವುದಕ್ಕೆ ಇದೊಂದು ಉದಾಹರಣೆಯಗಿದೆ. ನ್ಯಾಯ ಸ್ಥಾಯಿ ಸಮಿತಿಯ ಅಧಿಕಾರ ಮೊಟಕು ಮಾಡಿರುವುದರಿಂದ ಪರಿಶಿಷ್ಟರಿಗೆ ಅನ್ಯಾಯವಾಗುತ್ತದೆ.
-ಪದ್ಮನಾಭರೆಡ್ಡಿ, ಪ್ರತಿಪಕ್ಷದ ನಾಯಕ