ಉಡುಪಿ ಜಿಲ್ಲಾ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟ

ಉಡುಪಿ, ಫೆ.26: ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಉಡುಪಿ ಪ್ರೆಸ್ ಕ್ಲಬ್ ಸಹಯೋಗದಲ್ಲಿ ಪತ್ರಕರ್ತರ ವಾರ್ಷಿಕ ಕ್ರೀಡಾಕೂಟವನ್ನು ಮಂಗಳವಾರ ಅಜ್ಜರಕಾಡು ಜಿಲ್ಲಾ ಕ್ರೀಡಾಂಗದಲ್ಲಿ ಆಯೋಜಿಸಲಾಗಿತ್ತು.
ಕ್ರೀಡಾಕೂಟವನ್ನು ಉದ್ಘಾಟಿಸಿದ ಬಡಗಬೆಟ್ಟು ಕೋಆಪರೇಟಿವ್ ಸೊಸೈಟಿ ಪ್ರಧಾನ ವ್ಯವಸ್ಥಾಪಕ ಇಂದ್ರಾಳಿ ಜಯಕರ ಶೆಟ್ಟಿ ಮಾತನಾಡಿ, ಪ್ರತಿನಿತ್ಯ ಒತ್ತಡ ದಲ್ಲಿ ಕೆಲಸ ಮಾಡುವ ಪತ್ರಕರ್ತರು ಕ್ರೀಡೆಯಲ್ಲಿ ತೊಡಗಿಸುವುದು ಅತಿ ಅಗತ್ಯ. ಇದರಿಂದ ಮಾನಸಿಕ ಹಾಗೂ ದೈಹಿಕವಾಗಿಯೂ ವ್ಯಾಯಮ ದೊರೆಯುತ್ತದೆ ಎಂದು ಹೇಳಿದರು.
ದ.ಕ ಮತ್ತು ಉಡುಪಿ ಜಿಲ್ಲಾ ಮೀನುಗಾರಿಕ ಮಂಡಳಿ ಅಧ್ಯಕ್ಷ ಯಶ್ಪಾಲ ಸುವರ್ಣ ಮಾತನಾಡಿ, ಪತ್ರಕರ್ತರು ಸಮಾಜದ ಸಮಸ್ಯೆಗಳಿಗೆ ತಮ್ಮ ಹರಿತವಾದ ವರದಿಗಳ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ. ಜಿಲ್ಲೆಯ ಪತ್ರಕರ್ತರೆಲ್ಲ ಒಂದಾಗಿ ಕ್ರೀಡಾಕೂಟ ಏರ್ಪಡಿಸುವ ಮೂಲಕ ಕ್ರಿೀಡಾ ಸ್ಪೂರ್ತಿ ಮರೆದಿದ್ದಾರೆ ಎಂದರು.
ಕ್ರೀಡಾಕೂಟಕ್ಕೆ ಉಡುಪಿ ಶಾಸಕ ಕೆ.ರಘುಪತಿ ಭಟ್ ಚಾಲನೆ ನೀಡಿದರು. ಜಿಲ್ಲಾ ಪ್ರಭಾರ ವಾರ್ತಾಧಿಕಾರಿ ಖಾದರ್ ಶಾ, ರಾಜ್ಯ ಸಮಿತಿ ಸದಸ್ಯ ಕಿರಣ್ ಮಂಜನಬೈಲು, ಕ್ರೀಡಾಕಾರ್ಯದರ್ಶಿ ಹರೀಶ್ ಪಾಲೆಚ್ಚಾರ್, ಪ್ರೆಸ್ ಕ್ಲಬ್ ಸಂಚಾಲ ನಾಗರಾಜ್ ರಾವ್ ಉಪಸ್ಥಿತರಿದ್ದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ್ಪ್ರಸಾದ್ ಪಾಂಡೇಲು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಸಂತೋಷ ಸರಳೇಬೆಟ್ಟು ವಂದಿಸಿದರು. ಕೋಶಾಧಿಕಾರಿ ದಿವಾಕರ್ ಹಿರಿಯಡಕ ಕಾರ್ಯಕ್ರಮ ನಿರೂಪಿಸಿದರು.







