ವೈಮಾನಿಕ ಪ್ರದರ್ಶನಕ್ಕೆ ಬಾರದವರ ಹಣ ವಾಪಸ್ ನೀಡಲು ನಿರ್ಧಾರ
![ವೈಮಾನಿಕ ಪ್ರದರ್ಶನಕ್ಕೆ ಬಾರದವರ ಹಣ ವಾಪಸ್ ನೀಡಲು ನಿರ್ಧಾರ ವೈಮಾನಿಕ ಪ್ರದರ್ಶನಕ್ಕೆ ಬಾರದವರ ಹಣ ವಾಪಸ್ ನೀಡಲು ನಿರ್ಧಾರ](https://www.varthabharati.in/sites/default/files/images/articles/2019/02/26/179765.jpg)
ವೈಮಾನಿಕ ಪ್ರದರ್ಶನ ( ಫೈಲ್ ಚಿತ್ರ)
ಬೆಂಗಳೂರು, ಫೆ.26: ಯಲಹಂಕದ ವಾಯುನೆಲೆಯಲ್ಲಿ ನಡೆದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾಗೆ ಬಾರದಿರುವವರ ಹಣವನ್ನು ಹಿಂದಿರುಗಿಸಲು ಆಯೋಜಕರು ನಿರ್ಧರಿಸಿದ್ದಾರೆ.
ಫೆ.20-24 ರವರೆಗೆ ಏರೋ ಇಂಡಿಯಾ ವೈಮಾನಿಕ ಪ್ರದರ್ಶನ ನಡೆದಿತ್ತು. ಆದರೆ ಫೆ.23ರಂದು ಗೇಟ್ ನಂ.5 ರಲ್ಲಿದ್ದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿಯಿಂದಾಗಿ 300 ಕ್ಕೂ ಅಧಿಕ ಕಾರುಗಳು ಸುಟ್ಟು ಹೋಗಿದ್ದವು.
ಈ ಸಂದರ್ಭದಲ್ಲಿ ತಮ್ಮ ಕಾರು ಉಳಿಸಿಕೊಳ್ಳಲು ಪ್ರೇಕ್ಷಕರು ತೆರಳಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ಅಂದು ಕೊನೆಯ ಶೋವನ್ನು ರದ್ದುಪಡಿಸಲಾಗಿತ್ತು. ಹೀಗಾಗಿ, ಮಧ್ಯಾಹ್ನ 2 ಗಂಟೆಗೆ ಮತ್ತೊಂದು ಶೋ ಇತ್ತು. ಆದರೆ ಆ ಪ್ರದರ್ಶನಕ್ಕೆ ಸಾಕಷ್ಟು ಜನ ಪ್ರೇಕ್ಷಕರು ಬರಲು ಸಾಧ್ಯವಾಗಿಲ್ಲ. ಆದುದರಿಂದಾಗಿ, ಆ ಹಣವನ್ನು ಹಿಂದಿರುಗಿಸಲು ಆಯೋಜಕರು ಮುಂದಾಗಿದ್ದಾರೆ.
ಪ್ರದರ್ಶನಕ್ಕೆ ಬಾರದವರು ಏರೋ ಇಂಡಿಯಾ ಪ್ರದರ್ಶನದ ಆಯೋಜಕರನ್ನು ಸಂಪರ್ಕಿಸಿ ಹಣ ವಾಪಸ್ ನೀಡುವಂತೆ ಕೋರಿದ್ದಾರೆ. ಈ ಹಿನ್ನೆಲೆಯಲ್ಲಿ ಹಣ ಮರು ಪಾವತಿಸುವುದಾಗಿ ಆಯೋಜಕರು ತಿಳಿಸಿದ್ದಾರೆ. ಬಳಸದ ಟಿಕೆಟ್ ಅನ್ನು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣದ ಸಮೀಪ ಎಚ್ಎಎಲ್ ಕಾರ್ಪೊರೇಟ್ ಕಚೇರಿಯಲ್ಲಿ ನೀಡಿದರೆ ಆನ್ಲೈನ್ನಲ್ಲೇ ಖಾತೆಗೆ ಹಣ ಮರುಪಾವತಿ ಮಾಡಲಾಗುತ್ತದೆ.