ಗುಂಡಿಕ್ಕಿ ಕಿಲ್ಲರ್ ದಿನೇಶ್ ಬಂಧನ
![ಗುಂಡಿಕ್ಕಿ ಕಿಲ್ಲರ್ ದಿನೇಶ್ ಬಂಧನ ಗುಂಡಿಕ್ಕಿ ಕಿಲ್ಲರ್ ದಿನೇಶ್ ಬಂಧನ](https://www.varthabharati.in/sites/default/files/images/articles/2019/02/28/180039.jpg)
ಬೆಂಗಳೂರು, ಫೆ. 28: ಎರಡು ವರ್ಷಗಳಿಂದ ಪೊಲೀಸರ ಕಣ್ಣಿಗೆ ಬೀಳದೆ ತಪ್ಪಿಸಿಕೊಂಡು ಸುತ್ತಾಡುತ್ತಿದ್ದ ಸುಪಾರಿ ಕೊಲೆ ಹಾಗೂ ಕೊಲೆ ಯತ್ನಗಳಿಂದಲೇ ಕುಖ್ಯಾತಿ ಪಡೆದಿರುವ ಕಿಲ್ಲರ್ ದಿನೇಶ್ರನ್ನು ಪೂರ್ವ ವಿಭಾಗದ ಪೊಲೀಸರು ಗುಂಡು ಹಾರಿಸುವ ಮೂಲಕ ಬಂಧಿಸಿದ್ದಾರೆ.
ಪೊಲೀಸರು ಹಾರಿಸಿದ ಗುಂಡುಗಳು ಎಡ ಹಾಗೂ ಬಲಗಾಲಿಗೆ ತಗುಲಿ ಗಂಭೀರವಾಗಿ ಗಾಯಗೊಂಡಿರುವ ಕೊತ್ತನೂರಿನ ಬಿಳಿ ಶಿವಾಲೆಯ ಸುಪಾರಿ ಕಿಲ್ಲರ್ ದಿನೇಶ್ (30) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಕಳೆದ ಎರಡು ವರ್ಷಗಳ ಹಿಂದೆ ಜೈಲಿನಿಂದ ಜಾಮೀನಿನ ಮೇಲೆ ಬಿಡುಗಡೆಯಾಗಿ ಬಂದು 16ಕ್ಕೂ ಹೆಚ್ಚು ವಾರಂಟ್ ಇದ್ದರೂ ನ್ಯಾಯಾಲಯಕ್ಕೆ ಹಾಜರಾಗದೆ, ಪೊಲೀಸರಿಗೂ ಸಿಗದೆ ತಲೆಮರೆಸಿಕೊಂಡಿದ್ದ ದಿನೇಶ್ ಬಂಧನಕ್ಕೆ ನಗರದ ಪೊಲೀಸರು ತೀವ್ರ ಶೋಧ ನಡೆಸಿದ್ದರು.
ಬಾಣಸವಾಡಿ ಎಸಿಪಿ ಮಹದೇವಪ್ಪ ಅವರ ನೇತೃತ್ವದಲ್ಲಿ ದಿನೇಶ್ ಬಂಧಿಸಲು ವಿಶೇಷ ಪೊಲೀಸ್ ತಂಡವನ್ನು ರಚನೆ ಮಾಡಲಾಗಿತ್ತು. ಬುಧವಾರ ರಾತ್ರಿ ದಿನೇಶ್ ಇರುವ ಸ್ಥಳದ ಖಚಿತ ಮಾಹಿತಿ ಮೇಲೆಗೆ ಸ್ಥಳಕ್ಕೆ ಧಾವಿಸಿದ್ದು, ಸುಮಾರು ರಾತ್ರಿ 11 ಗಂಟೆಗೆ ಹೊರಗೆ ಬಂದ ಖಚಿತ ಮಾಹಿತಿಯಾಧರಿಸಿ ಕಾರ್ಯಾಚರಣೆ ಕೈಗೊಳ್ಳಲಾಯಿತು.
ಎಸಿಪಿ ಮಹದೇವಪ್ಪನೇತೃತ್ವದ ವಿಶೇಷ ಪೊಲೀಸ್ ತಂಡ ಕಾರ್ಯಾಚರಣೆ ಕೈಗೊಂಡು ರೈಲ್ವೆ ಹಳಿ ಬಳಿ ಇದ್ದ ದಿನೇಶ್ನ ಹಿಡಿಯಲು ಹೋದ ವಿಶೇಷ ತಂಡದಲ್ಲಿದ್ದ ಬಾಣಸವಾಡಿ ಠಾಣೆ ಮುಖ್ಯಪೇದೆ ಧರ್ಮ ಅವರಿಗೆ ಚಾಕುವಿನಿಂದ ಚುಚ್ಚಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಅವರ ಹಿಂದೆ ಹೋದ ಪೊಲೀಸರತ್ತ ಚಾಕು ಹಿಡಿದು ನುಗ್ಗಿದ ದಿನೇಶ್ ಮೇಲೆ ಎಸಿಪಿ ಮಹದೇವಪ್ಪ ಅವರು ಗಾಳಿಯಲ್ಲಿ ಎರಡು ಸುತ್ತು ಗುಂಡು ಹಾರಿಸಿ ಶರಣಾಗುವಂತೆ ಸೂಚಿಸಿದರೂ ಲೆಕ್ಕಿಸದೆ ಚಾಕು ಹಿಡಿದು ಪೊಲೀಸರ ಕಡೆ ನುಗ್ಗಿದ ದಿನೇಶ್ ಕಡೆ ಮತ್ತೆರಡು ಸುತ್ತು ಗುಂಡು ಹಾರಿಸಿದ್ದಾರೆ.
ಎರಡು ಗುಂಡುಗಳು ದಿನೇಶ್ಗೆ ತಗುಲಿ ಎಡ ಹಾಗೂ ಬಲಗಾಲಿಗೆ ಗಾಯಗೊಂಡು ಸ್ಥಳದಲ್ಲಿಯೇ ಕುಸಿದುಬಿದ್ದಿದ್ದಾನೆ. ಕೂಡಲೇ ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆ, ಕೊಲೆ ಯತ್ನ, ಸುಲಿಗೆ, ಸುಪಾರಿ, ಕೊಲೆ ಸೇರಿ ಹಲವು ಕ್ರಿಮಿನಲ್ ಪ್ರಕರಣಗಳಲ್ಲಿ ಸುಪಾರಿ ಕಿಲ್ಲರ್ ದಿನೇಶ್ ಭಾಗಿಯಾಗಿದ್ದನು.
ಪಳನಿ ಕೊಲೆ ಪ್ರಕರಣ, ಬಿಜೆಪಿ ಮಾಧ್ಯಮ ಸಂಚಾಲಕ ವಿನಯ್ ಅಪಹರಣ ಪ್ರಕರಣದಲ್ಲೂ ಈತನ ಕೈವಾಡವಿದೆ ಎಂದು ಶಂಕಿಸಲಾಗಿದೆ. ವರ್ಷಗಳ ಹಿಂದೆಯೇ ರೌಡಿ ಪಟ್ಟಿಗೆ ಸೇರಿದ್ದ ದಿನೇಶ್ ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣಗಳಲ್ಲಿ ಹಲವು ಕೊಲೆ ಪ್ರಕರಣಗಳಲ್ಲೂ ಪೊಲೀಸರಿಗೆ ಬೇಕಾಗಿದ್ದ ಆರೋಪಿಯಾಗಿದ್ದಾನೆ.
ಮನೆ ಬಿಟ್ಟು ವರ್ಷಗಳೇ ಕಳೆದಿದ್ದ ದಿನೇಶ್, ನಿರ್ಮಾಣ ಹಂತದ ಕಟ್ಟಡಗಳಲ್ಲಿ ತಂಗುವುದು, ಪೊಲೀಸರಿಗೆ ತನ್ನ ಬಗ್ಗೆ ಯಾವುದೇ ಸುಳಿವು ಸಿಗದಂತೆ ನೋಡಿಕೊಳ್ಳುವುದಲ್ಲದೆ, ಸುಪಾರಿ ಕೊಲೆ, ಕೊಲೆಯತ್ನ, ಬೆದರಿಕೆಗಳಿಂದ ಭಯದ ವಾತಾವರಣ ಸೃಷ್ಟಿಸಿದ್ದ. ಅಲ್ಲದೆ, ಆತನು ಕೇಳಿದಷ್ಟು ಹಣವನ್ನು ಎಲ್ಲರೂ ನೀಡಬೇಕಾಗಿತ್ತು ಎಂದು ತನಿಖೆಯಲ್ಲಿ ತಿಳಿದುಬಂದಿದೆ.