ಇಮ್ರಾನ್ ಖಾನ್ ಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಿ ಎಂದು ಬೇಡಿಕೆಯಿಟ್ಟ ಪಾಕಿಸ್ತಾನೀಯರು
ಇಸ್ಲಾಮಾಬಾದ್, ಮಾ.1: ತನ್ನ ವಶದಲ್ಲಿದ್ದ ಭಾರತೀಯ ವಾಯುಪಡೆಯ ಪೈಲಟ್ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರನ್ನು ಶಾಂತಿಯ ದ್ಯೋತಕವಾಗಿ ಬಿಡುಗಡೆಗೊಳಿಸಲಾಗುವುದು ಎಂದು ಗುರುವಾರ ಘೋಷಿಸಿದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ನೋಬೆಲ್ ಶಾಂತಿ ಪುರಸ್ಕಾರ ನೀಡಬೇಕೆಂಬ ಅಭಿಯಾನವನ್ನು ಪಾಕ್ ನಾಗರಿಕರು ಆರಂಭಿಸಿದ್ದಾರೆ.
ಈ ನಿಟ್ಟಿನಲ್ಲಿ ಆನ್ಲೈನ್ ಆಂದೋಲನವನ್ನು ಆರಂಭಿಸಲಾಗಿದ್ದು, ಭಾರತೀಯ ಪೈಲಟ್ ಅಭಿನಂದನ್ ಬಿಡುಗಡೆಗೊಳ್ಳುವ ಮುನ್ನವೇ ಈ ಅರ್ಜಿಗೆ ಈಗಾಗಲೇ 50,000ಕ್ಕೂ ಅಧಿಕ ಮಂದಿ ಸಹಿ ಹಾಕಿದ್ದಾರೆ. ಟ್ವಿಟರ್ ನಲ್ಲೂ #NobelPeacePrizeForImranKhan ಹ್ಯಾಶ್ ಟ್ಯಾಗ್ ಟ್ರೆಂಡಿಂಗ್ ಆಗಿದೆ.
ಪುಲ್ವಾಮ ಉಗ್ರ ದಾಳಿಯ ನಂತರ ಹಾಗೂ ಮಂಗಳವಾರದ ಭಾರತದ ವಾಯು ದಾಳಿಯ ನಂತರ ಭಾರತ ಮತ್ತು ಪಾಕಿಸ್ತಾನ ನಡುವೆ ನಿರ್ಮಾಣವಾಗಿದ್ದ ಯುದ್ಧದಂತಹ ವಾತಾವರಣ ಇಮ್ರಾನ್ ಘೋಷಣೆಯಿಂದಾಗಿ ದೂರವಾಗಿದೆ ಎಂದು ಹಲವರು ಬಣ್ಣಿಸಿದ್ದಾರೆ.
“ಅವರು (ಇಮ್ರಾನ್ ಖಾನ್) ಈ ಪ್ರದೇಶದಲ್ಲಿ ಖಾಯಂ ಶಾಂತಿ ನೆಲೆಸುವಂತಾಗಲು ಪ್ರಯತ್ನಿಸುತ್ತಿದ್ದಾರೆ ಹಾಗೂ ಉಗ್ರವಾದವನ್ನು ನಿರುತ್ತೇಜಿಸುತ್ತಿರುವ ಅವರ ಕ್ರಮವನ್ನು ಪ್ರಶಂಸಿಸಬೇಕು'' ಎಂದು ಆನ್ಲೈನ್ ಪಿಟಿಶನ್ ಹೇಳಿದೆ. ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮಾಗೆ ನೀಡಿದ ನೋಬೆಲ್ ಶಾಂತಿ ಪುರಸ್ಕಾರವನ್ನು ಇಮ್ರಾನ್ ಗೆ ನೀಡಬಹುದೇ ಎಂದು ಕಾಮಿಡಿಯನ್ ಜೆರೆಮಿ ಮೆಕ್ಲೆಲ್ಲೆನ್ ಪ್ರಶ್ನಿಸಿದ್ದಾರೆ.