ಕುಂಬಳದಾಳು ವೃದ್ಧ ಮಹಿಳೆ ಕೊಲೆ ಪ್ರಕರಣ : ಮೂವರ ಬಂಧನ

ಮಡಿಕೇರಿ,ಮಾ.1: ನಾಪೋಕ್ಲು ಪೊಲೀಸ್ ಠಾಣೆ ವ್ಯಾಪ್ತಿಯ ಕುಂಬಳದಾಳು ಗ್ರಾಮದಲ್ಲಿ ಇತ್ತೀಚೆಗೆ ನಡೆದ ಒಂಟಿ ವೃದ್ಧ ಮಹಿಳೆಯ ಕೊಲೆ ಪ್ರಕರಣವನ್ನು ಬೇಧಿಸುವಲ್ಲಿ ಜಿಲ್ಲಾ ಅಪರಾಧ ಪತ್ತೆದಳ ಹಾಗೂ ಮಡಿಕೇರಿ ಗ್ರಾಮಾಂತರ ಪೊಲೀಸರು ಯಶಸ್ವಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವ ಮಹಿಳೆ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಕುಶಾಲನಗರ ಗೊಂದಿ ಬಸವನಹಳ್ಳಿ ನಿವಾಸಿ ಸುಬ್ರಮಣಿ (24) ಮುಳ್ಳುಸೋಗೆಯ ಪಾಕ ಮುಕ್ಕಾಟಿ ಮದನ್ (20) ಹಾಗೂ ಗೊಂದಿಬಸವನಹಳ್ಳಿಯ ಕಾವ್ಯ ಅಲಿಯಾಸ್ ಶ್ವೇತಾ ಎಂದು ಗುರುತಿಸಲಾಗಿದೆ.
ಕುಂಬಳದಾಳು ಗ್ರಾಮದ ಕೆ. ರಾಧಾ(72) ಎಂಬವರನ್ನು ಫೆ.21ರಂದು ಯಾರೋ ಕೊಲೆ ಮಾಡಿ ಆಕೆಯ ಬಳಿ ಇದ್ದ 3ಲಕ್ಷ ರೂ. ಬೆಲೆಬಾಳುವ ಚಿನ್ನದ ಒಡವೆಗಳನ್ನು ಲೂಟಿ ಮಾಡಿರುವ ಬಗ್ಗೆ ನಾಪೋಕ್ಲು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಪ್ರಕರಣವನ್ನು ಪತ್ತೆ ಮಾಡುವ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಡಿ.ಪೆನ್ನೇಕರ್ ಹಾಗೂ ಮಡಿಕೇರಿ ಉಪ ಅಧೀಕ್ಷಕ ಸುಂದರರಾಜ್ ಅವರ ಮಾರ್ಗದರ್ಶನದಲ್ಲಿ ಅಪರಾಧ ಪತ್ತೆದಳದ ನಿರೀಕ್ಷರು ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕರ ನೇತೃತ್ವದಲ್ಲಿ ಎರಡು ತಂಡಗಳನ್ನು ರಚಿಸಲಾಗಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಕಲೆಹಾಕಿದ ಅಪರಾಧ ಪತ್ತೆದಳದ ತಂಡ ಹಾಗೂ ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷರ ತಂಡ ಪ್ರಮುಖ ಆರೋಪಿ ಸುಬ್ರಮಣಿ, ಮಧು ಹಾಗೂ ಕಾವ್ಯ ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಆರೋಪಿ ಸುಬ್ರಮಣಿಗಿದ್ದ ಹಣದ ಮುಗ್ಗಟ್ಟೇ ಈ ಕೃತ್ಯ ಎಸಗಲು ಕಾರಣ ಎಂಬ ಅಂಶ ಬಯಲಾಯಿತು.
ರಾಧಾ ಅವರ ಕಾಫಿ ತೋಟದಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಸುಬ್ರಮಣಿ ಅವರ ಮನೆಯ ಆಗುಹೋಗುಗಳನ್ನು ಗಮನಿಸಿ, ತನ್ನ ಸ್ನೇಹಿತ ಮಧುವಿನೊಂದಿಗೆ ಸೇರಿ ಫೆ.21ರಂದು ಸಂಜೆ ರಾಧಾ ಅವರು ಮನೆಯಲ್ಲಿ ಒಬ್ಬರೇ ಇರುವುದನ್ನು ಖಾತ್ರಿಪಡಿಸಿಕೊಂಡಿದ್ದಲ್ಲದೆ, ಅವರ ಮನೆಯನ್ನು ಪ್ರವೇಶಿಸಿ, ಅಡುಗೆ ಮನೆಯಲ್ಲಿದ್ದ ರಾಧಾ ಅವರ ಹಿಂದಿನಿಂದ ಹೋಗಿ ಕತ್ತು ಹಿಸುಕಿ ಕೊಲೆ ಮಾಡಿ, ಯಾರಿಗೂ ಅನುಮಾನ ಬಾರದಂತೆ ಆಕೆಯನ್ನು ಎತ್ತಿ ಹಾಸಿಗೆಯ ಮೇಲೆ ಮಲಗಿಸಿ ಗಾಡ್ರೆಜ್ ಬೀರುವಿನಲ್ಲಿಟ್ಟಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿ ಪರಾರಿಯಾಗಿದ್ದರು ಎಂಬುದು ತನಿಖೆಯ ವೇಳೆ ಬಹಿರಂಗಗೊಂಡಿದೆ.
ಸುಬ್ರಮಣಿಯ ಅಕ್ಕ ಕಾವ್ಯಳ ಸಹಾಯದಿಂದ ಆ ಒಡವೆಗಳನ್ನು ಮಾರಾಟ ಮಾಡಿರುವ ಅಂಶವೂ ಬೆಳಕಿಗೆ ಬಂದಿದೆ.
ಕಾರ್ಯಾಚರಣೆಯಲ್ಲಿ ಅಪರಾಧ ಪತ್ತೆ ದಳದ ನಿರೀಕ್ಷಕ ಎಂ.ಮಹೇಶ್, ಗ್ರಾಮಾಂತರ ವೃತ್ತ ನಿರೀಕ್ಷಕ ಸಿದ್ದಯ್ಯ, ಮಡಿಕೇರಿ ನಗರ ಠಾಣಾಧಿಕಾರಿ ಷಣ್ಮುಗಂ, ಗ್ರಾಮಾಂತರ ಠಾಣಾಧಿಕಾರಿ ಚೇತನ್, ನಾಪೋಕ್ಲು ಠಾಣಾಧಿಕಾರಿ ನಂಜುಂಡಸ್ವಾಮಿ, ಅಪರಾಧ ಪತ್ತೆದಳದ ಎಎಸ್ಐ ಕೆ.ವೈ.ಹಮೀದ್, ಸಿಬ್ಬಂದಿಗಳಾದ ಬಿ.ಎಲ್.ಯೋಗೇಶ್ಕುಮಾರ್, ಎಂ.ಎನ್. ನಿರಂಜನ್, ಕೆ.ಎಸ್.ಅನಿಲ್ಕುಮಾರ್, ಕೆ.ಆರ್. ವಸಂತ ಸುಮತಿ, ವಿ.ಜಿ.ವೆಂಕಟೇಶ್, ಮಡಿಕೇರಿ ನಗರ ಠಾಣೆ ಸಿಬ್ಬಂದಿಗಳಾದ ದಿನೇಶ್, ಮಧು, ಫ್ರಾನ್ಸಿಸ್, ಗ್ರಾಮಾಂತರ ಠಾಣೆ ಸಿಬ್ಬಂದಿಗಳಾದ ಇಬ್ರಾಹಿಂ, ಶಿವರಾಜು, ಸಿಡಿಆರ್ ಸೆನ್ನ ರಾಜೇಶ್, ಗಿರೀಶ್, ಚಾಲಕರಾದ ಕೆ.ಎಸ್. ಶಶಿಕುಮಾರ್, ಅರುಣ್, ಸುನಿಲ್ ಅವರುಗಳು ಪಾಲ್ಗೊಂಡಿದ್ದರು.







