ಇವತ್ತಿನ ತಲ್ಲಣಗಳಿಗೆ ನವೋದಯದ ಚಿಂತನೆಗಳಲ್ಲಿ ಮಾರ್ಗೋಪಾಯ: ಪ್ರೊ.ಸಿ.ಎನ್.ರಾಮಚಂದ್ರನ್
ಬೆಂಗಳೂರು, ಮಾ.3: ಇವತ್ತಿನ ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ತಲ್ಲಣಗಳಿಗೆ ನವೋದಯ ಸಾಹಿತಿಗಳ ಚಿಂತನೆಗಳಲ್ಲಿ ಮಾರ್ಗೋಪಾಯಗಳು ಕಂಡುಕೊಳ್ಳಲು ಸಾಧ್ಯವಿದೆ ಎಂದು ಹಿರಿಯ ವಿಮರ್ಶಕ ಪ್ರೊ.ಸಿ.ಎನ್.ರಾಮಚಂದ್ರನ್ ತಿಳಿಸಿದರು.
ರವಿವಾರ ನಗರದ ಬಿಎಂಶ್ರೀ ಸಭಾಂಗಣದಲ್ಲಿ ಆಯೋಜಿಸಿದ್ದ ಬಿ.ಎಚ್.ಶ್ರೀಧರರರ ಸಾಹಿತ್ಯಾವಲೋಕನ ಮತ್ತು ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನವೋದಾಯದ ಕಾಲಘಟ್ಟವು ಮಾತೃಭಾಷೆ, ರಾಷ್ಟ್ರಭಾಷೆ, ಆಧುನಿಕತೆಯನ್ನು ಎದುರುಗೊಂಡು ಎಲ್ಲವನ್ನು ಏಕಕಾಲದಲ್ಲೆ ಸ್ವೀಕರಿಸಲೇಬೇಕಾದ ಅನಿವಾರ್ಯ ಪರಿಸ್ಥಿತಿಯಲ್ಲಿ ಹಾದು ಬಂದಿದೆ. ಇವತ್ತಿಗೂ ಅದೇ ಪರಿಸ್ಥಿತಿ ಇರುವುದರಿಂದ ನವೋದಯದ ಚಿಂತನೆಗಳನ್ನು ಮರು ವಿಮರ್ಶಿಸಿಕೊಳ್ಳಬೇಕಾದ ಸಂದರ್ಭ ಬಂದಿದೆ ಎಂದು ತಿಳಿಸಿದರು.
ನವೋದಯ ಸಾಹಿತ್ಯದ ಪ್ರಮುಖ ಚಿಂತಕರೆಂದರೆ ಕುವೆಂಪು, ಗೋಕಾಕ್, ಶಿವರಾಮಕಾರಂತರ, ಆನಾಕೃ, ಬಿ.ಎಚ್.ಶ್ರೀಧರ ಸೇರಿದಂತೆ ಹಲವು ಸಾಹಿತಿಗಳು ಬರುತ್ತಾರೆ. ಇವರೆಲ್ಲರೂ ನವೋದಯದ ಚಿಂತಕರಾದರೂ, ಇವರು ಸಾಗಿ ಬಂದ ದಾರಿಗಳು ಭಿನ್ನವಾಗಿದೆ. ಕೆಲವರು ಇಂಗ್ಲಿಷ್ ಭಾಷೆಯನ್ನು ಮುಕ್ತವಾಗಿ ಸ್ವಾಗತಿಸಿದರೆ, ಕೆಲವರು ಇಂಗ್ಲಿಷನ್ನು ಸರಾಸಗಟಾಗಿ ತಿರಸ್ಕರಿಸಿದರು. ಹೀಗಾಗಿ ಇವೆರಲ್ಲರ ಚಿಂತನೆಗಳನ್ನು ಸಾಮಾಜಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಹಿನ್ನೆಲೆಯಲ್ಲಿ ಮರು ವಿಮರ್ಶಿಸುವ ಮೂಲಕ ಇವತ್ತಿನ ಸಮಸ್ಯೆಗಳಿಗೆ ಪರಿಹಾರಗಳನ್ನು ಹುಡುಕಿಕೊಳ್ಳಲು ಪ್ರಯತ್ನಿಸಬೇಕು ಎಂದು ಅವರು ಹೇಳಿದರು.
ಇವತ್ತಿನ ಸಮಾಜವು ಕಾರ್ಪೊರೇಟ್ ವಲಯದ ಹಿಡಿತದಿಂದ ಎಲ್ಲವೂ ಏಕಮುಖಿಯತ್ತ ಸಾಗುತ್ತಿದೆ. ಇಂತಹ ಹೊತ್ತಿನಲ್ಲಿ ಬಹು ಧ್ವನಿ, ಬಹತ್ವಗಳನ್ನು ಉಳಿಸಿಕೊಳ್ಳುವತ್ತ ನಾವು ಹೆಜ್ಜೆ ಇಡಬೇಕಾಗಿದೆ. ಹೀಗಾಗಿ ನವೋದಯದಲ್ಲಿರುವ ಜೀವಪರವಾದ ಅಂಶಗಳನ್ನು ಅಳವಡಿಸಿಕೊಂಡು ಮುನ್ನಡೆಯಬೇಕಾದ ಅಗತ್ಯವಿದೆ ಎಂದು ಅವರು ಅಭಿಪ್ರಾಯಿಸಿದರು.