ಎಷ್ಟು ಮಂದಿ ಸತ್ತಿದ್ದಾರೆಂದು ನಾವು ಲೆಕ್ಕ ಹಾಕಿಲ್ಲ: ಐಎಎಫ್ ಮುಖ್ಯಸ್ಥ ಧನೋವಾ
ಉಗ್ರತಾಣಗಳ ಮೇಲೆ ವಾಯುಪಡೆಯ ದಾಳಿ

ಹೊಸದಿಲ್ಲಿ, ಮಾ.4: ಪಾಕಿಸ್ತಾನದ ಬಾಲಕೋಟ್ನಲ್ಲಿ ಭಯೋತ್ಪಾದಕರ ನೆಲೆಯ ಮೇಲೆ ವಾಯುಪಡೆ ನಡೆಸಿದ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಸತ್ತಿದ್ದಾರೆ ಎಂದು ವಾಯುಪಡೆ ಲೆಕ್ಕ ಹಾಕುತ್ತಾ ಕೂರಲಾಗದು. ಈ ಬಗ್ಗೆ ಸರಕಾರ ಮಾಹಿತಿ ನೀಡುತ್ತದೆ ಎಂದು ವಾಯುಪಡೆ ಮುಖ್ಯಸ್ಥ ಏರ್ಚೀಫ್ ಮಾರ್ಷಲ್ ಬಿಎಸ್ ಧನೋವಾ ಹೇಳಿದ್ದಾರೆ.
ಎಷ್ಟು ಮಂದಿ ಸತ್ತಿದ್ದಾರೆ ಎಂದು ನಾವು ಲೆಕ್ಕ ಹಾಕಲಾಗದು. ಅಲ್ಲಿ ಎಷ್ಟು ಮಂದಿ ಇದ್ದರು ಎಂಬುದನ್ನು ಅದು ಅವಲಂಬಿಸಿರುತ್ತದೆ ಎಂದು ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಧನೋವಾ ಹೇಳಿದರು. ಬಾಲಕೋಟ್ನ ಉಗ್ರರ ಶಿಬಿರದ ಮೇಲೆ ವಾಯುಪಡೆಯ ವಿಮಾನ ನಡೆಸಿದ್ದ ದಾಳಿ ಗುರಿ ತಪ್ಪಿದೆ . ಸರಕಾರ 300ಕ್ಕೂ ಹೆಚ್ಚು ಉಗ್ರರು ಸತ್ತಿರುವುದಾಗಿ ಸುಳ್ಳು ಹೇಳುತ್ತಿದೆ ಎಂದು ಕೆಲವು ರಾಜಕೀಯ ಮುಖಂಡರು ನೀಡಿರುವ ಹೇಳಿಕೆಗಳಿಗೆ ಅವರು ಪ್ರತಿಕ್ರಿಯಿಸುತ್ತಿದ್ದರು.
ನಮಗೆ ನೀಡಲಾಗಿರುವ ಗುರಿಯ ಮೇಲೆ ದಾಳಿ ನಡೆಸಿದ್ದೇವೆಯೇ , ಇಲ್ಲವೇ ಎಂಬುದಷ್ಟೇ ನಮಗೆ ಮುಖ್ಯವಾಗಿದೆ. ನಾವು ಗುರಿಯ ಮೇಲೆ ದಾಳಿ ನಡೆಸಿದ್ದೇವೆ. ಇದರಲ್ಲಿ ಅನುಮಾನವಿಲ್ಲ. ಎಷ್ಟು ಸಾವು ನೋವು ಸಂಭವಿಸಿದೆ ಎಂಬುದು ಸರಕಾರಕ್ಕೆ ಬಿಟ್ಟ ವಿಷಯವಾಗಿದೆ . ದಾಳಿ ನಡೆಸುವ ಮುನ್ನ ಎಷ್ಟು ಗುರಿಯ ಮೇಲೆ ಬಾಂಬ್ ದಾಳಿ ನಡೆಸಬೇಕು ಎಂದು ನಿರ್ಧರಿಸಿರುತ್ತೇವೆ. ಇದನ್ನು ಸಾಧಿಸಿದ್ದೇವೆಯೇ ಎಂಬುದನ್ನು ಬಳಿಕ ಪರಿಶೀಲನೆ ನಡೆಸುತ್ತೇವೆ ಎಂದು ಧನೋವಾ ಹೇಳಿದರು.
ಯಾವ ಗುರಿ ನಿಗದಿಯಾಗಿತ್ತು ಮತ್ತು ಈ ಗುರಿಯ ಮೇಲಿನ ದಾಳಿ ಯಶಸ್ವಿಯಾಗಿದೆಯೇ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಯಾವ ಗುರಿ ನಿಗದಿಯಾಗಿತ್ತು ಎಂಬ ಬಗ್ಗೆ ವಿದೇಶ ವ್ಯವಹಾರ ಇಲಾಖೆಯ ಕಾರ್ಯದರ್ಶಿಯ ಹೇಳಿಕೆಯಲ್ಲಿ ಸ್ಪಷ್ಟವಾಗಿ ತಿಳಿಸಲಾಗಿದೆ. ಉದ್ದೇಶಿತ ಗುರಿಯ ಮೇಲೆಯೇ ಹೊಡೆದಿದ್ದೇವೆ, ಇಲ್ಲವಾದರೆ ಪಾಕಿಸ್ತಾನದವರೇಕೆ ಪ್ರತಿಕ್ರಿಯೆ ನೀಡುತ್ತಿದ್ದರು. ನಾವು ಅರಣ್ಯ ಪ್ರದೇಶಕ್ಕೆ ಬಾಂಬ್ ಹಾಕಿದ್ದರೆ ಅವರು ಪ್ರತಿಕ್ರಿಯೆ ನೀಡುವ ಅಗತ್ಯವೇ ಇರಲಿಲ್ಲ ಎಂದರು. ಈ ಮೂಲಕ ವಾಯುಪಡೆಯ ದಾಳಿ ಗುರಿ ತಪ್ಪಿದೆ ಎಂಬ ಸುದ್ದಿಯನ್ನು ಅಧಿಕೃತವಾಗಿ ತಳ್ಳಿಹಾಕಿದರು.
ಉಗ್ರರ ನೆಲೆಯ ಮೇಲಿನ ದಾಳಿ ಯಶಸ್ವಿಯಾಗಿದೆ ಎಂದು ಸರಕಾರ ಹೇಳಿಕೆ ನೀಡಿದ್ದರೂ ದಾಳಿಯಲ್ಲಿ ಎಷ್ಟು ಮಂದಿ ಉಗ್ರರು ಹತರಾಗಿದ್ದಾರೆ ಎಂಬ ಕುರಿತು ಅಧಿಕೃತವಾಗಿ ತಿಳಿಸಿಲ್ಲ. ದಾಳಿ ನಡೆದ ದಿನದಂದು ಸುದ್ದಿ ಮಾಧ್ಯಮಗಳಲ್ಲಿ 300 ಉಗ್ರರು ಸತ್ತಿರುವುದಾಗಿ ಸುದ್ದಿ ಪ್ರಸಾರವಾಗಿತ್ತು. ಬಳಿಕ ಹೇಳಿಕೆ ನೀಡಿದ್ದ ಬಿಜೆಪಿ ಅಧ್ಯಕ್ಷ ಅಮಿತ್ ಶಾ 250 ಉಗ್ರರನ್ನು ಹತ್ಯೆ ಮಾಡಲಾಗಿದೆ ಎಂದಿದ್ದರು.
ಈಗ ಅತ್ಯಾಧುನಿಕ ಯುದ್ಧವಿಮಾನಗಳ ಯುಗವಾಗಿದ್ದರೂ ಭಾರತೀಯ ವಾಯುಪಡೆಯ ಪೈಲಟ್ಗಳು ಈಗಲೂ ಮಿಗ್-21 ಬೈಸನ್ ವಿಮಾನಗಳನ್ನು ಬಳಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ ಧನೋವಾ, ಈಗ ಪ್ರಗತಿಯಲ್ಲಿರುವ ಕಾರ್ಯಾಚರಣೆಯ ಕುರಿತು ತಾನು ಪ್ರತಿಕ್ರಿಯಿಸುವುದಿಲ್ಲ. ಮಿಗ್-21 ಬೈಸನ್ ಸಮರ್ಥ, ಸುಧಾರಿತ ಹಾಗೂ ಅತ್ಯುತ್ತಮ ಯುದ್ಧವಿಮಾನವಾಗಿದೆ ಎಂದರು.
ಅಭಿನಂದನ್ ವರ್ಧಮಾನ್ ಕರ್ತವ್ಯಕ್ಕೆ ಮರಳುವ ಕುರಿತ ಪ್ರಶ್ನೆಗೆ, ಇದು ಅವರ ಚೇತರಿಕೆಯನ್ನು ಅವಲಂಬಿಸಿದೆ. ತ್ವರಿತವಾಗಿ ಚೇತರಿಸಿಕೊಂಡರೆ ವಿಮಾನದ ಕಾಕ್ಪಿಟ್ಗೆ ತಕ್ಷಣ ಮರಳಬಹುದು. ಯುದ್ಧ ವಿಮಾನದ ಪೈಲಟ್ನ ಫಿಟ್ನೆಸ್ ವಿಷಯದಲ್ಲಿ ಯಾವುದೇ ರಿಸ್ಕ್ ತೆಗೆದುಕೊಳ್ಳಲು ನಾವು ಇಚ್ಚಿಸುವುದಿಲ್ಲ ಎಂದುತ್ತರಿಸಿದರು.
ರಫೇಲ್ ಯುದ್ಧವಿಮಾನ ಒಪ್ಪಂದದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಅವರು, ರಾಜಕೀಯ ವಿಷಯದ ಬಗ್ಗೆ ತನ್ನಲ್ಲಿ ಉತ್ತರವಿಲ್ಲ ಎಂದರು.







