ಮಧ್ವ: ಶಾಲಾ ಅಭಿವೃದ್ಧಿ ಯೋಜನೆ, ರಕ್ಷಣಾ ನೀತಿ ತರಬೇತಿ

ವಿಟ್ಲ, ಮಾ. 4 : ಪಡಿ ಸಂಸ್ಥೆ ಮಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ ಬಂಟ್ವಾಳ ಹಾಗೂ ಶಿಕ್ಷಣ ಸಂಪನ್ಮೂಲ ಕೇಂದ್ರ ಬಂಟ್ವಾಳ ಆಶ್ರಯದಲ್ಲಿ ಕಾವಳಪಡೂರು ಗ್ರಾಮ ಪಂಚಾಯತು ವ್ಯಾಪ್ತಿಯ ಮಧ್ವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಿಗೆ "ಶಾಲಾ ಅಭಿವೃದ್ಧಿ ಯೋಜನೆ ಮತ್ತು ಮಕ್ಕಳ ರಕ್ಷಣಾ ನೀತಿ ರಚನೆ" ಕುರಿತು ತರಬೇತಿ ಕಾರ್ಯಗಾರ ನಡೆಯಿತು.
ಪಡಿ ಸಂಸ್ಥೆಯ ತರಬೇತುದಾರ ಗೋಪಾಲ ಅಂಚನ್ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಶಾಲಾಭಿವೃದ್ಧಿ ಸಮಿತಿಯು ಕ್ರಿಯಾಶೀಲವಾಗಿ ಶಾಲಾ ಪ್ರಗತಿಯಲ್ಲಿ ತೊಡಗಿಸಿಕೊಳ್ಳುವ ಜತೆಯಲ್ಲಿ ಪೋಷಕರು ಮತ್ತು ಸಮುದಾಯದ ಸಹಕಾರವನ್ನು ಪಡೆದುಕೊಂಡರೆ ಸರಕಾರಿ ಶಾಲೆಗಳನ್ನು ಮಾದರಿಯಾಗಿ ಬೆಳೆಸಲು ಸಾಧ್ಯವಿದೆ ಎಂದರು.
ಶಾಲೆಯಲ್ಲಿರಬೇಕಾದ ಮೂಲಭೂತ ಸೌಲಭ್ಯಗಳು, ಸಮುದಾಯದ ಸಹಭಾಗಿತ್ವದೊಂದಿಗೆ ನಡೆಸಬಹುದಾದ ಚಟುವಟಿಕೆಗಳು, ಮಕ್ಕಳ ಕಲಿಕಾ ಗುಣಮಟ್ಟವನ್ನು ಹೆಚ್ಚಿಸುವ ತಂತ್ರಗಳು, ಮಕ್ಕಳ ಹಕ್ಕುಗಳ ರಕ್ಷಣೆ ಮತ್ತು ಕುಂದುಕೊರತೆಗಳನ್ನು ನಿವಾರಿಸುವ ಬಗ್ಗೆ ವಿವರಣೆ ನೀಡಿದರು.
ಮುಖ್ಯ ಶಿಕ್ಷಕಿ ಭವಾನಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ವಿಜಯ್, ಪಡಿ ಸಂಯೋಜಕಿ ರಾಜೇಶ್ವರಿ, ಸಹಶಿಕ್ಷಕರು, ಶಾಲಾಭಿವೃದ್ಧಿ ಸದಸ್ಯರು ಹಾಜರಿದ್ದರು.








